ತುಮಕೂರು: ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಸುತ್ತಿರುವುದನ್ನು ವಿರೋಧಿಸಿ ಜಯಕರ್ನಾಟಕ ಜನಪರ ವೇದಿಕೆ ನೇತೃತ್ವದಲ್ಲಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಜಟಕಾ ಬಂಡಿಯಲ್ಲಿ ಮೆರವಣಿಗೆ ನಡೆಸಿ ಪ್ರತಿಭಟಿಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಕೊರೊನಾ ಆರ್ಥಿಕ ಸಂಕಷ್ಟದ ನಡುವೆ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಕೆಮಾಡಿ ಜನರ ಬದುಕಿಗೆ ಕೊಳ್ಳಿಯಿಟ್ಟಿದೆ. ತೈಲಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ತಕ್ಷಣ ತೈಲಬೆಲೆ ಇಳಿಸಬೇಕು ಎಂದು ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಉಮಾಶಂಕರ್ ಆಗ್ರಹಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಖಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ದೇಶದಲ್ಲಿ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಬಡವರು, ಮಧ್ಯಮ ವರ್ಗದ ಜನರು ಬದುಕುವುದು ಕಷ್ಟಕರವಾಗಿದೆ ಎಂದರು.
ವೇದಿಕೆ ಮುಖಂಡರಾದ ಜಯ ಪ್ರಕಾಶ್, ಎಸ್.ವಿ.ಗೀತಾ, ಮಂಜುನಾಥ್, ಮಕ್ದುಂ, ಗಿರೀಶ್, ಪ್ರವೀಣ್ ಸಿಂದೆ, ಶ್ರೀಧರ್, ಇಮ್ರಾನ್, ಕೆ.ಪಿ.ರಾಘವೇಂದ್ರ, ವೆಂಕಿ,ಮಧುಸೂಧನ್, ಮಹಮ್ಮದ್ ಯೂನಸ್, ನಾಗೇಂದ್ರಪ್ಪ, ಸಚ್ಚಿನ್, ಶಿಲ್ಪ, ಶೊಹಿಬ್ ಉದ್ದೀನ್, ಷರೀಫ್, ಟಿ.ಎಸ್.ಬಾಲಾಜಿ, ನಯಾಜ್ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.