
ಶಿವಮೊಗ್ಗ: ಎಲ್ಲರೂ ಸರಳ ಬದುಕಿಗೆ ಮರಳಬೇಕಾದ ಅನಿವಾರ್ಯತೆ ಆಂದೋಲನ ಸ್ವರೂಪದಲ್ಲಿ ನಡೆಯಬೇಕಾಗಿದೆ ಎಂದು ಜನ ಶಿಕ್ಷಣ ಸಂಸ್ಥೆ ನಿರ್ದೇಶಕಿ ಎಸ್.ವೈ.ಅರುಣಾದೇವಿ ಪ್ರತಿಪಾದಿಸಿದರು.
ನಗರದ ಕರ್ನಾಟಕ ಸಂಘದಲ್ಲಿ ಸಾಗರದ ಹೆಗ್ಗೋಡು-ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘವು ಹಮ್ಮಿಕೊಂಡಿರುವ ಮೂರು ದಿನಗಳ ನೈಸರ್ಗಿಕ ಬಣ್ಣದ ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಹವಾಮಾನ ಬದಲಾವಣೆಯಿಂದ ನಾವು ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿದೆ. ಸರಳ ಬದುಕಿಗೆ, ಪ್ರಕೃತಿಗೆ ನಾವು ಮರಳದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ ಎಂದರು.
ನೈಸರ್ಗಿಕ ಬಟ್ಟೆ ಮತ್ತು ಬಣ್ಣ ಭವಿಷ್ಯದ ಉದ್ಯಮವಾಗಿದ್ದು, ಇದು ಪ್ರಕೃತಿ ಉಳಿಸುವ ನಮ್ಮೆದುರಿನ ದೊಡ್ಡ ಅಸ್ತ್ರವೂ ಹೌದು ಎಂದು ವಿಶ್ಲೇಷಿಸಿದರು. ಶುದ್ಧ ಹತ್ತಿ ಬಟ್ಟೆ ಎಂಬುದು ಈಗ ಮಾರುಕಟ್ಟೆಯಲ್ಲಿ ಕಾಣದಾಗಿದೆ. ಚರಕ ಉತ್ಪಾದಿಸುವ ಬಟ್ಟೆ ಶುದ್ಧ, ಶುಭ್ರವಾಗಿದ್ದು, ಅದಕ್ಕೆ ಮುಂದೆ ಚಿನ್ನದ ಬೆಲೆ ಸಿಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದರು.
ಸಂಸ್ಕೃತಿ ಚಿಂತಕ ಪ್ರೊ.ರಾಜೇಂದ್ರ ಚೆನ್ನಿ ಮಾತನಾಡಿ, ಚರಕ ಕೇವಲ ವಸ್ತು ಅಲ್ಲ. ಭಾರತೀಯ ಇತಿಹಾಸದಲ್ಲಿ ಅದಕ್ಕೆ ದೊಡ್ಡ ಪಾತ್ರವಿದೆ. ಗಾಂಧೀಜಿ ಅವರು ಚರಕ ಕೊಡಿ- ಸ್ವರಾಜ್ಯ ಕೊಡುವೆ ಎಂದು ಹೇಳಿ ಜನರನ್ನು ಸಂಘಟಿಸಿದ್ದರು ಎಂದರು.
ಅಂದು ಗಾಂಧೀಜಿ ಚರಕದಿಂದ ಮಾಡಿದ ಆಂದೋಲನ ಈಗಲೂ ವಿಶ್ವದಲ್ಲಿ ಒಂದು ದೊಡ್ಡ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಶಿವಲಿಂಗಪ್ಪ ಎನ್.ಕುಂಬಾರ, ಸಂಘಟಕಿ ಟಿ.ಗಾಯತ್ರಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮಿ ವಹಿಸಿದ್ದರು. ಗಿರಿಜಾ ನಿರೂಪಿಸಿದರು.
ನೈಸರ್ಗಿಕ ಬಟ್ಟೆ: ಬಣ್ಣ.. ಮೇಳದಲ್ಲಿ ಚರಕದ ನೈಸರ್ಗಿಕ ಬಣ್ಣದ ಕೈಮಗ್ಗದ ಬಟ್ಟೆಗಳು ಸಿದ್ಧ ಉಡುಪುಗಳೊಂದಿಗೆ ಗಜೇಂದ್ರಗಡದ ನೇಕಾರರ ಅಪರೂಪದ ಸೀರೆಗಳು ಇತರೆ ಬಟ್ಟೆಗಳು ಶಿರಸಿಯ ತೇಜಸ್ವಿನಿ ಅವರ ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನ ಧಾಮಿನಿ ನ್ಯಾಚುರಲ್ಸ್ ಅವರ ಮಲೆನಾಡಿನ ವೈವಿಧ್ಯಮಯ ಉಪ್ಪಿನಕಾಯಿಗಳು ಶಿರಸಿಯ ಚೇತನಾ ಸಂಸ್ಥೆಯ ಬಾಳೆ ನಾರಿನ ಉತ್ಪನ್ನಗಳು ಚಿತ್ರಾ ಗಿರೀಶ್ ಅವರ ಟೆರಾಕೋಟಾ ಉತ್ಪನ್ನ ಮಣ್ಣಿನ ಆಭರಣಗಳು ಗೀತಾಂಜಲಿ ಬುಕ್ಸೆಂಟರ್ನ ಪುಸ್ತಕಗಳು ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.