ಶಿರಾ: ತಾಲ್ಲೂಕಿನ ನೇರಳಗುಡ್ಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದ ಕಾರಣ ರೋಗಿಗಳು ಸಂಕಷ್ಟ ಪಡುವಂತಾಗಿದೆ.
ನೇರಳಗುಡ್ಡ ಸುತ್ತಮುತ್ತ ಅತಿ ಹೆಚ್ಚು ಸಣ್ಣಪುಟ್ಟ ಗ್ರಾಮಗಳಿವೆ. ಇಲ್ಲಿ ವೈದ್ಯರು ಇಲ್ಲದ ಕಾರಣ ಈ ಭಾಗದ ಜನತೆ ಚಿಕಿತ್ಸೆಗಾಗಿ ಬುಕ್ಕಾಪಟ್ಟಣ, ತಾವರೆಕೆರೆ, ಶಿರಾಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೇರಳಗುಡ್ಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಇಲ್ಲಿಂದ ಒಂದು ವರ್ಷದ ಗ್ರಾಮೀಣ ಸೇವೆ ಮುಗಿಸಿ ಬೇರೆಡೆಗೆ ಹೋಗಿರುವುದರಿಂದ ಇಲ್ಲಿ ಒಂದೂವರೆ ತಿಂಗಳಿಂದ ವೈದ್ಯರು ಇಲ್ಲದಂತಾಗಿದೆ. ಅವರ ಬದಲು ಬೇರೆ ವೈದ್ಯರನ್ನು ವರ್ಗಾವಣೆ ಮಾಡದ ಕಾರಣ ಹೆಚ್ಚು ತೊಂದರೆಯಾಗುತ್ತಿದೆ.
ಬುಕ್ಕಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಾಲತಿ ಪ್ರಭಾರ ವೈದ್ಯರಾಗಿ ನೇಮಕಗೊಂಡಿದ್ದು, ಅವರು ಸಮೀಕ್ಷೆ, ವರದಿ, ಸಭೆ, ಫೊಕ್ಸೊ ಕಾಯ್ದೆ ವಿಚಾರಣೆ, ಪೊಲೀಸ್ ವಿಚಾರಣೆಯಂತಹ ಒತ್ತಡದಿಂದಾಗಿ ಬುಕ್ಕಾಪಟ್ಟಣ ಹಾಗೂ ನೇರಳಗುಡ್ಡ ಎರಡು ಕಡೆ ಕೆಲಸ ಮಾಡಲು ಕಷ್ಟವಾಗುತ್ತಿದೆ.
ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಜನರು ಹೆಚ್ಚು ಕಾಯಿಲೆಗಳಿಗೆ ಸಿಲುಕುತ್ತಿದ್ದು ದೂರದ ಆಸ್ಪತ್ರೆಗಳಿಗೆ ಹೋಗುವುದು ಕಷ್ಟವಾಗುತ್ತಿದೆ.
ಆದ್ದರಿಂದ ನೇರಳಗುಡ್ಡ ಕಿರಿಯ ಪ್ರಾಥಮಿಕ ಆರೋಗ್ಯಕ್ಕೆ ಆದಷ್ಟು ಶೀಘ್ರವಾಗಿ ವೈದ್ಯರನ್ನು ನೇಮಕ ಮಾಡಿ ಗ್ರಾಮೀಣ ಪ್ರದೇಶದ ಬಡವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.