ಶಿರಾ: ನಗರದ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಹೂವಿನ ವ್ಯಾಪಾರವನ್ನು ಸ್ಥಗಿತಗೊಳಿಸುವುದರಿಂದ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿರುವ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದಲ್ಲಿ ವ್ಯಾಪಾರ ನಡೆಸುವಂತೆ ಅಧಿಕಾರಿಗಳು ಮಂಗಳವಾರ ವ್ಯಾಪಾರಿಗಳಿಗೆ ಸೂಚನೆ ನೀಡಿದರು.
‘ಪ್ರಜಾವಾಣಿ’ ಪತ್ರಿಕೆಯಲ್ಲಿ ‘ನಿರೀಕ್ಷಿತ ವ್ಯವಹಾರ ಕಾಣದ ಮಾರುಕಟ್ಟೆ’ ಎಂಬ ಶೀರ್ಷಿಕೆಯಡಿ ಚಿಕ್ಕನಹಳ್ಳಿ ಗ್ರಾಮದ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದ ಬಗ್ಗೆ ವರದಿ ಪ್ರಕಟವಾಗಿತ್ತು. ಅಗತ್ಯ ಮೂಲ ಸೌಕರ್ಯ ನೀಡಿದರೂ ಮಾರುಕಟ್ಟೆಗೆ ಹೋಗಲು ರೈತರು ನಿರಾಶಕ್ತಿ ತೋರುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು.
ಶಿರಾದಲ್ಲಿ ಸೂಕ್ತ ಹೂವಿನ ಮಾರುಕಟ್ಟೆ ಇಲ್ಲದೆ ರಸ್ತೆ ಬದಿಯಲ್ಲಿ ಹೂವಿನ ವ್ಯಾಪಾರ ನಡೆಯುತ್ತಿದ್ದು ಈ ಮಾರುಕಟ್ಟೆಯನ್ನು ಚಿಕ್ಕನಹಳ್ಳಿಗೆ ಸ್ಥಳಾಂತರ ಮಾಡಿದರೆ ಮಾರುಕಟ್ಟೆಗೆ ಹೊಸ ಕಳೆ ಬಂದು ರೈತರಿಗೆ ಅನುಕೂಲವಾಗುವುದು ಎಂದು ವರದಿ ಮಾಡಲಾಗಿತ್ತು. ಪ್ರಜಾವಾಣಿ ವರದಿ ಪರಿಣಾಮವಾಗಿ ನಗರಸಭೆ ಅಧಿಕಾರಿಗಳು, ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದ ಸಹಾಯಕ ನಿರ್ದೇಶಕರು, ಪೊಲೀಸ್ ಇಲಾಖೆ ಶಾಸಕ ಟಿ.ಬಿ.ಜಯಚಂದ್ರ ಅವರ ಜತೆ ಚರ್ಚೆ ನಡೆಸಿ ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ಧಾರ ಮಾಡಿದ್ದಾರೆ.
ನಗರದಲ್ಲಿ ನಡೆಯುತ್ತಿದ್ದ ಹೂವಿನ ಮಾರುಕಟ್ಟೆಗೆ ಮಂಗಳವಾರ ಬೆಳಿಗ್ಗೆ ನಗರಸಭೆ ಪೌರಾಯುಕ್ತ ರುದ್ರೇಶ್, ಚಿಕ್ಕನಹಳ್ಳಿ ಪುಷ್ಪ ಹರಾಜು ಮಾರುಕಟ್ಟೆ ಕೇಂದ್ರದ ಸಹಾಯಕ ನಿರ್ದೇಶಕ ನಾಗರಾಜು ಅವರು ಪೊಲೀಸ್ ಇಲಾಖೆ ಜತೆ ತೆರಳಿ ಹೂವು ಮಾರಾಟಗಾರರಿಗೆ ಮೂರು ದಿನಗಳ ಕಾಲಾವಕಾಶ ನೀಡಿ, ಇಲ್ಲಿನ ಮಾರುಕಟ್ಟೆಯನ್ನು ನಿಲ್ಲಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.