ADVERTISEMENT

ದಾಂಪತ್ಯಕ್ಕೆ ಬೆಸುಗೆ ಹಾಕಿದ ಮತದಾನ, ಮುನಿಸು ಮರೆತು ಮತಗಟ್ಟೆಯಲ್ಲಿ ಒಂದಾದ ದಂಪತಿ!

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 19:30 IST
Last Updated 28 ಡಿಸೆಂಬರ್ 2020, 19:30 IST
ಗೋವಿಂದಪ್ಪ ಮತ್ತು ಗುರುಶಾಂತಮ್ಮ ದಂಪತಿ
ಗೋವಿಂದಪ್ಪ ಮತ್ತು ಗುರುಶಾಂತಮ್ಮ ದಂಪತಿ   

ತುಮಕೂರು: ಭಾನುವಾರ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನವು ದೂರವಾಗಿದ್ದ ಸತಿ–ಪತಿಯನ್ನು ಒಗ್ಗೂಡಿಸಿದ ಅಪರೂಪದ ಪ್ರಸಂಗಕ್ಕೆ ಸಾಕ್ಷಿಯಾಯಿತು.

ಶಿರಾ ತಾಲ್ಲೂಕು ಮದಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಿಗೆರೆಯ ಗೋವಿಂದಪ್ಪ ಮತ್ತು ಸೀಗಲಹಳ್ಳಿಯ ಗುರುಶಾಂತಮ್ಮ ವಿವಾಹ ಐದು ವರ್ಷಗಳ ಹಿಂದೆ ನಡೆದಿತ್ತು. ಆರೇಳು ತಿಂಗಳ ಹಿಂದೆ ದಾಂಪತ್ಯದಲ್ಲಿ ಬಿರುಕು ಮೂಡಿದ ಪರಿಣಾಮ ಗುರುಶಾಂತಮ್ಮ ತವರು ಮನೆ ಸೇರಿದ್ದರು.

ಮತ ನೀಡುವಂತೆ ಅಭ್ಯರ್ಥಿಯೊಬ್ಬರು ಗುರುಶಾಂತಮ್ಮ ಅವರನ್ನು ಕೋರಿದ್ದರು. ಅದಕ್ಕಾಗಿ ಭಾನುವಾರ ಮತ ಚಲಾಯಿಸಲು ಹುಳಿಗೆರೆಗೆ ಗುರುಶಾಂತಮ್ಮ ಬಂದಿದ್ದರು. ಇದೇ ವೇಳೆ ಗೋವಿಂದಪ್ಪ ಸಹ ಮತಗಟ್ಟೆಗೆ ಬಂದಿದ್ದಾರೆ. ಆಗ ಮತಗಟ್ಟೆಯಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದಾರೆ. ಮುನಿಸು ಮರೆತ ದಂಪತಿ ಮತ್ತೆ ಒಂದಾಗುವ ಮನಸ್ಸು ಮಾಡಿದರು. ಮತದಾನ ಮಾಡಿದ ಗುರುಶಾಂತಮ್ಮ ಪತಿ ಜತೆಗೂಡಿ ನೇರವಾಗಿ ಮನೆ ಸೇರಿದರು.

ADVERTISEMENT

‘ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಚಂದ್ರಶೇಖರ್ ಅವರು ನಮ್ಮನ್ನು ಒಂದು ಮಾಡಲು ಮೂರು ಸಲ ಪ್ರಯತ್ನಿಸಿದ್ದರು. ಆದರೂ ಸಾಧ್ಯವಾಗಿರಲಿಲ್ಲ. ಪಂಚಾಯಿತಿ ಚುನಾವಣೆಯಲ್ಲಿ ಮತ ನೀಡಲು ನನ್ನ ಪತ್ನಿ ಬಂದಾಗ ನಾನೂ ಅಲ್ಲೇ ಇದ್ದೆ. ಪತ್ನಿಯ ಮುಖ ನೋಡಿದ ತಕ್ಷಣ ಮನಸ್ಸು ಬದಲಾಯಿತು. ಇಬ್ಬರಿಗೂ ತಪ್ಪುಗಳು ಅರಿವಾದವು. ಒಂದಾದೆವು. ನನಗೆ ಹೆಚ್ಚಿನ ಖುಷಿ ಆಗಿದೆ. ಇನ್ನು ಮುಂದೆ ಸಂಸಾರದಲ್ಲಿ ಸಾಮರಸ್ಯದಿಂದ ಬದುಕುತ್ತೇವೆ’ ಎಂದು ಗೋವಿಂದಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.