
ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!
ತುಮರಿ: ಸಿಗಂದೂರು ಸೇತುವೆ ಲೋಕಾರ್ಪಣೆ ಬಳಿಕ ಇಲ್ಲಿನ ಶರಾವತಿ ಜಲಾನಯನ ಪ್ರದೇಶದ ಹಿನ್ನೀರಿನ ವ್ಯಾಪ್ತಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಈ ಸುಂದರ ಪ್ರದೇಶ ಇದೀಗ ಪುಂಡರ ಮೋಜಿನ ತಾಣವಾಗಿ ಮಾರ್ಪಟ್ಟಿದೆ.
ಶರಾವತಿ ಹಿನ್ನೀರಿನ ಶರಾವತಿ ಕಣಿವೆಯ ಸಾವಿರಾರು ಎಕರೆ ಪ್ರದೇಶ ಬಹುತೇಕ ಸಿಂಗಳೀಕ ಅಭಯಾರಣ್ಯದಿಂದ ಅವೃತವಾಗಿದೆ. ಜೊತೆಗೆ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಂತೆ ಹಲವು ಹೋಂ ಸ್ಟೇ ಹಾಗೂ ಲಾಡ್ಜ್ಗಳಿವೆ. ಇಲ್ಲಿಗೆ ದೂರದ ಊರುಗಳಿಂದ ತಂಡೋಪತಂಡವಾಗಿ ಬರುವ ಪ್ರವಾಸಿಗರು, ಯುವಕರು ಮದ್ಯಪಾನ ಹಾಗೂ ಗಾಂಜಾ ಸೇವನೆ ಮಾಡಿ ಹಿನ್ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿರುವ, ಆತ್ಮಹತ್ಯೆಗೆ ಯತ್ನಿಸಿದ, ಅನುಮಾನಾಸ್ಪದ ಶವಗಳು ದೊರೆತ ಪ್ರಕರಣಗಳು ವರದಿಯಾಗಿವೆ.
ಸಾಗರ ತಾಲ್ಲೂಕಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಾದ ಜೋಗ ಜಲಪಾತ, ಮುಪ್ಪಾನೆ ಪ್ರಕೃತಿ ಶಿಬಿರ, ಇಕ್ಕೇರಿ, ಹೊನ್ನೆಮರಡು, ವರದಹಳ್ಳಿ, ಕಾನೂರು ಕೋಟೆ, ಬಳೆಪದ್ಮಾವತಿ ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರು ಸಾಗರದಲ್ಲಿ ಅಥವಾ ಶರಾವತಿ ಹಿನ್ನೀರಿನ ಪ್ರದೇಶದಲ್ಲಿರುವ ಹೋಂ ಸ್ಟೇಗಳಲ್ಲಿ ಉಳಿದು ಇಲ್ಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾರೆ.
ಸಿಗಂದೂರು ಸೇತುವೆ ಲೋಕಾರ್ಪಣೆ ನಂತರ ಬಸ್, ಕಾರ್ ಮತ್ತು ಬೈಕ್ಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಡಿಸೆಂಬರ್ನಲ್ಲಿ ಪ್ರತಿದಿನ ಸರಾಸರಿ 10,000ದಿಂದ 12,000 ಪ್ರವಾಸಿಗರು ಭೇಟಿ ನೀಡಿದ್ದಾರೆ. ಮುಪ್ಪಾನೆ, ಹಸಿರು ಮಕ್ಕಿ ಲಾಂಚ್ನಲ್ಲಿ ಜನರಿಗೆ ಸೇವೆ ಇರುವುದರಿಂದ ಜೋಗ ಜಲಪಾತ ವೀಕ್ಷಣೆ ನಂತರ ಪ್ರವಾಸಿಗರು ಮುಪ್ಪಾನೆ ಲಾಂಚ್ ಮಾರ್ಗವನ್ನು ಬಳಸುತ್ತಾರೆ. ಇದರಿಂದ ಸಹಜವಾಗಿ ಅಲ್ಲಿನ ಪರಿಸರವನ್ನು ನೋಡಲು ಬರುವ ಪ್ರವಾಸಿಗರು ಪ್ಲಾಸ್ಟಿಕ್, ಬಟ್ಟೆ ಇನ್ನಿತರ ತ್ಯಾಜ್ಯವನ್ನು ಹಿನ್ನೀರು ಇಲ್ಲವೆ ಕಾಡಿನ ಭಾಗದಲ್ಲಿ ಎಸೆಯುವುದು ಸರ್ವೇ ಸಾಮಾನ್ಯವಾಗಿದೆ ಎಂಬುದು ಸ್ಥಳೀಯರ ಆರೋಪ.
ಇಲ್ಲಿಗೆ ಬರುವ ಯುವಕರ ತಂಡ ಮದ್ಯದ ಬಾಟಲಿಗಳನ್ನು ಹಾಗೂ ಹೋಟೆಲ್ಗಳಿಂದ ಮಾಂಸಾಹಾರ ತಂದು ಅಲ್ಲಿಯೇ ತಿಂದು, ಕುಡಿದು, ತ್ಯಾಜ್ಯಗಳನ್ನು ಅಲ್ಲಿಯೇ ಬಿಸಾಕಿ ಹೋಗುತ್ತಿದ್ದಾರೆ. ಜೊತೆಗೆ, ಈ ಸುಂದರ ತಾಣ ಈಗ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕೆಲ ಯುವಕರ ಬೇಜವಾಬ್ದಾರಿ ವರ್ತನೆಗಳಿಂದ ಈಗ ಚಿಕ್ಕಮಕ್ಕಳು, ಮಹಿಳೆಯರೊಂದಿಗೆ ಅಲ್ಲಿಗೆ ಹೋಗದಂತಹ ವಾತಾವರಣ ನಿರ್ಮಾಣ ಆಗಿದೆ ಎಂದು ಅನೇಕ ಪ್ರವಾಸಿಗರು ದೂರಿದ್ದಾರೆ.
ಸಿಗಂದೂರು ಸೇತುವೆ ಸೇರಿದಂತೆ ಮುಪ್ಪಾನೆ ಹಿನ್ನೀರಿನ ಯಾವ ಭಾಗದಲ್ಲೂ ಪ್ರವಾಸಿಗರ ಕಣ್ಗಾವಲಿಗೆ ಕ್ಯಾಮೆರಾ, ಪೋಲಿಸ್ ಬ್ಯಾರಿಕೇಡ್, ಅರಣ್ಯ ಇಲಾಖೆಯ ಫಲಕವಾಗಲಿ, ಅಪಾಯದ ಸೂಚನೆ ಬಗ್ಗೆ ಮಾಹಿತಿಯೂ ಇಲ್ಲ. ಪೋಲಿಸ್ ಇಲಾಖೆಯ ಯಾವುದೇ ಸಿಬ್ಬಂದಿಯನ್ನು ಭದ್ರತೆಗಾಗಿ ಸೇತುವೆ ಮೇಲೆ ನಿಯೋಜನೆ ಮಾಡಿಲ್ಲ.
––––
ಶರಾವತಿ ವನ್ಯಜೀವಿ ವಿಭಾಗದ ಹಲವು ಭಾಗಗಳಲ್ಲಿ ಈಗಾಗಲೇ ಸೂಚನಾ ಫಲಕ ಅಳವಡಿಸಲಾಗಿದೆ. ಪ್ರವಾಸಿಗರು ಸ್ವಯಂ ಪ್ರೇರಣೆಯಿಂದ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು
–ಪ್ರಸನ್ನಕೃಷ್ಣ ಪಟಗಾರ ಡಿಸಿಎಫ್ ಶಿವಮೊಗ್ಗ
ತುಮರಿ ಬ್ಯಾಕೋಡು ಹಾಗೂ ಸಿಗಂದೂರು ಸೇತುವೆ ಸ್ವಲ್ಪ ಭಾಗ ಮಾತ್ರ ಕಾರ್ಗಲ್ ಪೋಲಿಸ್ ಠಾಣೆ ವ್ಯಾಪ್ತಿಗೆ ಒಳಪಡಲಿದೆ. ಉಳಿದ ಪ್ರದೇಶ ಸಾಗರ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಗೆ ಬರಲಿದೆ
–ಪ್ರವೀಣ್ ಸಬ್ ಇನ್ಸ್ಪೆಕ್ಟರ್ ಕಾರ್ಗಲ್ ಠಾಣೆ
ಪ್ರವಾಸಿ ವಾಹನ ತಪಾಸಣೆ ನಡೆಸಿ..
ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಪ್ರವಾಸಿಗರು ಬಂದಾಗ ಸೂಕ್ತ ತಪಾಸಣೆ ಅಗತ್ಯವಿದೆ. ಜೊತೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಆಗಿಂದಾಗ್ಗೆ ಬೀಟ್ ನಡೆಸಬೇಕು. ಶರಾವತಿ ಕಣಿವೆ ಸಿಂಗಳೀಕ ಅಭಯಾರಣ್ಯ ಹಾಗೂ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಗೆ) ಒಳಪಡುವ ಹಿನ್ನೆಲೆಯಲ್ಲಿ ಈ ಭಾಗವನ್ನು ಮದ್ಯಪಾನಮುಕ್ತ ಪ್ರದೇಶವಾಗಿ ಘೋಷಣೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.