ADVERTISEMENT

ತುಮಕೂರಿಗೆ ಮೋದಿ: ಸ್ಮಾರ್ಟ್‌ ಆಗ್ತಿದೆ ಬಿ.ಎಚ್. ರಸ್ತೆ

ಪ್ರಧಾನಿ ಭೇಟಿಗೆ ಸಜ್ಜಾಗುತ್ತಿದೆ ತುಮಕೂರು; ಸ್ಮಾರ್ಟ್‌ ಆಗುತ್ತಿವೆ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 10:02 IST
Last Updated 31 ಡಿಸೆಂಬರ್ 2019, 10:02 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಜ.2ರಂದು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ನಗರದಲ್ಲಿಯೇ ಮೊಕ್ಕಾಂ ಹೂಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ಬಿ.ಎಚ್.ರಸ್ತೆ ರಾತ್ರೋರಾತ್ರಿ ಸ್ಮಾರ್ಟ್‌ ಆಗುತ್ತಿದೆ. ಹಲವು ದಿನಗಳಿಂದ ಗುಂಡಿ ಬಿದ್ದಿದ್ದ ರಸ್ತೆಗೆ ಡಾಂಬರು ಹಾಕಲಾಗುತ್ತಿದೆ. ಈಗಾಗಲೇ ರಸ್ತೆಯ ಎರಡು ಬದಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಸಿದ್ಧಗಂಗಾ ಮಠ, ಜೂನಿಯರ್ ಕಾಲೇಜು ಮೈದಾನ ಸೇರಿದಂತೆ ಹಲವೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

ಜ.2ರಂದು ಮದ್ಯ ಮಾರಾಟ ನಿಷೇಧ: ಜ.2ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ರಾಜ್ಯ ಪಾನಿಯ ನಿಗಮದ ಘಟಕಗಳನ್ನು ಹೊರತು ಪಡಿಸಿ ಪಾಲಿಕೆ ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ADVERTISEMENT

ಇಂದು ಸಿ.ಎಂ ಪ್ರವಾಸ: ಕಾರ್ಯಕ್ರಮದ ರೂಪುರೇಷೆ ಪರಿಶೀಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಿ.31 ರಂದು ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ 11ಕ್ಕೆ ಸಮಾರಂಭದ ಸ್ಥಳ ಪರಿಶೀಲನೆ ಹಾಗೂ ಸಚಿವರು, ಸಂಸದರು, ಶಾಸಕರು, ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಕಳೆದ ಒಂದು ವಾರದಿಂದ ವಿವಿಧ ಸಚಿವರು, ಶಾಸಕರು ನಿರಂತರವಾಗಿ ತುಮಕೂರಿಗೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಮುಖರನ್ನು ಹೊರತುಪಡಿಸಿ ಪೊಲೀಸರು ಯಾರೊಬ್ಬರನ್ನೂ ಬಿಡುತ್ತಿಲ್ಲ. ಕೇಂದ್ರದ ಭದ್ರತಾ ಪಡೆಯ ಸಿಬ್ಬಂದಿ ಈಗಾಗಲೇ ತುಮಕೂರಿಗೆ ಭೇಟಿ ನೀಡಿ ಭದ್ರತೆ ಮತ್ತಷ್ಟು ಬಿಗಿಪಡಿಸಿದ್ದಾರೆ.

ಸಾರ್ವಜನಿಕರಿಂದ ಹಿಡಿಶಾಪ:ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ದಿಢೀರನೇ ಪ್ರಮುಖ ರಸ್ತೆಗಳಲ್ಲಿ ಕಾಮಗಾರಿ, ದೂಳು ತೆಗೆಯುವುದು, ಸ್ವಚ್ಛತೆ ಮತ್ತಿತರ ಕಾರ್ಯಗಳು ನಡೆಯುತ್ತಿದೆ. ಸಾರ್ವಜನಿಕರ ಓಡಾಡಕ್ಕೆ ತೊಂದರೆ ಆಗುತ್ತಿದೆ. ಟ್ರಾಫಿಕ್‌ನಲ್ಲಿ ಸಿಲುಕಿ ಸವಾರರು, ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಧಾನಿ ಬಗ್ಗೆ ಇರುವ ಕಾಳಜಿ ಜನರ ಬಗ್ಗೆ ಏಕಿಲ್ಲ? ಎಂಬುದನ್ನು ಪ್ರಶ್ನಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.