ತುಮಕೂರು: ಡಿ.ಕೆ. ಶಿವಕುಮಾರ್ ಕಾನೂನು ಪಾಲಿಸಬೇಕು. ನಾವು ಸಿಬಿಐ ಮೂಲಕ ಅವರನ್ನು ಎದುರಿಸುತ್ತಿಲ್ಲ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವರು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿ,ರೋಷನ್ ಬೇಗ್ ಅವರ ಮೇಲೆ ಸಿಬಿಐ ಕಾನೂನು ರೀತಿಯಲ್ಲಿ ದಾಳಿ ನಡೆಸಿ ಬಂಧಿಸಿದೆ. ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆ ಬಗ್ಗೆ ಮುಖ್ಯಮಂತ್ರಿ ಅವರು ತೀರ್ಮಾನ ಕೈಗೊಳ್ಳುವರು ಎಂದರು.
ಸಿಎಂ ಬದಲಾವಣೆ ಇಲ್ಲ: ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೇಟಿಗೆ ನಿರಾಕರಿಸಿದ್ದಾರೆ . ಇದು ಮುಖ್ಯಮಂತ್ರಿ ಬದಲಾವಣೆ ಮುನ್ಸೂಚನೆ ಎಂಬ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ, ಅಮಿತ್ ಶಾ ಅವರನ್ನು ಭೇಟಿಯಾಗುವ ಕಾರ್ಯಕ್ರಮವೇ ಇರಲಿಲ್ಲ. ಕಾಂಗ್ರೆಸ್ ಮುಖಂಡರು ತಮಗೆ ಅನಿಸಿದಂತೆ ಮಾತನಾಡುತ್ತಾರೆ. ಅವರ ನಡೆಗಳು ಬೇಜವಾಬ್ದಾರಿಯುತವಾಗಿದೆ ಎಂದರು.
ಶಿರಾ ಉಪಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ವಿರೋಧ ಪಕ್ಷದವರು ಸಹ ಹಣ ಖರ್ಚು ಮಾಡಿದ್ದಾರೆ ಎಂದು ಹೇಳಿದರು.
ಶಾಲಾ ಕಾಲೇಜು ಆರಂಭದ ವಿಚಾರದಲ್ಲಿ ಮುಖ್ಯಮಂತ್ರಿ ಅವರು ನಡೆಸುವ ಸಭೆಯಲ್ಲಿ ತಜ್ಞರ ವರದಿ, ಪೋಷಕರ ಅಭಿಪ್ರಾಯ, ಸಚಿವರ ಅಭಿಪ್ರಾಯ ಪರಿಶೀಲಿಸಿ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳುವರು ಎಂದು ಹೇಳಿದರು.
ಆನ್ ಲೈನ್ ತರಗತಿಗಳು ಸಹ ನಡೆಯುತ್ತಿವೆ. ಮಕ್ಕಳು ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.