ಕೋರ: ‘ರಾತ್ರಿ ಹನ್ನೆರಡು ಗಂಟೆಯಾದರೂ ನಿದ್ದೆ ಕೊಡುತ್ತಿಲ್ಲ. ಒಬ್ಬರಾದ ನಂತರ ಒಬ್ಬರು ಅಭ್ಯರ್ಥಿಗಳು ಬಂದು ಕದ ತಟ್ಟುತ್ತಾರೆ’ ಎಂಬ ಮಾತುಗಳು ಗ್ರಾಮಗಳಲ್ಲೀಗ ಸಾಮಾನ್ಯವಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ 8 ಗ್ರಾಮ ಪಂಚಾಯಿತಿಗಳಿದ್ದು, ಹೊಸ ಮುಖಗಳು, ಯುವಕರು, ಪದವೀಧರರು ಸ್ಪರ್ಧಿಸಿದ್ದಾರೆ. ಈಗಾಗಾಲೇ
ಸದಸ್ಯರಾಗಿ ಕಾರ್ಯನಿರ್ವಹಿಸಿರುವ ಅಭ್ಯರ್ಥಿಗಳು ಅಭಿವೃದ್ಧಿಯನ್ನು ಮಾನದಂಡವಾಗಿ ಪರಿಗಣಿತವಾಗುತ್ತಿದೆ. ಪಕ್ಷಗಳಿಗಿಂತ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಗೆಲುವು ನಿರ್ಧರಿತವಾಗಲಿದ್ದು, ಹಣ, ಹೆಂಡದ ಹಂಚಿಕೆಯೂ ನಡೆಯುತ್ತಿದೆ.
ಕೋರಾ ಹೋಬಳಿಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಮರೀಚಿಕೆಯಾಗಿವೆ. ಕೂಗಳತೆ ದೂರದಲ್ಲಿ ವಸಂತನರಸಾಪುರ ಕೈಗಾರಿಕಾ ಪ್ರದೇಶವಿದ್ದರೂ, ಈ ಭಾಗದಲ್ಲಿ ನಿರುದ್ಯೋಗ ನಿವಾರಣೆಯಾಗಿಲ್ಲ. ಈ ಎಲ್ಲ ಸಮಸ್ಯೆಗಳು ಚುನಾವಣೆಯ ಮಾನದಂಡ
ವಾಗದೆ ಪ್ರತಿಷ್ಠೆಯೇ ಮುಖ್ಯವಾಗಿದೆ.
ಚಿಕ್ಕತೊಟ್ಲುಕೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಗದ್ದೆ ಬಯಲುಗಳಲ್ಲಿ ಬಿರಿಯಾನಿ, ಹೆಂಡದ ಸಮಾರಾಧನೆ ನಿತ್ಯ ನಡೆಯುತ್ತಿದೆ. ಡಾಬಾಗಳು ರಾಜಕೀಯ ಚರ್ಚೆಯ ಕೇಂದ್ರ ಬಿಂದುಗಳಾಗಿವೆ. ದೇವಲಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರನ್ನು ಸೆಳೆಯಲು ಮನೆಮನೆಗೆ ಕುಕ್ಕರ್ ವಿತರಿಸಲು ಸಜ್ಜಾಗಿರುವ ವಿಚಾರ ತೀವ್ರ ಚರ್ಚೆಗೆ ಎಡೆನೀಡಿದೆ.
ಬೆಳಧರ ಗ್ರಾಮಪಂಚಾಯಿತಿಯ ಅಹೋಬಲ ಅಗ್ರಹಾರ ಗ್ರಾಮದಲ್ಲಿ ಅಭ್ಯರ್ಥಿಯೊಬ್ಬರು ನಿತ್ಯ ಹೆಂಡದ ಹೊಳೆ ಹರಿಸುತ್ತಿರುವ ವಿಚಾರ ಹೋಬಳಿಯಲ್ಲಿ ಚರ್ಚೆಗೆ ಕಾರಣವಾಗಿದೆ.
ಗ್ರಾಮಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಾಜಿ ಶಾಸಕ ಸುಧಾಕರ್ ಲಾಲ್ ಚಿಕ್ಕತೊಟ್ಲುಕೆರೆ, ಬೆಳಧರ, ದೇವಲಾಪುರ, ಕೆಸ್ತೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಶಾಸಕ ಡಾ.ಜಿ.ಪರಮೇಶ್ವರ ಬೆಂಬಲಿಗರೂ ಗ್ರಾಮ ಕದನದಲ್ಲಿದ್ದರೂ ಯಾವುದೇ ಸಹಾಯ ನೀಡಿಲ್ಲ ಎನ್ನುವ ಅಸಮಾಧಾನ ಕಾರ್ಯಕರ್ತರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.