ADVERTISEMENT

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ರಾಜಣ್ಣಗೆ ಇ.ಡಿ. ಸಮನ್ಸ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2019, 20:00 IST
Last Updated 1 ಅಕ್ಟೋಬರ್ 2019, 20:00 IST
ಕೆ.ಎನ್.ರಾಜಣ್ಣ
ಕೆ.ಎನ್.ರಾಜಣ್ಣ   

ತುಮಕೂರು: ವಿಚಾರಣೆಗೆ ಹಾಜರಾಗುವಂತೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಮಾಜಿ ಶಾಸಕ ಕಾಂಗ್ರೆಸ್‌ನ ಕೆ.ಎನ್.ರಾಜಣ್ಣ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಸಮನ್ಸ್ ಜಾರಿಮಾಡಿದೆ.

‘ಅ.8ರಂದು ಬೆಳಿಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೆ.24ರಂದು ನನಗೆ ಇ.ಡಿಯಿಂದ ಕೋರಿಯರ್‌ನಲ್ಲಿ ಸಮನ್ಸ್ ಬಂದಿದೆ. ಮತ್ತೆ ಸೋಮವಾರ (ಸೆ.30) ಇ.ಡಿಯಿಂದ ದೂರವಾಣಿ ಕರೆ ಮಾಡಿದ್ದರು. 8ರಂದು ದಸರಾ ಪ್ರಯುಕ್ತ ರಜೆ ಇದೆ. ಆದ ಕಾರಣ ಅ.9ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದರು. ಈ ಸಂಬಂಧ ನನಗೆ ಇ–ಮೇಲ್ ಸಹ ಮಾಡಿದ್ದಾರೆ’ ಎಂದು ಕೆ.ಎನ್.ರಾಜಣ್ಣ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಯಾವ ಪ್ರಕರಣಕ್ಕೆ ವಿಚಾರಣೆಗೆ ಕರೆದಿದ್ದಾರೆ, ಯಾವ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು ಎನ್ನುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಇಲ್ಲ. ನಿಮ್ಮ ಗುರುತುಪತ್ರ ತೆಗೆದುಕೊಂಡು ಬನ್ನಿ ಎಂದಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್‌ ಕಂಪನಿಗೆ ಅಪೆಕ್ಸ್ ಬ್ಯಾಂಕ್‌ ನೇತೃತ್ವದಲ್ಲಿ ವಿವಿಧ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗಳು ₹ 300 ಕೋಟಿ ಸಾಲ ನೀಡಿವೆ. ಸಾಲ ಪಡೆಯಲು ಯಾವ ದಾಖಲೆಗಳನ್ನು ನೀಡಿದ್ದಾರೆ. ವೈಯಕ್ತಿಕ ಭದ್ರತೆಯನ್ನು ಯಾರು ಕೊಟ್ಟಿದ್ದಾರೆ ಇತ್ಯಾದಿ ಮಾಹಿತಿ ಪಡೆಯಲು ನನ್ನ ವಿಚಾರಣೆಗೆ ಕರೆದಿರಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.