ADVERTISEMENT

ಬ್ರಿಗೇಡಿಯರ್ ಪೂರ್ವಿಮಠಗೆ ‘ಗುರುಕುಲ ಶ್ರೀ’ ಪ್ರದಾನ

ಗುರುಕುಲ ಶತಮಾನೋತ್ಸವದ ಸ್ಮಾರಕ ಲೋಕಾರ್ಪಣೆ: ಸ್ವಾಮೀಜಿ ಸ್ಮರಣೆ, 28ನೇ ಪೀಠಾರೋಹಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:30 IST
Last Updated 24 ನವೆಂಬರ್ 2025, 5:30 IST
ತಿಪಟೂರು ಗುರುಕಲಾನಂದಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠಗೆ ‘ಗುರುಕುಲ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು
ತಿಪಟೂರು ಗುರುಕಲಾನಂದಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠಗೆ ‘ಗುರುಕುಲ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು   

ತಿಪಟೂರು: ನಗರದ ಗುರುಕುಲ ಆಶ್ರಮ ಆವರಣದಲ್ಲಿ ಭಾನುವಾರ ಪಟ್ಟದ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಸ್ಮರಣೆ, 28ನೇ ಪೀಠಾರೋಹಣ ಹಾಗೂ ಗುರುಕುಲ ಶತಮಾನೋತ್ಸವದ ಸ್ಮಾರಕ ಪಾಠಶಾಲಾ ಕಟ್ಟಡ ಲೋಕಾರ್ಪಣೆ ಸಮಾರಂಭ ನಡೆಯಿತು.

ಭಾರತೀಯ ಸೇನೆಯ ವಿಶಿಷ್ಟ ಸೇವಾ ಪದಕ ಪುರಸ್ಕೃತ ಹಾಗೂ ವಿಮಾನಯಾನ ಮೂಲ ಸೌಕರ್ಯಗಳ ತಾಂತ್ರಿಕ ಸಲಹೆಗಾರ ಬ್ರಿಗೇಡಿಯರ್ ಡಿ.ಎಂ. ಪೂರ್ವಿಮಠಗೆ ‘ಗುರುಕುಲ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೂರ್ವಿಮಠ, ವಿಶ್ವದಲ್ಲಿ ಅತ್ಯಂತ ಶಿಸ್ತಿನ ತಂಡವಾಗಿರುವ ದೇಶಭಕ್ತಿ, ಒಗ್ಗಟ್ಟು, ಏಕತೆ ಮತ್ತು ಶಿಸ್ತಿಗೆ ಹೆಸರಾಗಿರುವ ಎನ್‌ಸಿಸಿ ಯುವಪಡೆಯನ್ನು 1948ರಲ್ಲಿ ಭದ್ರತೆಗಾಗಿ ಬಳಸಿಕೊಳ್ಳಲಾಗುತ್ತಿತ್ತು. ತದನಂತರ ವಯೋಮಿತಿ ಕಾರಣದಿಂದ ಕೈ ಬಿಡಲಾಯಿತು. ದೇಶಕ್ಕೆ ಗಂಡಾಂತರ ಬಂದಾಗ ದೇಶದ ಭದ್ರತೆಗೆ ಹಾಗೂ ಆಂತರಿಕ ಭದ್ರತೆಗೆ ಸೇನೆಯ ಜೊತೆ ಎನ್‌ಸಿಸಿ ಸೇವೆ ಅವಶ್ಯಕವಾಗಿರುತ್ತದೆ ಎಂದರು.

ADVERTISEMENT

ಆಪರೇಷನ್ ಸಿಂಧೂರ ಕೆಲಸ ಮುಗಿದಿದೆ ಎಂದು ಜನರು ಭಾವಿಸಿದರೂ ಭಾರತೀಯ ಸೇನೆಯು ಇನ್ನೂ ಕಾರ್ಯಾಚರಣೆಯಲ್ಲಿ ಸನ್ನದ್ಧವಾಗಿದೆ ಎಂದರು.

ಸಿಡ್ಲೇಹಳ್ಳಿ ಮಠದ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶರಣರ ಇಷ್ಟಲಿಂಗ ಪೂಜೆ ಕೈಗೊಂಡು ಅಂತರಾತ್ಮದಲ್ಲಿ ದೇವನನ್ನು ಕಾಣುತ್ತಾ ಕಾಯಕ ಮಾಡಬೇಕಿದೆ. ಸಾಧನೆಗೆ ಅಂತರಾತ್ಮ ಯೋಗ ಸಾಧನೆ ಮುಖ್ಯ. ಭಗವಂತನಲ್ಲಿ ನಂಬಿಕೆ ಇಟ್ಟು ಆಸ್ತಿಕನಾಗಿ ನಾಸ್ತಿಕತನ ಬಿಟ್ಟು ಅಂತಕರಣ ವ್ಯಕ್ತಿಗಳಾಗಿ ಸಮಾಜ ಸಂಘಟನೆ ಮಾಡಬೇಕು ಎಂದರು.

ಬಿಜೆಪಿ ಮುಖಂಡ ಬಿ.ಸಿ.ನಾಗೇಶ್ ಮಾತನಾಡಿ, ಜಗತ್ತಿಗೆ ಪ್ರಸ್ತುತವಾಗಿ ಯಾವುದನ್ನು ನೀಡಬೇಕು, ಯಾವುದರ ಜೊತೆ ನಿಲ್ಲಬೇಕು, ಕೆಟ್ಟದ್ದು ಒಳ್ಳೆಯದು ಎಂಬುದರ ಬಗ್ಗೆ ಗುರುಕುಲ ನೇರವಾಗಿ ಹೇಳುತ್ತಾ ಮನುಷ್ಯನಿಗೆ ಅಗತ್ಯತೆ ಇರುವ ವಿಷಯಗಳ ಆಧಾರಿತವಾಗಿ ಕಾರ್ಯಕ್ರಮ ಆಯೋಜಿಸುತ್ತ ಬಂದಿದೆ ಎಂದರು.

ನಿವೃತ್ತ ಎಸಿಪಿ ಲೋಕೇಶ್ವರ್ ಮಾತನಾಡಿ, ಅಪರೇಷನ್ ಸಿಂಧೂರ್ ಹೆಸರನಲ್ಲಿ ದೇಶವು ಒಗ್ಗಟ್ಟಿನ ಪ್ರದರ್ಶನ ತೋರಿಸಿದೆ. ಆದರೆ ರಾಜ್ಯದಲ್ಲಿ ಜಾತಿ ಸಮೀಕ್ಷೆಯಲ್ಲಿ ಮೀಸಲಾತಿಗಾಗಿ, ರಾಜಕಾರಣಕ್ಕಾಗಿ ಸಮಾಜ, ಧರ್ಮಗಳನ್ನು ಒಡೆದು ಜಾತಿ ಉಪಜಾತಿಗಳನ್ನು ಮಾಡಿ ಜಾತಿ-ಧರ್ಮದ ವಿಭಜನೆ ಮಾಡುತ್ತಿರುವುದು ವಿಷಾದನೀಯ. ವೀರಶೈವ ಲಿಂಗಾಯತ ಸಮುದಾಯ ರಾಜ್ಯಕ್ಕೆ ಹೆಚ್ಚು ಮುಖ್ಯಮಂತ್ರಿಗಳನ್ನು ನೀಡಿದೆ ಎಂದು ಹೇಳಿದರು.

ಚಿಕ್ಕಮಗಳೂರಿನ ಕರಡಿಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಭಕ್ತರು ನಡೆ-ನುಡಿ ನಡತೆಯಲ್ಲಿ ಸನ್ಮಾರ್ಗ ಕಾಣಬೇಕಾದರೆ ಗುರುವಿನ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು ಎಂದರು.

ನೂತನ ಕಟ್ಟಡವನ್ನು ರೈಲ್ವೆ ಹಾಗೂ ಜಲಶಕ್ತಿ ಇಲಾಖೆ ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.

ರಾಷ್ಟ್ರಪತಿಯಿಂದ ಶೌರ್ಯ ಪ್ರಶಸ್ತಿ ಪಡೆದ ಪ್ರಣವ್ ಬೆಳ್ಳೂರು, ಸಿದ್ದಗಂಗಾ ಮೆಡಿಕಲ್ ಕಾಲೇಜಿನ ಜಿ.ವಿ.ಶರತ್‌ಕುಮಾರ್, ನಿವೃತ್ತ ಹೆಚ್ಚವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್, ಹುಚ್ಚಗೊಂಡನಹಳ್ಳಿ ಗ್ರಾ.ಪಂ ಅಧ್ಯಕ್ಷ ಬಸವರಾಜು, ರಂಗಭೂಮಿ ಕಲಾವಿದ ಕಿರಣ್, ಜಯಮ್ಮ ಕಲ್ಲಪ್ಪ, ಮಾಜಿ ಪುರಸಭೆ ಅಧ್ಯಕ್ಷ ಲಿಂಗರಾಜು, ಕ್ಯಾಪ್ಟನ್ ಹರಿಪ್ರಸಾದ್ ಉಪಸ್ಥಿತರಿದ್ದರು.

ನಗರದ ಗುರುಕುಲ ಆಶ್ರಮದ ಆವರಣದಲ್ಲಿ ಲಿಂಗೈಕ ಜಗದ್ಗುರು ಪಟ್ಟದ ಕರಿಬಸವ ದೇಶಿಕೇಂದ್ರ ಸ್ವಾಮೀಜಿಯವರ 115ನೇ ಸಂಸ್ಮರಣೆ ಹಾಗೂ ಪೂಜ್ಯರ 28ನೇ ಪೀಠಾರೋಹಣ ಕಾರ್ಯಕ್ರಮ ಹಾಗೂ ಗುರುಕುಲ ಶತಮಾನೋತ್ಸವದ ಸ್ಮಾರಕ ಪಾಠಶಾಲಾ ನೂತನ ಕಟ್ಟಡದ ಲೋಕಾರ್ಪಣಾ ಸಮಾರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.