ಶಿವಮೊಗ್ಗ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಭದ್ರಾ ಪ್ರಖಂಡದಲ್ಲಿ ಸಂತರ ಪಾದಯಾತ್ರೆ ಕಾರ್ಯಕ್ರಮ ಶನಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿನಯಾನಂದ ಸರಸ್ವತಿ ಹಾಗೂ ದುರ್ಗಾಶಕ್ತಿ ಸಪ್ತಶತಿ ಋಷಿಪ್ರಜ್ಞಾ ಆಂದೋಲನದ ಸಂಸ್ಥಾಪಕ ನರೇಂದ್ರ ಗುರೂಜಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಶಿವಮೊಗ್ಗ ನಗರದ ವಿದ್ಯಾನಗರ ಬಡಾವಣೆಯ ಮಾತಂಗಮ್ಮನ ಬೀದಿಯ 40ಕ್ಕಿಂತ ಹೆಚ್ಚು ಮನೆಗಳಿಗೆ ಸಂತರು ಭೇಟಿ ನೀಡಿ ಭಕ್ತರನ್ನು ಆಶೀರ್ವದಿಸಿದರು. ‘ನಾವೆಲ್ಲರೂ ಹಿಂದೂ ಸಮಾಜದ ಅವಯವಗಳು. ನಾವೆಲ್ಲರೂ ಒಂದಾಗಿ ಬಾಳಬೇಕು’ ಎಂಬ ಬಗ್ಗೆ ಜಾಗೃತಿ ಮೂಡಿಸಿದರು.
ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಇಬ್ಬರೂ ಮಾತನಾಡಿ, ‘ಜ್ಞಾನ ಮತ್ತು ಭಕ್ತಿಗಳನ್ನು ಹೆಚ್ಚಿಸಿಕೊಂಡು ಭಗವಂತನನ್ನು ಪಡೆದು ಭವ ಸಾಗರವನ್ನು ದಾಟುವ ಶಕ್ತಿ ಪಡೆಯಬೇಕು’ ಎಂದು ಹೇಳಿದರು.
ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ಧರ್ಮ ಪ್ರಸಾರ ವಿಭಾಗದ ಪ್ರಾಂತ ಪ್ರಮುಖ ನಾರಾಯಣ ವರ್ಣೇಕರ್, ನಗರದ ಧರ್ಮ ಪ್ರಸಾರ ಪ್ರಮುಖ ಕೃಷ್ಣಮೂರ್ತಿ, ಭದ್ರಾ ಪ್ರಖಂಡ ಅಧ್ಯಕ್ಷ ಮಹದೇವಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ದೇವಾಲಯ ಸಂವರ್ಧನಾ ಸಮಿತಿಯ ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. ಪರಿವಾರದ ಕಾರ್ಯಕರ್ತರಾದ ಲಕ್ಷ್ಮಣ, ಮೋಹನ್, ಸುರೇಶ್ ಬಾಬು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.