
ನವುಲೆಯ ಕೆಎಸ್ಸಿಎ ಕ್ರೀಡಾಂಗಣದ ಹೊರಗಿರುವ ಸ್ಕೋರ್ ಬೋರ್ಡ್ ಮೇಲೆ ಕುಳಿತು ಪಂದ್ಯ ವೀಕ್ಷಿಸಿದ ಅಭಿಮಾನಿಗಳು
ಪ್ರಜಾವಾಣಿ ಚಿತ್ರಗಳು / ಕೃಷ್ಣಕುಮಾರ್ ಪಿ.ಎಸ್
ಶಿವಮೊಗ್ಗ: ಮಲೆನಾಡಿನ ಕ್ರಿಕೆಟ್ ಪ್ರಿಯರ ಐದು ವರ್ಷಗಳ ಕಾಯುವಿಕೆ ಅಂತೂ ಕೊನೆಯಾಯಿತು. ಮಳೆಯ ಆತಂಕದ ನಡುವೆಯೂ ಶನಿವಾರ ನವುಲೆಯ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ಮತ್ತು ಗೋವಾ ನಡುವಣ ರಣಜಿ ಟ್ರೋಫಿ ಪಂದ್ಯ ಆರಂಭವಾಯಿತು. ಹೆಸರಾಂತ ಕ್ರಿಕೆಟಿಗರ ಆಟವನ್ನು ಹತ್ತಿರದಿಂದ ಕಂಡು ಪ್ರೇಕ್ಷಕರು ಪುಳಕಿತರಾದರು.
ದೂರದೂರುಗಳಿಂದ ಬಂದಿದ್ದವರು ಮೈದಾನದ ಸುತ್ತ ಹಸಿರು ಹೊದ್ದು ನಿಂತಿರುವ ಮರ, ಗಿಡಗಳು ಹಾಗೂ ಅಲ್ಲಲ್ಲಿ ಹಾಕಿರುವ ಶಾಮಿಯಾನಗಳ ಕೆಳಗೆ ನಿಂತು, ಕುಳಿತು ಆಟ ಕಣ್ತುಂಬಿಕೊಂಡರು. ಕೆಲ ಯುವಕರು ಅಪಾಯವನ್ನೂ ಲೆಕ್ಕಿಸದೆ ಮೈದಾನದ ಹೊರಗೆ ಅಳವಡಿಸಲಾಗಿರುವ ದೊಡ್ಡ ಸ್ಕೋರ್ ಬೋರ್ಡ್ ಏರಿ ಆಟ ವೀಕ್ಷಿಸಿದ್ದು ವಿಶೇಷವಾಗಿತ್ತು.
ಚಿಣ್ಣರು, ಯುವಕರು, ಯುವತಿಯರು, ಮಹಿಳೆಯರು, ಪುರುಷರು ಹೀಗೆ ಎಲ್ಲಾ ವಯೋಮಾನದವರೂ ಕ್ರೀಡಾಂಗಣದ ಸುತ್ತ ನೆರೆದಿದ್ದರು. ಕರ್ನಾಟಕದ ಬ್ಯಾಟ್ಸ್ಮನ್ಗಳು ಬೌಂಡರಿ, ಸಿಕ್ಸರ್ ಸಿಡಿಸಿದಾಗ ಹರ್ಷೋದ್ಗಾರ ಮೊಳಗಿಸಿದರು. ಸಿಳ್ಳೆ, ಕೇಕೆಗಳೊಂದಿಗೆ ಹುರಿದುಂಬಿಸಿದರು.
ಪುಟಾಣಿಗಳನ್ನೂ ಜೊತೆಗೆ ಕರೆತಂದಿದ್ದ ಕೆಲ ಪೋಷಕರು ಅವರ ಕೈಹಿಡಿದು, ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕರ್ನಾಟಕದ ಬ್ಯಾಟ್ಸ್ಮನ್ಗಳು ಔಟಾದಾಗ, ಬೌಂಡರಿಯತ್ತ ಸಾಗುತ್ತಿದ್ದ ಚೆಂಡನ್ನು ಎದುರಾಳಿ ಫೀಲ್ಡರ್ಗಳು ಓಡಿಬಂದು ತಡೆದಾಗ, ನಿರಾಶ ಭಾವದಿಂದ ತಲೆ ಮೇಲೆ ಕೈಹೊತ್ತು ಕೂರುತ್ತಿದ್ದವರು ಹಾಗೂ ಗೋವಾ ಆಟಗಾರರಿಗೆ ಹಿಡಿಶಾಪ ಹಾಕುತ್ತಿದ್ದವರೂ ಕಂಡುಬಂದರು. ‘ಕಮಾನ್ ಶ್ರೇಯಸ್’..‘ಕರುಣ್ ನಾಯರ್.. ಕರುಣ್ ನಾಯರ್’ ಎಂಬ ಕರತಾಡನವೂ ಆಗಾಗ ಕಿವಿಗಪ್ಪಳಿಸುತ್ತಿತ್ತು.
‘ಏ ಇವ್ನು ಸಚಿನ್ ತೆಂಡೂಲ್ಕರ್ ಮಗನಾ?...ಅವರಪ್ಪ ನೋಡಿದ್ರೆ ಹಂಗೆ, ಇವ್ನು ನೋಡಿದ್ರೆ ಹಿಂಗ್ ಓಡ್ತಾನಲ್ಲ’ ಎಂದು ಕೆಲ ಯುವಕರು ಮಾತನಾಡಿಕೊಳ್ಳುತ್ತಿದ್ದುದೂ ಕೇಳಿಬಂತು.
ಮೊದಲ ದಿನದಾಟ ಮುಗಿದಾಗ ಪ್ರೇಕ್ಷಕರ ಕಲರವ ಕಡಿಮೆಯಾಗಿತ್ತು. ಅದಾಗಲೇ ಹೊತ್ತು ಮುಳುಗುತ್ತಿದ್ದುದರಿಂದ ಗೂಡು ಸೇರಲು ತವಕಿಸುತ್ತಿದ್ದ ಹಕ್ಕಿಗಳ ಚಿಲಿಪಿಲಿ ನಿನಾದ ಮೊಳಗುತ್ತಿತ್ತು.
ಬಸ್ ಹಿಂದೆ ಓಡಿದರು: ಸಂಜೆ ಆಟಗಾರರಿದ್ದ ಬಸ್ ಹೋಟೆಲ್ನತ್ತ ಹೊರಟಿದ್ದಾಗ ಮೈದಾನದ ಹೊರಗೆ ಕಾಯುತ್ತಾ ನಿಂತಿದ್ದ ಹುಡುಗರು ಕಿಟಕಿ ಪಕ್ಕ ಕುಳಿತಿದ್ದ ಆಟಗಾರರ ಫೋಟೊವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯಲು ಮುಂದಾದರು.
ಈ ವೇಳೆ ಬಸ್ ವೇಗವಾಗಿ ಸಾಗಿತು. ಆಗ ಹುಡುಗರು, ‘ಅಣ್ಣಾ ಒಂದ್ ಫೋಟೊ, ಅಣ್ಣಾ ಒಂದ್ ಫೋಟೊ’ ಎನ್ನುತ್ತಲೇ ಅಣತಿ ದೂರದವರೆಗೂ ಅದರ ಹಿಂದೆ ಓಡಿದರು.
ಯಾಕಣ್ಣ ಕರ್ನಾಟಕದವ್ರ ಕ್ಯಾಚ್ ಹಿಡಿತಿಯಾ?
7 ವರ್ಷಗಳ ಕಾಲ ಕರ್ನಾಟಕದ ಪರ ಆಡಿದ್ದ ವೇಗದ ಬೌಲರ್ ವಿ.ಕೌಶಿಕ್ ಈ ಬಾರಿ ಗೋವಾ ತಂಡದ ಪರ ಕಣಕ್ಕಿಳಿದಿದ್ದಾರೆ. ಶನಿವಾರ ಬೌಲಿಂಗ್ನಲ್ಲಿ ಮಿಂಚಿದ್ದ ಅವರು ಅಮೋಘ ಕ್ಷೇತ್ರ ರಕ್ಷಣೆಯ ಮೂಲಕವೂ ಗಮನ ಸೆಳೆದರು. ಚಹಾ ವಿರಾಮಕ್ಕೂ ಮುನ್ನ ಕೌಶಿಕ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಫೀಲ್ಡಿಂಗ್ಗೆ ನಿಂತಿದ್ದರು. ಅರ್ಜುನ್ ತೆಂಡೂಲ್ಕರ್ ಹಾಕಿದ 45ನೇ ಓವರ್ನ ಎರಡನೇ ಎಸೆತವನ್ನು ಕರ್ನಾಟಕದ ಆಟಗಾರ ಅಭಿನವ್ ಮನೋಹರ್ ಸಿಕ್ಸರ್ಗೆ ಅಟ್ಟಲು ಪ್ರಯತ್ನಿಸಿದರು. ಆದರೆ ಚೆಂಡು ಬೌಂಡರಿ ಗೆರೆ ಬಳಿ ಇದ್ದ ಕೌಶಿಕ್ ಅವರ ಕೈ ಸೇರಿತು. ಆಗ ಅಲ್ಲೇ ಜಾಲರಿಗೆ ಮೈತಾಕಿಸಿಕೊಂಡು ನಿಂತಿದ್ದ ಹುಡುಗರು ‘ಏ ಯಾಕಣ್ಣ ಕರ್ನಾಟಕದವ್ರ ಕ್ಯಾಚ್ ಹಿಡಿತಿಯಾ’ ಎಂದು ಪ್ರಶ್ನಿಸಿದರು. ‘ಈ ಸಲ ನೀನು ಆರ್ಸಿಬಿ ಟೀಮ್ಗೆ ಬಾರಣ್ಣಾ’ ಎಂದು ಆಹ್ವಾನವನ್ನೂ ನೀಡಿದರು. ಪಂದ್ಯದ ನಂತರ ಕೌಶಿಕ್ ಅವರನ್ನು ಈ ಬಗ್ಗೆ ಕೇಳಿದಾಗ ‘ನಾನೇನ್ ಮಾಡ್ಲಿ ಕೈಗೆ ಬಾಲ್ ಬಂದಾಗ ಹಿಡಿಲೇಬೇಕಲ್ವಾ’ ಎಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.