ADVERTISEMENT

ಪಾವಗಡ: ಗ್ರಾಹಕರಿಗಿಲ್ಲ ಸಮರ್ಪಕ ಬ್ಯಾಂಕ್‌ ಸೇವೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 4:39 IST
Last Updated 29 ಆಗಸ್ಟ್ 2024, 4:39 IST
ಪಾವಗಡ ತಾಲ್ಲೂಕು ಅರಸೀಕೆರೆ ಬ್ಯಾಂಕ್ ಬಳಿಯ ಎಟಿಎಂ ಕೇಂದ್ರದ ಬಾಗಿಲು ಮುಚ್ಚಿದೆ
ಪಾವಗಡ ತಾಲ್ಲೂಕು ಅರಸೀಕೆರೆ ಬ್ಯಾಂಕ್ ಬಳಿಯ ಎಟಿಎಂ ಕೇಂದ್ರದ ಬಾಗಿಲು ಮುಚ್ಚಿದೆ   

ಪಾವಗಡ: ತಾಲ್ಲೂಕಿನ ಅರಸೀಕೆರೆ ಎಸ್‌ಬಿಐ ಬ್ಯಾಂಕ್‌ನಲ್ಲಿ ಸರಿಯಾದ ಸೇವೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ಯಾಂಕ್ ಬಳಿಯ ಎಟಿಎಂ ಎಂಟು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಹಣ ಡ್ರಾ ಮಾಡಲು ದೂರದ ಗ್ರಾಮಗಳಿಗೆ ಹೋಗಬೇಕು. ನೆಪಮಾತ್ರಕ್ಕೆ ಎಟಿಎಂ ಇದೆ. ಎಟಿಎಂ ಆರಂಭವಾದಾಗಿನಿಂದಲೂ ಸದಾ ಬಾಗಿಲು ಮುಚ್ಚಿರುತ್ತದೆ. ಆದರೆ ಖಾತೆದಾರರ ಖಾತೆಗಳಿಂದ ವಾರ್ಷಿಕ ಎಟಿಎಂ ಶುಲ್ಕ ಕಡಿತಗೊಳಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

₹1 ಸಾವಿರದಿಂದ ₹20 ಸಾವಿರದವರೆಗೆ ಹಣ ಡ್ರಾ ಮಾಡಲು ಹೋದ ಗ್ರಾಹಕರನ್ನು ಸೇವಾ ಕೇಂದ್ರದಲ್ಲಿ ಡ್ರಾ ಮಾಡಿಕೊಳ್ಳುವಂತೆ ತಿಳಿಸುತ್ತಾರೆ. ಸೇವಾ ಕೆಂದ್ರದಲ್ಲಿ ಕೆಲಸವಾಗದಿದ್ದಾಗ ಮತ್ತೆ ಬ್ಯಾಂಕ್‌ಗೆ ಕಳುಹಿಸಲಾಗುತ್ತದೆ. ವೃದ್ಧರು, ಅನಕ್ಷರಸ್ಥರನ್ನು ಅನಗತ್ಯವಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಅಲೆಸಲಾಗುತ್ತದೆ ಎಂದು ಆರೋಪಿಸಿದ್ದಾರೆ.

ADVERTISEMENT

ಬ್ಯಾಂಕ್‌ನಲ್ಲಿ ಸದ್ಯ ವ್ಯವಸ್ಥಾಪಕ, ನಗದು ಗುಮಾಸ್ತ ಸೇರಿದಂತೆ ಇಬ್ಬರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಇಲ್ಲದ ಕಾರಣ ಸರಿಯಾಗಿ ಕೆಲಸ ಕಾರ್ಯಗಳಾಗದೆ ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಕೂಡಲೇ ಎಟಿಎಂ ಸರಿಪಡಿಸಬೇಕು. ಬ್ಯಾಂಕ್‌ಗೆ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಬ್ಯಾಂಕ್‌ನಲ್ಲಿಯೇ ಹಣ ಡ್ರಾ ಮಾಡಲು ಅವಕಾಶ ನೀಡಬೇಕು. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಬ್ಯಾಂಕ್ ಸಿಬ್ಬಂದಿಗೆ ಸೂಚಿಸಬೇಕು ಎಂದು ರೈತ ಸಂಘದ ಅಧ್ಯಕ್ಷ ಮಂಜುನಾಥ್, ವಿ.ಚಂದ್ರಶೇಖರ್, ಮೂರ್ತಿ, ವಿನೋದ್, ಎ.ಎನ್. ಮಂಜುನಾಥ್, ಆರ್.ರಂಗನಾಥ್ ಒತ್ತಾಯಿಸಿದ್ದಾರೆ.

ಬೇಡಿಕೆ ಈಡೇರಿಸದಿದ್ದರೆ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.