ADVERTISEMENT

ತುಮಕೂರು: ಸೂಪರ್ ಸೀಡ್ ಖಂಡಿಸಿ ಡಿಸಿಸಿ ಬ್ಯಾಂಕ್ ನೌಕರರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 6:53 IST
Last Updated 22 ಜುಲೈ 2019, 6:53 IST
   

ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸೂಪರ್ ಸೀಡ್ ಮಾಡಿರುವುದನ್ನು ಖಂಡಿಸಿ ಬ್ಯಾಂಕಿನ ನೌಕರರ ಯೂನಿಯನ್ ನೇತೃತ್ವದಲ್ಲಿ ನೌಕರರು ಸೋಮವಾರ ಬ್ಯಾಂಕಿನ ಮುಂದೆ ಪ್ರತಿಭಟನೆ ಮಾಡಿದರು.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಘೋಷಣೆ ಕೂಗಿದರು.

ಯೂನಿಯನ್ ಕಾರ್ಯದರ್ಶಿ ಮಧುಸೂದನ್ ಮಾತನಾಡಿ, ' ನಮ್ಮ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಅಕ್ರಮಗಳು ನಡೆದಿಲ್ಲ. ವಿನಾಕಾರಣ ಸೂಪರ್ ಸೀಡ್ ಮಾಡಲಾಗಿದೆ. ರಾಜಕೀಯ ದ್ವೇಷದಿಂದ ಸೂಪರ್ ಸೀಡ್ ಮಾಡಲಾಗಿದೆ. ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು. ಆಡಳಿತ ಮಂಡಳಿಗೆ ಮತ್ತೆ ಅಧಿಕಾರವಹಿಸಿಕೊಡಬೇಕು ಎಂದು ಒತ್ತಾಯ ಮಾಡಿದರು.

ಗ್ರಾಹಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಪ್ರತಿಭಟಿಸಲಾಗುತ್ತಿದೆ. ಕಪ್ಪು ಪಟ್ಟಿ ಧರಿಸಿಕೊಂಡು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಹದಿನೈದು ವರ್ಷದಲ್ಲಿ ಇಡೀ ರಾಜ್ಯದಲ್ಲಿಯೇ ಯಾವ ಡಿಸಿಸಿ ಬ್ಯಾಂಕ್ ಮಾಡದ ಸಾಧನೆಯನ್ನು ನಮ್ಮ ಡಿಸಿಸಿ ಬ್ಯಾಂಕ್ ಮಾಡಿದೆ. ರೈತರು, ಬಡವರು, ಅಸಹಾಯಕರು, ಸ್ವಸಹಾಯ ಸಂಘಗಳಿಗೆ ಆರ್ಥಿಕ ಸಹಾಯ ಮಾಡಿ ಏಳಿಗೆಗೆ ಸಹಕಾರಿಯಾಗಿದೆ. ನಿವೃತ್ತ ನೌಕರರ ಹಿತರಕ್ಷಣೆಗೆ ವಾರ್ಷಿಕ ₹ 35 ಲಕ್ಷ ಕಾಯ್ದಿರಿಸಿ ತನ್ನದೇ ಆದ ವಿಶೇಷ ಯೋಜನೆ ಮೂಲಕ ಬ್ಯಾಂಕಿನ ಆಡಳಿತ ಮಂಡಳಿ ನೆರವಾಗಿದೆ. ಇದನ್ನು ಸಹಿಸದೇ ರಾಜಕೀಯ ಕಾರಣಕ್ಕೆ ಸೂಪರ್ ಸೀಡ್ ಮಾಡಲಾಗಿದೆ ಎಂದು ಆರೋಪಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.