ಕುಣಿಗಲ್: ಲಿಂಕ್ ಕೆನಾಲ್ಗೆ ತಾಲ್ಲೂಕಿನ ರಾಜಕೀಯ ಪಕ್ಷ, ಸಂಘ ಸಂಸ್ಥೆಗಳ ವಿರೋಧವಿಲ್ಲ. ಆದರೆ ಹೇಮಾವತಿ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗದಿರುವ ಬಗ್ಗೆ ಸರ್ಕಾರದಿಂದ ಆದೇಶ ಹೊರಡಿಸಿ ಕೆಲವು ಗೊಂದಲಗಳಿಗೆ ಶಾಸಕರು ತೆರೆ ಎಳೆಯಬೇಕು ಎಂದು ತಾಲ್ಲೂಕಿನ ರಾಜಕೀಯ ಪಕ್ಷ, ಸಂಘ ಸಂಸ್ಥಗಳ ಪದಾಧಿಕಾರಿಗಳು ಶುಕ್ರವಾರ ಸಭೆ ಸೇರಿ ಆಗ್ರಹಿಸಿದರು.
ಬಿಜೆಪಿ, ಜೆಡಿಎಸ್, ಡಿಸೆಂಬರ್ 26ರಂದು ವಿತರಣೆ ನಾಲಾ ಹೋರಾಟ ಸಮಿತಿ, ಕೆಆರ್ಎಸ್, ರಾಜ್ಯ ರೈತಸಂಘ, ಕನ್ನಡ ಸಾಹಿತ್ಯ ಪರಿಷತ್, ವಕೀಲರ ಸಂಘ, ಕರವೇ ಸೇರಿದಂತೆ ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು ಕನ್ನಡ ಭವನದಲ್ಲಿ ಸಭೆ ಸೇರಿ ಚರ್ಚಿಸಿದ ನಂತರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್.ಜಗದೀಶ್, ಶಾಸಕರು ತಾಲ್ಲೂಕಿನ ಜನರ ಗೊಂದಲಗಳನ್ನು ನಿವಾರಿಸಲು ಆಗ್ರಹಿಸಿದರು. 18ರಂದು ತಾಲ್ಲೂಕು ಸಮಗ್ರ ನೀರಾವರಿ ಹೋರಾಟ ಸಮಿತಿಯಿಂದ ಲಿಂಕ್ ಕೆನಾಲ್ಗೆ ಆಗ್ರಹಿಸಿ ಹೋರಾಟಕ್ಕೆ ನಿರ್ಣಯ ಕೈಗೊಂಡಿರುವುದಾಗಿ ಘೋಷಣೆ ಮಾಡಿದರು.
ರೈತ ಸಂಘದ ಆನಂದ್ ಪಟೇಲ್, ಲಿಂಕ್ ಕೆನಾಲ್ ಅನ್ನು ವಿತರಣಾ ನಾಲೆ 26 ಬಿಟ್ಟು ಮುಂದಿನ ಭಾಗದಿಂದ ಪ್ರಾರಂಭ ಮಾಡಿರುವುದರಿಂದ ತಾಲ್ಲೂಕಿಗೆ ಅನ್ಯಾಯವಾಗಿದೆ. ತಾಲ್ಲೂಕಿಗೆ ನಿಗದಿಯಾಗಿರುವ 3.3 ಟಿಎಂಸಿ ನೀರು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಲು ತಾಲ್ಲೂಕಿನಲ್ಲಿ ಮೂಲ ಯೋಜನೆ ಪ್ರಕಾರ ಬಾಕಿ ಉಳಿದಿರುವ 240 ಕಿಮೀ ವರೆಗಿನ ಸಂಪರ್ಕ ನಾಲೆಗಳನ್ನು ಅಭಿವೃದ್ಧಿ ಪಡಿಸಲು ಮನವಿ ಮಾಡಿದರು.
ಶ್ರೀರಂಗ ಏತನೀರಾವರಿ ಯೋಜನೆಗಾಗಿ ಲಿಪ್ಟ್ ಮಾಡಲು ನಿರ್ಮಿಸಿರುವ ಪಂಪ್ಹೌಸ್ಗಳನ್ನು ತೆರವುಗೊಳಿಸಲು ಆಗ್ರಹಿಸಿದರು. 200 ಕೋಟಿ ವೆಚ್ಚದಲ್ಲಿ ಪೂರ್ಣವಾಗುವ ತಾಲ್ಲೂಕು ಸಮಗ್ರ ನೀರಾವರಿ ಯೋಜನೆಗೆ ಮನಸು ಮಾಡದೆ, ₹1,400 ಕೋಟಿ ವೆಚ್ಚದ ಕಳಪೆ ಕಾಮಗಾರಿ ಯೋಜನೆಗೆ ಕ್ರಮಕೈಗೊಂಡಿದ್ದು ಸರಿಯಲ್ಲ. ಕೇವಲ 20 ಕಿಮೀ ದೂರದ ಶಿಂಷಾ ನದಿಯಿಂದ ಹುತ್ರಿದುರ್ಗ ಹೋಬಳಿಗೆ ನೀರು ಹರಿಸುವ ಬದಲು 240 ಕಿಮೀ ದೂರದಿಂದ ನೀರು ಹರಿಸುವ ಅಗತ್ಯವಿಲ್ಲ ಎಂದರು.
ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ, ತಾಲ್ಲೂಕಿಗೆ ನಿಗದಿಯಾಗಿರುವ ಮೂರು ಟಿಎಂಸಿ ನೀರಿನಲ್ಲಿಯೇ ಒಂದು ಟಿಎಂಸಿ ನೀರು ಮಾಗಡಿಗೆ ನಿಗದಿ ಮಾಡಿ ಹರಿಸುವ ಯತ್ನ ಮಾಡುತ್ತಿರುವುದು ಸರಿಯಲ್ಲ. ಮಾಗಡಿಗೆ ನಿಗದಿಯಾಗಿರುವ ನೀರಿನ ಪ್ರಮಾಣದ ಆದೇಶ ರದ್ದುಪಡಿಸಿ, ಹೊಸದಾಗಿ ನಿಗದಿಪಡಿಸಿ. ಕುಣಿಗಲ್ ಪಾಲಿನ ನೀರಿಗೆ ಜಿಲ್ಲೆಯ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಪರೋಕ್ಷವಾಗಿ ಮಾಗಡಿಗೆ ತೆಗೆದುಕೊಂಡು ಹೋಗುವ ಹುನ್ನಾರಕ್ಕೆ ವಿರೋಧವಿದೆ. ವಿತರಣೆ ನಾಲಾ 26 ಲಿಂಕ್ ಕೆನಾಲ್ ವ್ಯಾಪ್ತಿಗೆ ಸೇರಿಸಲು ಆಗ್ರಹಿಸಿದರು.
ಕೆಆರ್ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ರಘೂ ಜಾಣಗೆರೆ, ತಾಲ್ಲೂಕಿನ ಪಾಲಿನ ನೀರನ್ನು ಪಡೆಯಲು ಪ್ರಾರಂಭವಾಗುತ್ತಿರುವ ಲಿಂಕ್ ಕೆನಾಲ್ ಯೋಜನೆಯಲ್ಲಿರುವ ಗೊಂದಲಗಳನ್ನು ಶಾಸಕರು ನಿವಾರಿಸಬೇಕಿದೆ. ಶಾಸಕರ ನಡೆ ಗೊಂದಲಗಳ ಸೃಷ್ಟಿಗೆ ಕಾರಣವಾಗಿದೆ. ತುಮಕೂರು ಜಿಲ್ಲೆಯ ತಾಲ್ಲೂಕುಗಳ ನಡುವೆ ಮತ್ತು ಪಕ್ಕದ ಮಾಗಡಿ ತಾಲ್ಲೂಕು ಜನರ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಎಲ್ಲರ ವಿಶ್ವಾಸ ಪಡೆದು ಯೋಜನೆಯ ಸದುಪಯೋಗಪಡೆದುಕೊಳ್ಳಲು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಪನಿಪಾಳ್ಯ ರಮೇಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸಿಂಗಯ್ಯ, ತಾಲ್ಲೂಕು ಬಿಜೆಪಿ ಅಧ್ಯಕ್ಷ ದಿನೇಶ್ ಕುಮಾರ್, ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಅಧ್ಯಕ್ಷ ಕರಿಗೌಡ, ಅನಿಲ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಮಾಜಿ ಸದಸ್ಯ ಕೆ.ಎಸ್.ಬಲರಾಂ, ಕಾಡುಗೊಲ್ಲ ಹೋರಾಟ ಅಸ್ಮಿತೆ ಸಮಿತಿ ಸಂಚಾಲಕ ಜಿ.ಕೆ.ನಾಗಣ್ಣ, ಕಸಾಪ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಕರವೇ ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.