ಶಿವಮೊಗ್ಗ: ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರ ಒಟ್ಟು ಆಸ್ತಿ ₹ 6.65 ಕೋಟಿ. ಇದು ಅವರ ಆದಾಯದ ಶೇ 400ರಷ್ಟು ಅಧಿಕ ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದ ಚಾಲುಕ್ಯ ನಗರ ಹಾಗೂ ಗೋಪಾಳದ ಅವರ ಮನೆಗಳ ಮೇಲೆ ಗುರುವಾರ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು 9.4 ಕೆ.ಜಿ. ಚಿನ್ನಾಭರಣ ಹಾಗೂ ಚಿನ್ನದ ಬಿಸ್ಕತ್, 3 ಕೆ.ಜಿ. ಬೆಳ್ಳಿ, 4 ನಿವೇಶನಗಳು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಣಿಗೆರೆಯಲ್ಲಿ 8 ಎಕರೆ ಕೃಷಿ ಭೂಮಿ, ₹ 15.94 ಲಕ್ಷ ನಗದು, ₹ 20 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು, 2 ಕಾರು, 3 ದ್ವಿಚಕ್ರ ವಾಹನಗಳನ್ನು ಪಟ್ಟಿ ಮಾಡಿದ್ದರು.
ಖಾಲಿ ಲಾಕರ್: ನಗರದ ಎಸ್ಬಿಐ ಬ್ಯಾಂಕ್ಗೆ ಶುಕ್ರವಾರ ರುದ್ರೇಶಪ್ಪ ಅವರನ್ನು ಕರೆತಂದ ಅಧಿಕಾರಿಗಳು ಲಾಕರ್ಗಳನ್ನು ಪರಿಶೀಲಿಸಿದರು. ಆದರೆ, ಲಾಕರ್ನಲ್ಲಿ ಯಾವುದೇ ಹಣ, ಒಡವೆ, ದಾಖಲೆಗಳು ಇರಲಿಲ್ಲ.
ಡಿ.7ರವರೆಗೆ ನ್ಯಾಯಾಂಗ ಬಂಧನ: ಎಸಿಬಿ ಅಧಿಕಾರಿಗಳು ರುದ್ರೇಶಪ್ಪ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಮೊದಲನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಡಿ.7ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.