
ಸೊರಬ: ತಾಲ್ಲೂಕಿನಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳನ್ನು ಪುನಃ ಕರೆ ತರುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ‘ನನ್ನ ನಡೆ ಶಾಲೆ ಕಡೆ’ ಅಭಿಯಾನದಡಿ ಸಮೀಕ್ಷೆ ನಡೆಸಿ, ಅವರನ್ನು ಗುರುತಿಸಿ, ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಪ್ರಯತ್ನಕ್ಕೆ ಮುಂದಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 370 ಶಾಲೆಗಳಿವೆ. ಇವುಗಳಲ್ಲಿ 320 ಸರ್ಕಾರಿ, 24 ಅನುದಾನಿತ, 19 ಅನುದಾನ ರಹಿತ ಹಾಗೂ 6 ಇತರೆ ಶಾಲೆಗಳು. ಈಗಾಗಲೇ ನಡೆಸಿರುವ ಸಮೀಕ್ಷೆಯಲ್ಲಿ ತಾಲ್ಲೂಕಿನಲ್ಲಿ ಒಟ್ಟು 312 ವಿದ್ಯಾರ್ಥಿಗಳು ಶಾಲೆ ತೊರೆದಿರುವುದು ಗೊತ್ತಾಗಿದೆ. ಇದರಲ್ಲಿ 52 ಗಂಡು ಹಾಗೂ 24 ಹೆಣ್ಣು ಮಕ್ಕಳನ್ನು ಮರಳಿ ಕರೆತರಲಾಗಿದೆ. ಉಳಿದವರನ್ನು ಕರೆತರಲು ನ. 14ರಿಂದ 24ರವರೆಗೆ ಪುನರ್ ಸಮೀಕ್ಷೆ ನಡೆಸಲು ಇಲಾಖೆ ಹಾಗೂ ಶಾಲಾ ಸುಧಾರಣಾ ಸಮಿತಿ ಮುಂದಾಗಿದೆ.
‘ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವುದು ಈ ಅಭಿಯಾನದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳು ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಪೋಷಕರ ಮನವೊಲಿಸುತ್ತಿದ್ದಾರೆ. ತಾಲ್ಲೂಕಿನ 25 ಕ್ಲಸ್ಟರ್ ಮಟ್ಟದ ಸಿ.ಆರ್.ಪಿ.ಗಳಿಗೆ ತರಬೇತಿ ನೀಡಲಾಗಿದೆ. ಸಿ.ಆರ್.ಪಿ ಹಾಗೂ ಶಿಕ್ಷಕರು ಸಮೀಕ್ಷೆ ನಡೆಸಿ, ಗ್ರಾಮ ಹಾಗೂ ವಾರ್ಡ್ಗಳ ಪಟ್ಟಿ ಸಿದ್ಧಪಡಿಸಿ, ಅದರನ್ವಯ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಲಿದ್ದಾರೆ’ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ದಯಾನಂದ ಕಲ್ಲೇರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ರಾಜ್ಯದಲ್ಲೇ ಮೊದಲ ಬಾರಿಗೆ ಶಿಕ್ಷಣ ಇಲಾಖೆಯ ಪ್ರಗತಿಗಾಗಿ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಸುಧಾರಣಾ ಸಮಿತಿ ರಚಿಸಿದ್ದು, ಸಮಿತಿಯು ಶಾಲೆ ಹಾಗೂ ವಿದ್ಯಾರ್ಥಿಗಳ ಸವಲತ್ತುಗಳ ಬಗ್ಗೆ ಗಮನಹರಿಸುತ್ತಿದೆ. ಶಾಲೆ ತೊರೆದ 6ರಿಂದ 14 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಗುರುತಿಸಿ ಮರಳಿ ಕರೆತರುವ ಜವಾಬ್ದಾರಿ ವಹಿಸಿಕೊಂಡಿದೆ’ ಎಂದು ತಾಲ್ಲೂಕು ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್ ತಿಳಿಸಿದರು.
ತಾಲ್ಲೂಕಿನ ಪ್ರತಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಂದ ಇದೇ ನ.14ರಿಂದ 24 ರವರೆಗೆ ಶಾಲೆ ತೊರೆದ ಮಕ್ಕಳ ಸಮೀಕ್ಷೆ ನಡೆಸಲು ಇಲಾಖೆ ಸಿದ್ಧತೆ ನಡೆಸಿದೆಆರ್.ಪುಷ್ಪಾ ಕ್ಷೇತ್ರ ಶಿಕ್ಷಣಾಧಿಕಾರಿ ಸೊರಬ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.