ADVERTISEMENT

ತುಮಕೂರು: ಅದಾಲತ್‌ನಲ್ಲಿ 1.55 ಲಕ್ಷ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 30 ಮೇ 2023, 15:24 IST
Last Updated 30 ಮೇ 2023, 15:24 IST
ಬಿ.ಗೀತಾ
ಬಿ.ಗೀತಾ   

ತುಮಕೂರು: ಜಿಲ್ಲೆಯಲ್ಲಿ ಫೆ. 11ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 1,55,144 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಗೀತಾ ಮಂಗಳವಾರ ಹೇಳಿದರು.

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 89,447 ಪ್ರಕರಣಗಳಲ್ಲಿ 16,188 ಪ್ರಕರಣ ಹಾಗೂ ಪೂರ್ವ ವ್ಯಾಜ್ಯ ಪ್ರಕರಣಗಳು ಸೇರಿ ಒಟ್ಟು 1,55,144 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ರಾಜ್ಯವು ಈ ಹಿಂದಿನ ಲೋಕ ಅದಾಲತ್‍ಗಳಲ್ಲಿ ಹೆಚ್ಚಿನ ಪ್ರಕರಣ ವಿಲೇವಾರಿ ಮಾಡಿ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜುಲೈ 8ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಲೋಕ ಅದಾಲತ್‌ ಏರ್ಪಡಿಸಲಾಗಿದೆ. ಜನ ಸಾಮಾನ್ಯರಿಗೆ ತ್ವರಿತವಾಗಿ, ವೆಚ್ಚವಿಲ್ಲದೆ ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಚೆಕ್ಕು ಅಮಾನ್ಯ, ಬ್ಯಾಂಕ್‌ ವಸೂಲಾತಿ, ಕಾರ್ಮಿಕರ ವಿವಾದ, ವಿದ್ಯುತ್, ನೀರಿನ ಶುಲ್ಕ ಹಾಗೂ ರಾಜಿಯಾಗಬಲ್ಲ, ವೈವಾಹಿಕ ಹಾಗೂ ಸಿವಿಲ್‌ ಪ್ರಕರಣಗಳು; ನ್ಯಾಯಾಲಯದಲ್ಲಿ ಬಾಕಿ ಇರುವ ಜಿಲ್ಲಾ ಗ್ರಾಹಕರ ಪರಿಹಾರ ಆಯೋಗದಲ್ಲಿನ ಪ್ರಕರಣಗಳು, ವೈವಾಹಿಕ, ಕುಟುಂಬ ನ್ಯಾಯಾಲಯ (ವಿಚ್ಛೇದನ ಹೊರತುಪಡಿಸಿ), ಮೋಟಾರು ಅಪಘಾತ ಪರಿಹಾರ, ಭೂ ಸ್ವಾಧೀನ ಪ್ರಕರಣ ಹಾಗೂ ಸಿವಿಲ್‌ ಪ್ರಕರಣ; ಕಾಯಂ ಜನತಾ ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾಹಿತಿಗೆ ಜಿಲ್ಲಾ ಕಾನೂನು ಸೇವಾ ಸಮಿತಿಯ ಈ ಮೇಲ್ ವಿಳಾಸ dlsatumkur1@gmail.com ಹಾಗೂ ಸದಸ್ಯ ಕಾರ್ಯದರ್ಶಿ ಕಚೇರಿ ದೂರವಾಣಿ 0816-2255133, ಮೊ 9141193959 ಸಂಪರ್ಕಿಸಿ ಖುದ್ದು ಹಾಜರಾಗುವ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.