ತುಮಕೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆಹೊತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ಬುಧವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ‘ಆತ್ಮಹತ್ಯೆ ವಿಚಾರದಲ್ಲಿ ಈಶ್ವರಪ್ಪ ಹೆಸರು ಕೇಳಿಬಂದಿದ್ದು, ಇದನ್ನು ನಾವು ನಂಬಬೇಕಿದೆ. ಮೊದಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.
ಸಾವಿಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಅವರ ಹೆಸರು ಇದೆ ಎಂಬ ಕಾರಣಕ್ಕೆ ಬಂಧಿಸಬೇಕಾಗಿಲ್ಲ. ಮೊದಲು ರಾಜೀನಾಮೆ ಕೊಟ್ಟು, ಪ್ರಾಥಮಿಕ ತನಿಖೆ ನಡೆಯಲಿ. ಸತ್ಯಾಂಶ ಕಂಡುಬಂದರೆ ಬಂಧಿಸಲಿ. ಈ ಘಟನೆ ಸಾರ್ವಜನಿಕ ಜೀವನದಲ್ಲಿ ಇರುವ ನಮ್ಮಂತಹವರು ತಲೆ ತಗ್ಗಿಸುವ ವಿಚಾರ. ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ಎಲ್ಲರಿಗೂ ಮುಜುಗರ ತರುವಂತಹುದು’ ಎಂದು ಹೇಳಿದರು.
ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ. ಆದರೆ ಈ ಕಮಿಷನ್ ವಿಚಾರ ನನ್ನ ಕ್ಷೇತ್ರದಲ್ಲಿ ಗಮನಕ್ಕೆ ಬಂದಿಲ್ಲ. ಗುತ್ತಿಗೆದಾರರು ಹಣ ಕೊಟ್ಟು, ಹಣ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.