ADVERTISEMENT

ತುಮಕೂರು: ಸರ್ಕಾರಿ ಶಾಲೆಗೆ ‘ಪಿಎಂಶ್ರೀ’ ಬಲ

ಜಿಲ್ಲೆಯ 19 ಶಾಲೆಗಳ ಉನ್ನತೀಕರಣ; ₹1.53 ಕೋಟಿ ಹಣ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 6:56 IST
Last Updated 26 ಮೇ 2025, 6:56 IST
ತುಮಕೂರು ತಾಲ್ಲೂಕಿನ ಊರ್ಡಿಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ತುಮಕೂರು ತಾಲ್ಲೂಕಿನ ಊರ್ಡಿಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ    

ತುಮಕೂರು: ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂಶ್ರೀ’ ಯೋಜನೆ ಶಾಲೆಗಳಿಗೆ ಹೊಸ ಚೈತನ್ಯ ತುಂಬಿದೆ.

ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ 11, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ಸೇರಿ ಒಟ್ಟು 19 ಶಾಲೆಗಳು ಪಿಎಂಶ್ರೀ ಯೋಜನೆಯಡಿ ಆಯ್ಕೆಯಾಗಿವೆ. ಎರಡು ಶೈಕ್ಷಣಿಕ ಜಿಲ್ಲೆಗಳಿಂದ ಮೊದಲ ಹಂತದಲ್ಲಿ 11 ಶಾಲೆ ಆಯ್ಕೆ ಮಾಡಲಾಗಿತ್ತು. ಎರಡನೇ ಹಂತದಲ್ಲಿ ಮತ್ತೆ ಹೊಸದಾಗಿ 8 ಶಾಲೆಗಳು ಯೋಜನೆಗೆ ಸೇರ್ಪಡೆಯಾಗಿವೆ. ಕೇಂದ್ರ ಸರ್ಕಾರದಿಂದ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ.

19 ಶಾಲೆಗಳ ಅಭಿವೃದ್ಧಿಗೆ ಕಳೆದ ಎರಡು ವರ್ಷದಲ್ಲಿ ₹1.53 ಕೋಟಿ ಹಣ ಬಿಡುಗಡೆಯಾಗಿದೆ. ಇದರಲ್ಲಿ 2025ರ ಮಾರ್ಚ್‌ ಅಂತ್ಯದ ವರೆಗೆ ₹1.26 ಕೋಟಿ ವೆಚ್ಚ ಮಾಡಲಾಗಿದೆ. ₹26.70 ಲಕ್ಷ ಬಾಕಿ ಉಳಿದಿದೆ. ಐದು ವರ್ಷಗಳ ವರೆಗೆ ಅನುದಾನ ನೀಡಲಾಗುತ್ತದೆ. ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಯೋಜನೆ ಪ್ರಮುಖ ಉದ್ದೇಶವಾಗಿದೆ.

ADVERTISEMENT

ಪ್ರಾರಂಭದಲ್ಲಿ ಶೇ 70 ರಷ್ಟು ಹಣ ಮಕ್ಕಳ ಕಲಿಕೆಗೆ, ಶೇ 30 ರಷ್ಟು ಮೂಲಭೂತ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತಿತ್ತು. ಈಗ ಶೇ 50 ರಷ್ಟು ಅಗತ್ಯ ಸೌಕರ್ಯ ಒದಗಿಸಲು ಖರ್ಚು ಮಾಡಲಾಗುತ್ತಿದೆ. ಶಾಲೆಗಳಲ್ಲಿ ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರಿನ ಘಟಕ ಆರಂಭಿಸುವ ಮೂಲಕ ಶಾಲೆಗೆ ಹೊಸ ರೂಪ ಕೊಡಲಾಗುತ್ತಿದೆ. ಮಕ್ಕಳಿಗೆ ಕಂಪ್ಯೂಟರ್‌ ತರಬೇತಿ ನೀಡಲಾಗುತ್ತಿದೆ. ಇದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೂ ನೆರವಾಗುತ್ತಿದೆ.

ತೋವಿನಕೆರೆ ಮಾದರಿ: ಕೊರಟಗೆರೆ ತಾಲ್ಲೂಕಿನ ತೋವಿನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತುಮಕೂರಿನ ಊರ್ಡಿಗೆರೆಯ ಸರ್ಕಾರಿ ಶಾಲೆಗಳು ಪಿಎಂಶ್ರೀ ಯೋಜನೆಯಡಿ ಅನುದಾನ ಸದುಪಯೋಗ ಪಡಿಸಿಕೊಂಡು ಗಮನ ಸೆಳೆಯುತ್ತಿವೆ. ಮಕ್ಕಳಿಗೆ ಸಿರಿ ಧಾನ್ಯ ಆಹಾರ ಪೂರೈಕೆ ಮೂಲಕ ಅಪೌಷ್ಟಿಕತೆ ತೊಲಗಿಸುವ ಕಾರ್ಯವೂ ಇಲ್ಲಿ ನಡೆಯುತ್ತಿದೆ.

ತೋವಿನಕೆರೆ ಶಾಲೆಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ, ಮಕ್ಕಳ ಕಲಿಕೆಗೆ ಪೂರಕವಾದ ಪ್ರಯೋಗಾಲಯ ಆರಂಭ, ಎಲ್‌ಕೆಜಿ, ಯುಕೆಜಿ ಪ್ರಾರಂಭಕ್ಕೆ ಬೇಕಾದ ಕಲಿಕಾ ಪರಿಕರ ಖರೀದಿಸಲಾಗಿದೆ. ಯೋಗ, ಕರಾಟೆ ತರಬೇತಿ ನೀಡಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಲಾಗುತ್ತಿದೆ. ಯೋಗ ತರಗತಿಗಳು ನಡೆಯುತ್ತಿವೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲೆಯ ಮಕ್ಕಳಿಗೆ ಪಿಎಂಶ್ರೀ ಯೋಜನೆಯಡಿ ಕಿರು ಧಾನ್ಯಗಳ ಆಹಾರ ಪೂರೈಕೆ ಮಾಡಲಾಗುತ್ತಿತ್ತು. ಮಕ್ಕಳು ವಾರದಲ್ಲಿ ಎರಡು ದಿನ ಕಿರು ಧಾನ್ಯ ರೊಟ್ಟಿ, ಪಾಯಸದ ರುಚಿ ನೋಡುತ್ತಿದ್ದರು. ಸ್ವ–ಸಹಾಯ ಸಂಘದ ಮಹಿಳೆಯರು ತಯಾರಿಸಿದ ಆಹಾರ ಶಾಲೆಗೆ ಸರಬರಾಜು ಮಾಡಲಾಗುತ್ತಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದನ್ನು ಮುಂದುವರಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಗುಣಮಟ್ಟ ಶಿಕ್ಷಣಕ್ಕೆ ಕ್ರಮ ಶಾಲೆಗಳಿಗೆ ಅಗತ್ಯ ಸೌಕರ್ಯ ₹1.26 ಕೋಟಿ ಖರ್ಚು

ಆಯ್ಕೆಯಾದ ಶಾಲೆ

ನಗರದ ಮರಳೂರು ತಾಲ್ಲೂಕಿನ ಊರ್ಡಿಗೆರೆ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಮ್ಮಡಿಹಳ್ಳಿ ಸರ್ಕಾರಿ ಪ್ರೌಢಶಾಲೆ ಗುಬ್ಬಿ ಪಟ್ಟಣದ 10ನೇ ವಾರ್ಡ್‌ನ ಬಾಲಕರ ಸರ್ಕಾರಿ ಪ್ರೌಢ ಶಾಲೆ ಮತ್ತು ಕಾಡಶೆಟ್ಟಿಹಳ್ಳಿ ಸರ್ಕಾರಿ ಶಾಲೆ ಕುಣಿಗಲ್‌ ಪಟ್ಟಣದ 12ನೇ ವಾರ್ಡ್‌ ವ್ಯಾಪ್ತಿಯ ಸರ್ಕಾರಿ ಶಾಲೆ ಹಾಗೂ ತಾಲ್ಲೂಕಿನ ನಾಗಸಂದ್ರ ಶಾಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಹಳೇಪಾಳ್ಯ ಸರ್ಕಾರಿ ಶಾಲೆ ತುರುವೇಕೆರೆ ಪಟ್ಟಣದ ಸರ್ಕಾರಿ ಶಾಲೆ ತಾಲ್ಲೂಕಿನ ದಂಡಿನಶಿವರ ಶಾಲೆ. ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಿರಿನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಧುಗಿರಿ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಬಾಲಕರ ಶಾಲೆ ಬಡವನಹಳ್ಳಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪಾವಗಡ ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ರೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳ್ಳಂಬೆಳ್ಳದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳು ಆಯ್ಕೆಯಾಗಿವೆ.

ಹಣ ದುರುಪಯೋಗ

ಜಿಲ್ಲೆಯಲ್ಲಿ ಪಿಎಂಶ್ರೀ ಯೋಜನೆಯ ಹಣ ದುರುಪಯೋಗ ಪ್ರಕರಣಗಳು ವರದಿಯಾಗಿವೆ. ಖರ್ಚು ಮಾಡಿದ ಹಣಕ್ಕೆ ಸರಿಯಾದ ಲೆಕ್ಕ ಕೊಡದ ಕಾರಣಕ್ಕೆ ಮುಖ್ಯ ಶಿಕ್ಷಕಿಯೊಬ್ಬರು ಅಮಾನತುಗೊಂಡಿದ್ದಾರೆ. ಮಧುಗಿರಿ ಪಟ್ಟಣದ ಕೆ.ಆರ್.ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಡುಗಡೆಯಾದ ಅನುದಾನ ಸರಿಯಾಗಿ ಬಳಸದ ಬಿಲ್‌ ಪಾವತಿ ಮಾಡದ ಆರೋಪದ ಮೇಲೆ ಮುಖ್ಯ ಶಿಕ್ಷಕಿ ಎಚ್.ಎಸ್.ಅನುಪಮಾ ಅವರನ್ನು ಅಮಾನತುಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.