ತುಮಕೂರು: ಹನಿ ನೀರಾವರಿ ಯೋಜನೆಯಡಿ ಸಹಾಯ ಧನ ಮಾಡಿಕೊಡಲು ಲಂಚ ಪಡೆದಿದ್ದ ಮಧುಗಿರಿ ರೇಷ್ಮೆ ವಿಸ್ತರಣಾಧಿಕಾರಿ ಕಚೇರಿಯ ರೇಷ್ಮೆ ಪ್ರದರ್ಶಕ ಎಂ.ವಿ.ರಾಮಕೃಷ್ಣಯ್ಯಗೆ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಮತ್ತು ₹96 ಸಾವಿರ ದಂಡ ವಿಧಿಸಿದೆ.
ನರೇಗಾ ಯೋಜನೆಯಡಿ ರೇಷ್ಮೆ ನಾಟಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ಮತ್ತು ಕೂಲಿ ಮೊತ್ತ ಮಂಜೂರು ಮಾಡಲು ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದ ರೈತ ಶ್ರೀರಂಗಯ್ಯ ಅವರಿಂದ ₹15 ಸಾವಿರ ಲಂಚ ಪಡೆದಿದ್ದರು. ನಂತರ ಹನಿ ನೀರಾವರಿ ಸಬ್ಸಿಡಿ, ಸಾಮಗ್ರಿ ವೆಚ್ಚ ಮಂಜೂರು ಮಾಡಲು ₹33 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಶ್ರೀರಂಗಯ್ಯ ಲಂಚ ಕೊಡಲಾಗದೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರಿಗೆ ದೂರು ನೀಡಿದ್ದರು. 2019ರ ಮಾರ್ಚ್ 18ರಂದು ₹33 ಸಾವಿರ ಹಣ ಸ್ವೀಕರಿಸುವಾಗ ರಾಮಕೃಷ್ಣಯ್ಯ ಎಸಿಬಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ಕುಮಾರ್ ಪ್ರಕರಣದ ತನಿಖೆ ನಡೆಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು ಗುರುವಾರ ಪ್ರಕರಣದ ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎನ್.ಬಸವರಾಜು ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.