ತುಮಕೂರು: ಕಾಡುಗೊಲ್ಲ ಸಮುದಾಯದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವುದು ವಿಳಂಬವಾಗುತ್ತಿದ್ದು, ಸಾವಿರಾರು ಜನ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಕಾಡುಗೊಲ್ಲ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಬೆರಳೆಣಿಕೆಯಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ತುಮಕೂರು, ಮಧುಗಿರಿ ತಾಲ್ಲೂಕಿನಿಂದ ಒಂದೇ ಒಂದು ಅರ್ಜಿಯೂ ಸಲ್ಲಿಕೆಯಾಗಿಲ್ಲ. ಕೊರಟಗೆರೆ 2, ಕುಣಿಗಲ್ ತಾಲ್ಲೂಕಿನ 7 ಜನ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಕಡೆಗಳಲ್ಲಿ ಜಾತಿ ಪ್ರಮಾಣ ಪತ್ರ ವಿತರಣೆ ಸಕಾಲಕ್ಕೆ ಆಗುತ್ತಿಲ್ಲ. ಇದರಿಂದ ಸಾಕಷ್ಟು ಜನರು ನಿಗಮದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪಗಳು ವ್ಯಕ್ತವಾಗುತ್ತಿವೆ.
ಕಾಡುಗೊಲ್ಲ ನಿಗಮ ರಚನೆಯಾದ ನಂತರ 2024–25ನೇ ಸಾಲಿನಲ್ಲಿ ಮೊದಲ ಬಾರಿಗೆ ಸಮುದಾಯದ ಜನರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ನಿಗಮದ ಕಚೇರಿಗೆ ಬಂದಿಲ್ಲ. ಕಾಡುಗೊಲ್ಲ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ತಾಲ್ಲೂಕುಗಳಲ್ಲಿಯೇ ಅತಿ ಕಡಿಮೆ ಅರ್ಜಿಗಳು ಬಂದಿವೆ. ಪಾವಗಡದಿಂದ ಕೇವಲ 19 ಮಂದಿ ಸೌಲಭ್ಯ ಬಯಸಿ ಅರ್ಜಿ ಹಾಕಿದ್ದಾರೆ. ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ಕಾಡುಗೊಲ್ಲರಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಕಳೆದ ವರ್ಷ ಕೇವಲ 805 ಅರ್ಜಿಗಳು ನಿಗಮದ ಕಚೇರಿ ತಲುಪಿವೆ.
ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ 577 ಅರ್ಜಿ, ಗಂಗಾ ಕಲ್ಯಾಣ ಯೋಜನೆಗೆ 142, ಸ್ವಾವಲಂಬಿ ಸಾರಥಿ ಯೋಜನೆಗೆ 63, ಬ್ಯಾಂಕ್ ಸಹಾಯದೊಂದಿಗೆ ನೇರ ಸಾಲಕ್ಕೆ 23 ಅರ್ಜಿಗಳು ಸ್ವೀಕೃತವಾಗಿವೆ. ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಯಾವುದೇ ಅರ್ಜಿ ಸಲ್ಲಿಕೆಯಾಗಿಲ್ಲ.
ಸೇವಾ ಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಕಾಡುಗೊಲ್ಲರ ಜಾತಿ ಪ್ರಮಾಣ ಸಲ್ಲಿಸಬೇಕು. ಇಲ್ಲದಿದ್ದರೆ ಅರ್ಜಿಯೇ ಸ್ವೀಕಾರ ಆಗುವುದಿಲ್ಲ. ಆಯಾ ಗ್ರಾಮದ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿಗಳು ಪ್ರಮಾಣ ಪತ್ರ ವಿತರಣೆಗೆ ಕ್ರಮ ವಹಿಸಬೇಕು. ಸಮುದಾಯದ ಜನರು ಹತ್ತಾರು ಬಾರಿ ಕಚೇರಿಗಳಿಗೆ ಅಲೆದರೂ ಪ್ರಮಾಣ ಪತ್ರ ಅವರ ಕೈ ಸೇರುತ್ತಿಲ್ಲ ಎಂದು ಸಮುದಾಯದವರು ಆರೋಪಿಸುತ್ತಿದ್ದಾರೆ.
‘ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ 2023ರಲ್ಲಿಯೇ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅಗತ್ಯವಿದ್ದರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಅರ್ಜಿ ಸಲ್ಲಿಸಲು ಹೋದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಸರ್ಕಾರದ ಸುತ್ತೋಲೆ ತೋರಿಸಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಾಡುಗೊಲ್ಲ ಸಮುದಾಯದ ಮುಖಂಡ ಅರುಣ್ ಬೇಸರ ವ್ಯಕ್ತಪಡಿಸಿದರು.
ಮೊದಲ ಬಾರಿಗೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಕೆಗೆ ಪ್ರಮಾಣ ಪತ್ರ ಕಡ್ಡಾಯ | ಒಟ್ಟು 805 ಅರ್ಜಿ ಸಲ್ಲಿಕೆ
ಅಧ್ಯಕ್ಷರ ನೇಮಕಕ್ಕೆ ಗ್ರಹಣ!
2020ರ ಶಿರಾ ಉಪಚುನಾವಣೆ ಸಮಯದಲ್ಲಿ ಕಾಡಗೊಲ್ಲ ಅಭಿವೃದ್ಧಿ ನಿಗಮ ಘೋಷಿಸಲಾಯಿತು. ಅಲ್ಲಿಂದ ಈವರೆಗೆ ನಿಗಮದ ಕೆಲಸಗಳು ಕುಂಟುತ್ತಾ ಸಾಗಿವೆ. ಘೋಷಣೆಯಾಗಿ ನಾಲ್ಕು ವರ್ಷ ಕಳೆದ ನಂತರ 2024-25ನೇ ಸಾಲಿನಲ್ಲಿ ಮೊದಲ ಸಲ ನಿಗಮದಿಂದ ಅರ್ಜಿ ಆಹ್ವಾನಿಸಲಾಯಿತು. ಪ್ರಾರಂಭದಲ್ಲಿ ನಿಗಮ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿತ್ತು. ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಂಗಾವರ ಮಾರಣ್ಣ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರು ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಸರ್ಕಾರದ ಅವಧಿ ಮುಗಿಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಇದುವರೆಗೆ ಅಧ್ಯಕ್ಷರನ್ನು ನೇಮಿಸಿಲ್ಲ.
ಇಂದು ಆಯ್ಕೆ ಸಮಿತಿ ಸಭೆ
2024–25ನೇ ಸಾಲಿನ ಫಲಾನುಭವಿಗಳ ಆಯ್ಕೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಆರ್ಥಿಕ ವರ್ಷ ಮುಗಿದ ನಂತರ ಆಯ್ಕೆ ಸಮಿತಿ ಸಭೆ ನಡೆಯುತ್ತಿದೆ. ಮೇ 27ರಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆ ನಡೆಯಲಿದೆ. ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.