
ಶಿಕಾರಿಪುರ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸರ್ವರ್ ಸಮಸ್ಯೆ ಕಾರಣಕ್ಕೆ ತಾಲ್ಲೂಕಿನಲ್ಲಿ ಪಡಿತರ ವಿತರಣೆ ವಿಳಂಭವಾಗುತ್ತಿದ್ದು, ಪಡಿತರ ಅಕ್ಕಿ ಪಡೆಯಲು ಜನಸಾಮಾನ್ಯರು ಸರತಿಯಲ್ಲಿ ಕಾಯುವ ಸ್ಥಿತಿ ನಿರ್ಮಾಣಗೊಂಡಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸರ್ವರ್ 15 ದಿನಗಳಿಂದ ಸ್ಲೋ ಆಗಿದೆ. ಪಟ್ಟಣದ ಪಡಿತರ ಅಂಗಡಿಯಲ್ಲಿ ಈ ಹಿಂದೆ ನಿತ್ಯ 200ಕ್ಕೂ ಹೆಚ್ಚು ಜನ ಅಕ್ಕಿ ಪಡೆಯುತ್ತಿದ್ದರೆ, ಇದೀಗ 50 ಜನಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಡಿಸೆಂಬರ್ ತಿಂಗಳ ಅಂತ್ಯಕ್ಕೆ ನಾಲ್ಕು ದಿನ ಬಾಕಿ ಇದ್ದು, ಎಲ್ಲರೂ ಪಡಿತರ ಪಡೆಯುವುದು ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.
ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತಿದ್ದ ವೆಬ್ಸೈಟ್ ಇದೀಗ ಸರ್ವರ್ ಸಮಸ್ಯೆ ಕಾರಣಕ್ಕೆ ಬೆಳಗ್ಗೆ 7 ರಿಂದ ರಾತ್ರಿ 10ರ ವರೆಗೆ ಸಮಯ ಬದಲಾವಣೆ ಮಾಡಲಾಗಿದೆ. ಬಯೋಮೆಟ್ರಿಕ್ ಮೂಲಕ ದಿನವೊಂದಕ್ಕೆ 50 ಜನರಿಗೆ ಅಕ್ಕಿ ನೀಡುವುದಕ್ಕೆ ಸಾಧ್ಯವಾದರೆ, ಐರಿಸ್ ಸ್ಕ್ಯಾನರ್ ಸಾಧನ ಬಳಸಿದರೆ 100 ಜನರಿಗೆ ಮಾತ್ರ ಪಡಿತರ ವಿತರಿಸಲು ಆಗುತ್ತಿದೆ.
ಪಡಿತರ ಪಡೆಯುವುದಕ್ಕೆ ಕೂಲಿ ಕೆಲಸ ಬಿಟ್ಟು ಸರತಿಯಲ್ಲಿ ನಿಲ್ಲುವಂತಾಗಿದೆ. ಕೂಲಿಯೂ ಇಲ್ಲ ಅಕ್ಕಿಯೂ ಸಿಗುತ್ತಿಲ್ಲ ಎಂದು ಶಿಲ್ಪಾ ಎಂಬುವರು ಅಳಲು ತೋಡಿಕೊಂಡರು.
ರಾಜ್ಯಮಟ್ಟದ ಸಮಸ್ಯೆ ಇದಾಗಿದ್ದು ಸರಿಪಡಿಸುವ ಕೆಲಸ ನಿತ್ಯ ಆಗುತ್ತಿದೆ. ಸಮಸ್ಯೆ ಪರಿಹಾರಕ್ಕೆ ಸಮಯ ಬದಲಾವಣೆ ಮಾಡಿದ್ದು ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.- ಅವಿನ್ ಉಪನಿರ್ದೇಶಕರು ಆಹಾರ ಇಲಾಖೆ ಶಿವಮೊಗ್ಗ
ನಿತ್ಯ ಮನೆ ಕೆಲಸಕ್ಕೆ ಹೋಗುತ್ತಿದ್ದು ಅರ್ಧದಿನದ ಕೂಲಿ ಬಿಟ್ಟು ಅಕ್ಕಿಗಾಗಿ ಕಾಯ್ದರೂ ಅಕ್ಕಿ ಸಿಗದೆ ವಾಪಸ್ ಆಗಿದ್ದು ರಾತ್ರಿ 9ಕ್ಕೆ ಅಕ್ಕಿ ಪಡೆದಿದ್ದೇನೆ.ಭಾರತಿ ಚನ್ನಕೇಶವ ನಗರ ಶಿಕಾರಿಪುರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.