ADVERTISEMENT

ಶಿರಾ: ಮದಲೂರು ಕೆರೆಗೆ ಹೇಮೆ ನೀರು; ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2020, 6:02 IST
Last Updated 2 ಸೆಪ್ಟೆಂಬರ್ 2020, 6:02 IST
ಶಿರಾ ತಾಲ್ಲೂಕಿನ ಗಿರಿನಾಥನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಕಾರ್ಯಕರ್ತರ ಸಭೆ ನಡೆಸಿದರು
ಶಿರಾ ತಾಲ್ಲೂಕಿನ ಗಿರಿನಾಥನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಗೌಡ ಕಾರ್ಯಕರ್ತರ ಸಭೆ ನಡೆಸಿದರು   

ಶಿರಾ: ರಾಜ್ಯ ಸರ್ಕಾರ ಈ ಬಾರಿ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಸುರೇಶ್ ಗೌಡ ಹೇಳಿದರು.

ಮಾಗೋಡು ಗ್ರಾಮದ ರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ, ಬಿಜೆಪಿಯಿಂದ ಉಪಚುನಾವಣೆ ಸಿದ್ಧತೆಗೆ ಚಾಲನೆ ನೀಡಿ ಮಾತನಾಡಿದರು.

ನೀರಾವರಿ ವಿಚಾರದಲ್ಲಿ ಶಿರಾ ತಾಲ್ಲೂಕಿಗೆ ಅನ್ಯಾಯವಾಗಿದೆ. ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಮುಖಂಡ ಟಿ.ಬಿ. ಜಯಚಂದ್ರ ಹಾಗೂ ಮಾಜಿ ಶಾಸಕ ಬಿ.ಸತ್ಯನಾರಾಯಣ ಜನರ ಬಾಯಲ್ಲಿ ನೀರು ಬರಿಸಿದರೇ ಹೊರತು, ಕೆರೆಗೆ ನೀರು ಹರಿಸಲಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ನೀರು ಬಂದಿಲ್ಲ. ಬಿಜೆಪಿ ಸರ್ಕಾರ ಶಿರಾ ದೊಡ್ಡ ಕೆರೆ, ಕಳ್ಳಂಬೆಳ್ಳ ಮತ್ತು ಮದಲೂರು ಕೆರೆಗೆ ನೀರು ಹರಿಸಲಿದೆ ಎಂದರು.

ADVERTISEMENT

ಬಡಜನರಿಗೆ ಮನೆ ಮಂಜೂರು ಮಾಡುವ ಮೂಲಕ ಗುಡಿಸಲು ರಹಿತ ತಾಲ್ಲೂಕನ್ನಾಗಿ ಮಾಡಲಾಗುವುದು. ನೀರಾವರಿ, ಕುಡಿಯುವ ನೀರು, ವಿದ್ಯುತ್ ಹಾಗೂ ವಸತಿ ಯೋಜನೆಗೆ ಹೆಚ್ಚಿನ ಅದ್ಯತೆ ನೀಡಲಾಗುವುದು ಎಂದರು.

ಆಕಾಂಕ್ಷಿ ಅಲ್ಲ: ಶಿರಾ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ. ಸ್ಥಳೀಯವಾಗಿ ಬಿ.ಕೆ. ಮಂಜುನಾಥ್ ಹಾಗೂ ಎಸ್.ಆರ್. ಗೌಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಗೆಲ್ಲಿಸುವ ಶಕ್ತಿ ಜಿಲ್ಲಾ ಘಟಕಕ್ಕೆ ಇದೆ ಎಂದರು.

ಸೊಗಡು ಶಿವಣ್ಣ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ 80 ಸಾವಿರ ಮತಗಳನ್ನು ನೀಡುವ ಮೂಲಕ ಜನರು ಬಿಜೆಪಿ ಪರವಾಗಿ ಒಲವು ತೋರಿದ್ದಾರೆ. ಇಲ್ಲಿ ಪಕ್ಷ ಸದೃಢವಾಗಿದ್ದು, ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರನ್ನು ಜತೆಯಲ್ಲಿ ಕರೆದುಕೊಂಡು ಹೋಗಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ತುಮುಲ್ ನಿರ್ದೇಶಕ ಎಸ್.ಆರ್.ಗೌಡ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಂಗನಾಥ ಗೌಡ, ಬಿಜೆಪಿ ಜಿಲ್ಲಾ ಸಹ ಪ್ರಭಾರಿ ಲಕ್ಷ್ಮಿಶ್, ನಗರ ಮೋರ್ಚಾ ಅಧ್ಯಕ್ಷ ವಿಜಯರಾಜು, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ, ಬಿ.ಗೋವಿಂದಪ್ಪ, ಮಾಲಿ ಮರಿಯಪ್ಪ, ಪಡಿ ರಮೇಶ್, ಶ್ರೀಧರ್, ಕೃಷ್ಣಮೂರ್ತಿ, ಸುರೇಶ್, ಪ್ರಭು, ಇನಾಂ ಗೊಲ್ಲಹಳ್ಳಿ ಶಿವಣ್ಣ, ಅರುಣ್ ಗೌಡ, ನಿರಂಜನ್, ಧನುಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.