ಶಿವಮೊಗ್ಗ: ಸಾರಿಗೆ ನೌಕರರ ಬೇಡಿಕೆ ಈಡೇರಿಸಬೇಕು. ವಿದ್ಯಾರ್ಥಿಗಳಿಗೆ ಬಸ್ಪಾಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ಸದಸ್ಯರು ಶನಿವಾರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು
ಪ್ರತಿಭಟನೆ ನಡೆಸಿದರು.
ನಾಲ್ಕು ದಿನಗಳಿಂದ ಕೆಎಸ್ಆರ್ಟಿಸಿ ನೌಕರರು 6ನೇ ವೇತನ ಆಯೋಗ ಶಿಫಾರಸು ಜಾರಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಈ ಮುಷ್ಕರದಿಂದಾಗಿ ಪ್ರಯಾಣಿಕರಿಗೆ ಅದರಲ್ಲೂ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಸರ್ಕಾರಿ ಬಸ್ ಇಲ್ಲದ ಕಾರಣ ಖಾಸಗಿ ಬಸ್ ಹಾಗೂ ಇತರೆ ವಾಹನಗಳ ಮಾಲೀಕರು ದುಪ್ಪಟ್ಟು ದರ ನಿಗದಿ ಮಾಡಿದ್ದಾರೆ.
ಗ್ರಾಮಾಂತರ ಹಾಗೂ ಇತರೆ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ದೈನಂದಿನ ಶಾಲಾ, ಕಾಲೇಜುಗಳ ತರಗತಿಗಳಿಗೆ ಗೈರು ಹಾಜರಾಗುತ್ತಿದ್ದಾರೆ. ಈಗಾಗಲೇ ಕೋವಿಡ್ ಪರಿಣಾಮ ಶಾಲಾ–ಕಾಲೇಜುಗಳಲ್ಲಿ ತರಗತಿ ನಡೆಯುವುದು ತೀರಾ ವಿರಳವಾಗಿದೆ. ಎಸ್ಸೆಸ್ಸೆಲ್ಸಿ ಪಿಯು ಪರೀಕ್ಷೆಗಳು ಸಮೀಪಿಸುತ್ತಿವೆ.
ಪದವಿ ಪರೀಕ್ಷೆ ಈಗಾಗಲೇ ಆರಂಭವಾಗಿವೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ, ಸಾರ್ವಜನಿಕರ ಅನುಕೂಲಕ್ಕಾಗಿ ನೌಕರರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಡಿ.ಆರ್.ಗಿರೀಶ್, ಕೃಷ್ಣನಾಯ್ಕ, ಉಷಾ ನಾಯ್ಕ, ಪರಮೇಶ್ವರ ನಾಯ್ಕ, ಪರ್ಯಾನಾಯ್ಕ ಭಾಗವಹಿಸಿದ್ದರು.
ಮುಂದುವರಿದ ಮುಷ್ಕರ: ಪ್ರಯಾಣಿಕರ ಹೆಚ್ಚಳ
ಕೆಎಸ್ಆರ್ಟಿಸಿ ನೌಕರರ ಮುಷ್ಕರ ನಾಲ್ಕನೇ ದಿನವೂ ಮುಂದುವರಿಯಿತು. ಖಾಸಗಿ ಬಸ್ಗಳು ಸೇವೆ ಪಡೆದು ಜನರು ಪ್ರಯಾಣಿಸಿದರು. ಕೆಲವು ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗೆ ಇಳಿದಿದ್ದವು. ವಾರಾಂತ್ಯ ರಜಾದಿನಗಳಾದ ಕಾರಣ ಖಾಸಗಿ ಬಸ್ಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.