
ತುಮಕೂರು: ಕುರಿ ಸಾಕಾಣಿಕೆಗೆ ₹20 ಲಕ್ಷ ಸಬ್ಸಿಡಿ ನೀಡಲಾಗುವುದು ಎಂದು ನಂಬಿಸಿ ತಿಪಟೂರು ತಾಲ್ಲೂಕಿನ ಜಿ.ಮಲ್ಲೇನಹಳ್ಳಿಯ ಜೆ.ನಟರಾಜು ಎಂಬುವರಿಗೆ ₹8.89 ಲಕ್ಷ ವಂಚಿಸಲಾಗಿದೆ.
ಕರೆ ಮಾಡಿದ ವಂಚಕರು ಅನಿಲ್ ಎಂಬ ಹೆಸರಿನಿಂದ ಪರಿಚಯಿಸಿಕೊಂಡಿದ್ದಾರೆ. ಸಬ್ಸಿಡಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ತಂದೆ ಹೆಸರಿಗೆ ಲೋನ್ ಮಾಡಿಕೊಡುತ್ತೇವೆ ಎಂದು ಹೇಳಿ, ₹5,500 ಪಡೆದಿದ್ದಾರೆ. ನಂತರ ಒಂದಷ್ಟು ದಾಖಲೆಯನ್ನು ವಾಟ್ಸ್ ಆ್ಯಪ್ ಮೂಲಕ ಕಳುಹಿಸಿದ್ದಾರೆ. ನಿಮಗೆ ಲೋನ್ ಆಗುತ್ತದೆ ₹33,950 ಪಾವತಿಸಬೇಕು ಎಂದಿದ್ದಾರೆ. ನಟರಾಜು ಅದರಂತೆ ಹಣ ವರ್ಗಾಯಿಸಿದ್ದಾರೆ.
ಸೇವಾ ಶುಲ್ಕ, ತೆರಿಗೆ ಪಾವತಿ ಹೀಗೆ ನಾನಾ ಕಾರಣ ಹೇಳಿ ಹಂತ ಹಂತವಾಗಿ ಒಟ್ಟು 8,89,435 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದಾದ ಬಳಿಕ ಮತ್ತೆ ಕರೆ ಮಾಡಿ, ‘ನಿಮ್ಮ ತಂದೆ ಹೆಸರಿಗೆ ಆಗಿದ್ದ ಸಬ್ಸಿಡಿ ಹಣವನ್ನು ನೀವು ಸಕಾಲಕ್ಕೆ ಪಡೆದಿಲ್ಲ. ಹೀಗಾಗಿ ₹45 ಸಾವಿರ ದಂಡ ವಿಧಿಸಲಾಗಿದೆ. ಇಷ್ಟು ಹಣ ನೀಡಿದರೆ ಲೋನ್ ಸಿಗಲಿದೆ’ ಎಂದು ಹೇಳಿದ್ದಾರೆ. ಮೋಸ ಹೋದ ವಿಷಯ ತಿಳಿದ ನಂತರ ನಟರಾಜು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಲಾಭದ ಆಮಿಷ: ₹5 ಲಕ್ಷ ಮೋಸ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತಾಲ್ಲೂಕಿನ ಬುಗುಡನಹಳ್ಳಿಯ ಬಿ.ಎನ್.ಶರತ್ ₹5 ಲಕ್ಷ ಕಳೆದುಕೊಂಡಿದ್ದಾರೆ. ಆರೋಪಿಗಳು ವಾಟ್ಸ್ ಆ್ಯಪ್ ಮುಖಾಂತರ ಮೆಸೇಜ್ ಮಾಡಿ ಗ್ರೂಪ್ಗೆ ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ಹೂಡಿಕೆ ಬಗ್ಗೆ ವಿವರಿಸಿದ್ದಾರೆ. ಶರತ್ ಸೈಬರ್ ವಂಚಕರು ಹೇಳಿದ ವಿವಿಧ ಖಾತೆಗಳಿಗೆ ಒಟ್ಟು ₹5 ಲಕ್ಷ ವರ್ಗಾವಣೆ ಮಾಡಿದ್ದಾರೆ. ಅವರ ಷೇರು ಮಾರುಕಟ್ಟೆಯ ಖಾತೆಯಲ್ಲಿ ಹೆಚ್ಚಿನ ಹಣ ತೋರಿಸಿದೆ. ವಿತ್ ಡ್ರಾ ಮಾಡಿಕೊಳ್ಳಲು ಹೋದಾಗ ತೆರಿಗೆ ಪಾವತಿಸಿದರೆ ಮಾತ್ರ ಪೂರ್ತಿ ಹಣ ವಾಪಸ್ ನೀಡಲಾಗುವುದು ಎಂದಿದ್ದಾರೆ. ವಂಚನೆಗೆ ಒಳಗಾದ ವಿಚಾರ ಅರಿವಿಗೆ ಬಂದ ನಂತರ ಸೈಬರ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.