ADVERTISEMENT

ಚಿಕ್ಕನಾಯಕನಹಳ್ಳಿ: ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ ಪುರಸಭೆ ನಿರ್ಲಕ್ಷ್ಯ

ಜನರು, ಸಂತೆ ವ್ಯಾಪಾರಿಗಳು, ಮಹಿಳೆಯರ ಪರದಾಟ: ಮೂತ್ರಾಲಯಕ್ಕಿಲ್ಲ ನೀರಿನ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:10 IST
Last Updated 23 ಫೆಬ್ರುವರಿ 2026, 6:10 IST
ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿನ ಶೌಚಾಲಯ
ಚಿಕ್ಕನಾಯಕನಹಳ್ಳಿ ಪಟ್ಟಣದ ಬನಶಂಕರಿ ಬಡಾವಣೆಯಲ್ಲಿನ ಶೌಚಾಲಯ   

ಚಿಕ್ಕನಾಯಕನಹಳ್ಳಿ: ‘ಸ್ವಚ್ಛ ಭಾರತ’ದ ಕನಸು ನನಸು ಮಾಡಬೇಕಾದ ಸ್ಥಳೀಯ ಆಡಳಿತವು ಪಟ್ಟಣದ ಮೂಲ ಸೌಕರ್ಯಗಳ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಪ್ರಮುಖ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯಗಳು ಇಂದು ಸಾರ್ವಜನಿಕರ ಬಳಕೆಗೆ ಬಾರದಂತಾಗಿವೆ. 

ಪಟ್ಟಣದ ಜನನಿಬಿಡ ಪ್ರದೇಶಗಳಾದ ತಾಲ್ಲೂಕು ಕಚೇರಿಯಿಂದ ಸರ್ಕಾರಿ ಬಸ್ ನಿಲ್ದಾಣದವರೆಗೆ ಒಂದೂ ಸಾರ್ವಜನಿಕ ಶೌಚಾಲಯವಿಲ್ಲ. ನಿತ್ಯ ಸರ್ಕಾರಿ ಕೆಲಸಗಳಿಗಾಗಿ ಪಟ್ಟಣಕ್ಕೆ ಬರುವ ಸಾವಿರಾರು ಜನರು, ಸಂತೆ ವ್ಯಾಪಾರಿಗಳು, ಮಹಿಳೆಯರು ಮತ್ತು ವೃದ್ಧರು ಶೌಚಾಲಯ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ.

ADVERTISEMENT

ಖಾಸಗಿ ಬಸ್ ನಿಲ್ದಾಣ ಹಾಗೂ ನಿತ್ಯದ ಮಾರುಕಟ್ಟೆಯಲ್ಲಿರುವ ಶೌಚಾಲಯಗಳ ಸಮರ್ಪಕ ನಿರ್ವಹಣೆ ಇಲ್ಲ. ಮಾರುಕಟ್ಟೆಯ ಶೌಚಾಲಯಗಳ ಸ್ಥಿತಿ ಹೇಳತೀರದಂತಾಗಿದ್ದರೂ ಜನರು ಮೂಗು ಮುಚ್ಚಿಕೊಂಡು ಬಳಸುವುದು ಅನಿವಾರ್ಯ.

ಕನ್ನಡ ಸಂಘದ ವೇದಿಕೆ ಬಳಿ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಮೂತ್ರಾಲಯ ನಿರ್ಮಿಸಿದ್ದರೂ, ಸಮರ್ಪಕ ನೀರು ಸರಬರಾಜು ಕಲ್ಪಿಸಿಲ್ಲ. ನೀರಿನ ಸೌಲಭ್ಯವಿಲ್ಲದ ಸುಸಜ್ಜಿತ ಕಟ್ಟಡ ಸಾರ್ವಜನಿಕರಿಗೆ ಕೇವಲ ಪ್ರದರ್ಶನದ ವಸ್ತುವಾಗಿದೆ. ಶೌಚಾಲಯ ನಿರ್ಮಿಸದೆ ಮೂತ್ರಾಲಯ ಮಾತ್ರ ನಿರ್ಮಾಣ ಮಾಡಿರುವುದರ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಹೊಸ ಶೌಚಾಲಯಗಳನ್ನು ನಿರ್ಮಿಸುವುದು ಹಾಗೂ ಅಸ್ತಿತ್ವದಲ್ಲಿರುವ ಶೌಚಾಲಯಗಳಿಗೆ ಸಮರ್ಪಕ ನೀರು ಮತ್ತು ನೈರ್ಮಲ್ಯದ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ನಾಗರಿಕರ ಆರೋಗ್ಯ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬನಶಂಕರಿ ಬಡಾವಣೆಯಲ್ಲಿ ನಿರ್ಮಿಸಿರುವ ಶೌಚಾಲಯವು ಯೋಜನೆಯ ವೈಫಲ್ಯಕ್ಕೆ ಉದಾಹರಣೆಯಂತಿದೆ. ಜನಸಂದಣಿಯೇ ಇಲ್ಲದ ಜಾಗದಲ್ಲಿ ಶೌಚಾಲಯ ನಿರ್ಮಿಸಿರುವುದು ಸಾರ್ವಜನಿಕರ ಹಣದ ಅಪವ್ಯಯವಾಗಿದೆ.

ಚಿಕ್ಕನಾಯಕನಹಳ್ಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಶೌಚಾಲಯ
ಸಾರ್ವಜನಿಕರ ಉಪಯೋಗಕ್ಕೆ ಬಾರದ ಮಾರುಕಟ್ಟೆಯಲ್ಲಿನ ಶೌಚಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.