ADVERTISEMENT

ತುಮಕೂರು: ವೀರ ಸಾವರ್ಕರ್ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು, ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 7:12 IST
Last Updated 16 ಆಗಸ್ಟ್ 2022, 7:12 IST
ವೀರ ಸಾವರ್ಕರ್ ಚಿತ್ರವಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವ ದೃಶ್ಯ
ವೀರ ಸಾವರ್ಕರ್ ಚಿತ್ರವಿದ್ದ ಫ್ಲೆಕ್ಸ್‌ಗಳನ್ನು ಹರಿದು ಹಾಕಿರುವ ದೃಶ್ಯ   

ತುಮಕೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದಲ್ಲಿ ಅಳವಡಿಸಿದ್ದ ವೀರ ಸಾವರ್ಕರ್ ಚಿತ್ರವಿದ್ದ ಫ್ಲೆಕ್ಸ್‌ಗಳನ್ನು ಸೋಮವಾರ ರಾತ್ರಿ ಹರಿದು ಹಾಕಲಾಗಿದೆ.

ನಗರದ ಹೃದಯ ಭಾಗವಾದ ಅಶೋಕ ರಸ್ತೆ, ಬಿ.ಎಚ್.ರಸ್ತೆ ಸೇರಿದಂತೆ ವಿವಿಧೆಡೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸ್ವಾತಂತ್ರ್ಯ ಹೋರಾಟಗಾರರ ಫ್ಲೆಕ್ಸ್ ಹಾಕಿಸಿದ್ದರು‌. ಆದರೆ ವೀರ ಸಾವರ್ಕರ್ ಚಿತ್ರವಿರುವ ಫ್ಲೆಕ್ಸ್‌ಗಳನ್ನು ಮಾತ್ರ ಹರಿದು ಹಾಕಿದ್ದಾರೆ.

ಮೂರು ದಿನಗಳ ಹಿಂದೆ ಫ್ಲೆಕ್ಸ್ ಹಾಕಲಾಗಿದ್ದು, ಮಹಾನಗರ ಪಾಲಿಕೆ ಅಧಿಕಾರಿಗಳು ನಗರದಲ್ಲಿ ಅಳವಡಿಸಿದ್ದ ಎಲ್ಲಾ ಫ್ಲೆಕ್ಸ್‌ಗಳನ್ನು ಮಂಗಳವಾರ ಬೆಳಿಗ್ಗೆ ತೆರವುಗೊಳಿಸಿದ್ದಾರೆ.

ADVERTISEMENT

ಬಂಧನಕ್ಕೆ ಆಗ್ರಹ: ಫ್ಲೆಕ್ಸ್ ಹರಿದ ಕಿಡಿಗೇಡಿಗಳಿಗೆ ಕಂಡಲ್ಲಿ ಗುಂಡು ಹೊಡೆಯಬೇಕು ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯ ಜನ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾರೆ. ಜಿಲ್ಲೆ ಮತ್ತೊಂದು ಶಿವಮೊಗ್ಗ, ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿಯಾಗುವುದು ಬೇಡ. ಪೊಲೀಸ್ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ಸಾವರ್ಕರ್ ಕಂಡರೆ ಕೆಲವರಿಗೆ ಭಯ. ಅದಕ್ಕಾಗಿ ಫ್ಲೆಕ್ಸ್ ಹರಿದಿದ್ದಾರೆ. ನಗರದಲ್ಲಿನ ಎಲ್ಲ ಫ್ಲೆಕ್ಸ್‌ಗಳನ್ನು ತೆಗೆದು ಹಾಕಿರುವುದು ತಪ್ಪು. ಫ್ಲೆಕ್ಸ್ ತೆರವುಗೊಳಿಸಿದ ಪಾಲಿಕೆಯ ಆಯುಕ್ತರನ್ನು ಅಮಾನತುಗೊಳಿಸಬೇಕು. ರಾಷ್ಟ್ರದ ಏಕತೆಗೆ ಧಕ್ಕೆ ತರುವ, ಶಾಂತಿ, ಸುವ್ಯವಸ್ಥೆ ಹಾಳು ಮಾಡುವವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.