ತೀರ್ಥಹಳ್ಳಿ: ಕಳಪೆ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಎಂದೂ ಬೆಂಬಲ ನೀಡಿಲ್ಲ. ನೂತನ ಸರ್ಕಾರಿ ಕಟ್ಟಡ ಸೋರಿಕೆ ಕುರಿತು ದೂರುಗಳು ಬಂದಿದ್ದು ತಾಂತ್ರಿಕ ವರದಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ’ಭ್ರಷ್ಟಾಚಾರ ಆರಂಭ ಆಗುವುದೇ ಕಳಪೆ ಕಾಮಗಾರಿಗಳಿಂದ. ಮೇಕಪ್ ಎಷ್ಟೇ ಹಚ್ಚಿದ್ದರೂ ಸಂಜೆಗೆ ಇಳಿದು ಹೋಗುತ್ತದೆ. ಹಾಗೆ ಕಟ್ಟಡಗಳು ಕೂಡ ಅದೇ ರೀತಿ ವಾಸ್ತವದ ಸ್ಥಿತಿಗೆ ಬಂದೆ ಬರುತ್ತವೆ’ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಘೋಷಿಸಿದ ₹1.5 ಲಕ್ಷ ಕೋಟಿ ಅಭಿವೃದ್ಧಿ ಕಾಮಗಾರಿಗೆ ಹಣಕಾಸು ಅನುಮೋದನೆ ನೀಡದೆ ಕಾರ್ಯ ಯೋಜನೆ ರೂಪಿಸಿತ್ತು. ಅವರ ಸಾಲವನ್ನು ನಾವು ತೀರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆ ಜೊತೆಗೆ ₹1.43 ಲಕ್ಷ ಕೋಟಿ ಅಭಿವೃದ್ಧಿ ಯೋಜನೆಗೆ ಹಣ ಮೀಸಲಿಟ್ಟಿದ್ದೇವೆ ಎಂದರು.
ಹಿಂದಿನ ಸರ್ಕಾರದ ಬೃಹತ್ ಯೋಜನೆಯಲ್ಲಿ ನಡೆದಿರುವ ಅಕ್ರಮ, ಕಳಪೆ ತನಿಖೆಗೆ ಮುಖ್ಯಮಂತ್ರಿಗಳೇ ಆದೇಶ ನೀಡಿದ್ದಾರೆ. ಕಳಪೆ ಕಾಮಗಾರಿ ಒಪ್ಪಿಕೊಳ್ಳುವ ಅಗತ್ಯ ನಮಗೆ ಬಂದಿಲ್ಲ. ಶಾಸಕ ಆರಗ ಜ್ಞಾನೇಂದ್ರ ಸಾರ್ವಜನಿಕರ ತೆರಿಗೆ ಹಣ ಪೋಲಾಗದಂತೆ ಜಾಗೃತಿ ವಹಿಸಲಿ ಎಂದು ಹೇಳಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಮುಖಂಡರಾದ ಟಿ.ಎಲ್. ಸುಂದರೇಶ್, ರೆಹಮತ್ ಉಲ್ಲಾ ಅಸಾದಿ, ಅಮರನಾಥ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.