ADVERTISEMENT

ತೀರ್ಥಹಳ್ಳಿ: ‘ನೀಲಿ ಹೂವಿನ ನೆನಪುಗಳು’ ಕವನ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 5:19 IST
Last Updated 22 ಡಿಸೆಂಬರ್ 2025, 5:19 IST
ತೀರ್ಥಹಳ್ಳಿಯ ಕುಪ್ಪಳಿಯ ನಂದನ್‌ ಮನೆಯ ಆವರಣದಲ್ಲಿ ಭಾನುವಾರ ‘ನೀಲಿ ಹೂವಿನ ನೆನಪುಗಳು’ ಕವನ ಸಂಕಲ ಬಿಡುಗಡೆ ಮಾಡಲಾಯಿತು
ತೀರ್ಥಹಳ್ಳಿಯ ಕುಪ್ಪಳಿಯ ನಂದನ್‌ ಮನೆಯ ಆವರಣದಲ್ಲಿ ಭಾನುವಾರ ‘ನೀಲಿ ಹೂವಿನ ನೆನಪುಗಳು’ ಕವನ ಸಂಕಲ ಬಿಡುಗಡೆ ಮಾಡಲಾಯಿತು   

ತೀರ್ಥಹಳ್ಳಿ: ಪ್ರೇಮ ಸಮುದ್ರದ ಹಾಗೆ ನಿಶ್ಚಲವಾಗಿ ಕಂಡರು ಇಡೀ ಭೂಮಿಯ ಜೀವಂತಿಕೆಗೆ ಸದಾ ಕ್ರೀಯಾಶೀಲವಾಗಿರುತ್ತದೆ. ನಂದನ್‌ ಪ್ರೀತಿಯ ಕವಿತೆಗಳು ಪ್ರಕೃತಿಯೊಳಗಿನ ಆರಾಧನೆಯನ್ನು ಪ್ರಜ್ವಲಿಸುತ್ತದೆ ಎಂದು ಸಾಹಿತಿ ನೆಂಪೆ ದೇವರಾಜ್‌ ಹೇಳಿದರು.

ಭಾನುವಾರ ಕುಪ್ಪಳಿಯಲ್ಲಿ ಈಚೆಗೆ ನಿಧನರಾದ ನಂದನ್‌ ಕುಪ್ಪಳಿ ಅವರ ಎರಡನೇ ಕವನ ಸಂಕಲನ ‘ನೀಲಿ ಹೂವಿನ ನೆನಪುಗಳು’ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕದ ಕುರಿತು ಮಾತನಾಡಿ, ಆತ ಪ್ರೇಮದ ಕವಿ ಮಾತ್ರವಲ್ಲ ಪ್ರಕೃತಿ ಆರಾಧಕ ಎಂದು ಹೇಳಿದರು.

ಬುದ್ಧನ ಕಾರುಣ್ಯ, ಏಸುವಿನ ಪ್ರೀತಿ, ಗಾಂಧಿಯ ತಾಳ್ಮೆಯ ಕಡಲಾಗಿ ಕವಿತೆಗಳು ಮೂಡಿ ಬಂದಿದೆ. ಬಡತನ, ನೋವು, ಅಸಮಾನತೆಯೊಳಗೆ ಬೆಳೆದರು ಬಂಡಾಯ ಕವಿಯಾಗಿ ಆತ ಕಾಣಿಸಿಕೊಳ್ಳುವುದಿಲ್ಲ. ಪ್ರೀತಿ, ಪ್ರಕೃತಿಯನ್ನು ಆರಾಧಿಸುವ ಮೋಹಕ ಕವಿಯಾಗುತ್ತಾನೆ. ಇದು ಹೇಗೆ ಸಾಧ್ಯ ಎಂಬುದು ಬಿಡಿಸಲಾರದ ಕಗ್ಗಂಟಾಗಿದೆ ಎಂದು ಹೇಳಿದರು.

ADVERTISEMENT

ಪ್ರೇಮ, ಪ್ರೀತಿ ಅಂದಾಕ್ಷಣ ಕೇವಲ ಕಾಮ, ದಾಂಪತ್ಯದ ಆಧಾರದಲ್ಲಿ ಬಂಧಿಸಲ್ಪಟ್ಟಿರುವುದಿಲ್ಲ. ‘ಅವಳ ತುಟಿಗಳಿಗೆ ಅದೆಷ್ಟು ಬಲವಿದೆ, ಹೃದಯ ನೊಂದು ಬೆಂದರು, ಒಳಗಿನ ನಗುವಿನ ಹೂ ಅರಳಿಸುವ ಸಂಭ್ರಮ ಇದೆಯಲ್ಲ’ ಎನ್ನುವಾಗ ಪ್ರಕೃತಿ, ತಾಯಿ, ಅಪ್ಪ, ತಂಗಿ, ಅಕ್ಕ, ಅಣ್ಣ, ಅತ್ತಿಗೆ, ಗೆಳೆಯರ ಪ್ರೀತಿಯ ಕಡಲಿದೆ. ಪ್ರೇಮ ಅರಳಿಸುವ ಚೆಲುವು ಪುಸ್ತಕದಲ್ಲಿದೆ ಎಂದರು.

ಕೇವಲ 30 ವರ್ಷದ ಹುಡುಗ ಕೊಟ್ಟಿಗೆಹಾರದ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜನಾಧಿಕಾರಿಯಾಗಿ ರೂಪಿಸಿದ ಯೋಜನೆಯನ್ನು ಕರ್ನಾಟಕದ ಮುಖ್ಯಮಂತ್ರಿ ಮೆಚ್ಚಿದ್ದರು. ಯೋಜನೆಯ ವಿವರ ಪಡೆಯುತ್ತಲೇ ಸಿಎಂ ಸ್ಥಳದಲ್ಲಿಯೇ ₹ 1 ಕೋಟಿ ಅನುದಾನ ಮಂಜೂರು ಮಾಡಿದರು. ಅದನ್ನು ಕಾರ್ಯ ರೂಪಕ್ಕೆ ತರುವಾಗ ಎಂಎನ್‌ಡಿ ಕಾಯಿಲೆಗೆ ತುತ್ತಾಗಿ ನಂದನ್‌ ಹಾಸಿಗೆ ಹಿಡಿದಿದ್ದ ಎಂದು ನೆನಪಿಸಿದರು.

‘ಇಡೀ ಪುಸ್ತಕ ಕಾವ್ಯವಾಗಿ ನಿಲ್ಲುತ್ತದೆ. ಆತನೇ ಹೇಳಿಕೊಂಡಂತೆ ಭಾವ ಪ್ರಪಂಚ ಗಂಡು ಹೆಣ್ಣಿನ ಪ್ರೀತಿಯ ದ್ಯೋತಕವಾಗಿದೆ. ಕವನ ಸಂಕಲನ ರೂಪಕವಾಗಿದ್ದು ರಂಗದ ಮೇಲೆ, ದೃಶ್ಯ ರೂಪದಲ್ಲಿ ಮೂಡಿಸಲು ಅವಕಾಶ ಇದೆ. ಓದುವ ಕವಿತೆಗೆ ಅರ್ಥ ಅಂತ ಇರುವುದಿಲ್ಲ. ಕವಿತೆ ನಿಜವಾದ ಹೊಸ ಲೋಕದ ಅರ್ಥ ಮೂಡಿಸುತ್ತದೆ. ಪ್ರತಿಭೆ ಗುಡಿಸಲಲ್ಲಿ ಹುಟ್ಟುತ್ತದೆ ಎಂಬುದಕ್ಕೆ ನಂದನ್‌ ಸಾಕ್ಷಿ. ಲೌಖಿಕದ ವಿವಿಧ ಆಯಾಮಗಳನ್ನು ಪುಸ್ತಕ ತೆರೆದಿಟ್ಟಿದೆ’ ಎಂದು ನಿವೃತ್ತ ಪ್ರಾಂಶುಪಾಲ ಬಿ.ಗಣಪತಿ ಹೇಳಿದರು.

‘ನಂದನ್‌ ಜೊತೆಗಿರದಿದ್ದರು ಆತನ ವಿಚಾರಗಳನ್ನು ಹೊಂದಿರುವ ಸಾಹಿತ್ಯದ ಪ್ರೀತಿ ನಮ್ಮೊಂದಿಗೆ ಇದೆ. ಆತ ನೋವನ್ನು ಮರೆಸುವ ಕಾಣಿಕೆ ಬಿಟ್ಟು ಹೋಗಿದ್ದಾನೆ. ಮನುಷ್ಯ ಚೆನ್ನಾಗಿದ್ದಾಗ ಅಹಂಕಾರ ಮಾಡಬಾರದು. ಆರೋಗ್ಯ, ದುಡ್ಡು ಶಾಶ್ವತವಲ್ಲ. ಪ್ರೀತಿ ಎಲ್ಲರ ಮನಸ್ಸನ್ನು ಮುದಗೊಳಿಸುತ್ತದೆ’ ಎಂದು ಪ್ರಕಾಶಕ ಸುನೀಲ್‌ ಕುಮಾರ್‌ ಬಿ.ಎನ್.‌ ಹೇಳಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್‌ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ರೇಖಾಚಿತ್ರ ಕಲಾವಿದ ರಾಂಚಂದ್ರ ಕೊಪ್ಪಲು, ಸಹ ಪ್ರಾಧ್ಯಾಪಕ ಶಿವಲಿಂಗೇಗೌಡ ಡಿ, ನಂದನ್‌ ತಂದೆ ರಾಮಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.