
ಶಿಕಾರಿಪುರ: ಆಧುನಿಕ ಜೀವನ ಶೈಲಿಯಿಂದ ಎಲ್ಲರಲ್ಲೂ ಸಾಮಾನ್ಯವಾಗುತ್ತಿರುವ ಮಾನಸಿಕ ಒತ್ತಡ ನಿಯಂತ್ರಣಕ್ಕೆ ಸಂಗೀತ ಕೇಳುವಿಕೆ ಶಾಂತಿ ಸಮಾಧಾನ ಒದಗಿಸುತ್ತದೆ ಎಂದು ವೈದ್ಯ ಕೆ.ಎಂ.ಸುನಿಲ್ಕುಮಾರ್ ಹೇಳಿದರು.
ಪಟ್ಟಣದ ಜೈನ ಮಂದಿರದಲ್ಲಿ ಶನಿವಾರ ಸುನಾದ ಸಂಗೀತ ವಿದ್ಯಾಲಯದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಗೀತ ಎಂದರೆ ಅದು ಅಬ್ಬರ ಎನ್ನುವ ಕಲ್ಪನೆ ಇದ್ದು, ಅದು ಮನಸ್ಸಿನ ಒತ್ತಡ ಇನ್ನಷ್ಟು ಹೆಚ್ಚಿಸುತ್ತದೆ. ಸುಗಮ ಸಂಗೀತ ಮನಸ್ಸಿನ ಒತ್ತಡ ತಗ್ಗಿಸುವ ಜತೆ ಜೀವನಕ್ಕೊಂದು ಸುಂದರ ಆಯಾಮ ನೀಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಂಗೀತ ಕಲಿಯಬೇಕು. ಅದು ಒತ್ತಡದೊಂದಿಗೆ ಉತ್ತಮ ಬದುಕು ರೂಪಿಸುವುದಕ್ಕೆ ಕಾರಣವಾಗುತ್ತದೆ ಎಂದರು.
ಓದು ಓದು ಎನ್ನುವ ಒತ್ತಡ ಮಕ್ಕಳಲ್ಲಿ ಹೆಚ್ಚುತ್ತಿರುವ ಈ ದಿನಗಳಲ್ಲಿ ಸುನಾದ ಸಂಗೀತ ಸಂಸ್ಥೆ ವಿದ್ಯಾರ್ಥಿಗಳಿಗೆ ಸಂಗೀತ ಕಲಿಸುವ ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅಂಕ ಗಳಿಕೆಗೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಬದಲಿಗೆ ಸಾಹಿತ್ಯ, ಸಂಗೀತ, ಜನಪದ ಕಲಿಕೆಗೆ ಮಕ್ಕಳ ಮೇಲೆ ಒತ್ತಡ ಹೇರುವುದು ಇಂದಿನ ಅಗತ್ಯವಾಗಿದೆ ಎಂದು ಅಶ್ವಿನ್ಕುಮಾರ್ ಶೆಟ್ಟಿ ಹೇಳಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನರ ಮನಸ್ಸಿಗೆ ಮುದ ನೀಡಿತು. ‘ಸರಿಗಮಪ’ ಸ್ಪರ್ಧಿ ಎನ್.ಎಸ್.ಸುಮೇದ, ಶಿಕ್ಷಕ ಮಂಜು, ಭರತನಾಟ್ಯ ಶಿಕ್ಷಕಿ ಶಾಂತ ಉಳ್ಳಿ, ಸುನಾದ ಸಂಸ್ಥೆಯ ಪೃಥ್ವಿರಾಜ್, ಶೃತಿ, ಅಮೃತ ಗಿರಿಧರ, ಅಶ್ವಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.