ತುಮಕೂರು: ‘ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಸರಿಯಾದ ರೀತಿಯಲ್ಲಿಯೇ ನಡೆಯುತ್ತಿದೆ. ಚೆನ್ನೈನ ರೇಲಾ ಆಸ್ಪತ್ರೆ, ಬಿಜಿಎಸ್ ಆಸ್ಪತ್ರೆ, ಸಿದ್ಧಗಂಗಾ ಆಸ್ಪತ್ರೆಯ ವೈದ್ಯರ ತಂಡ ನಿರಂತರ ಸಂಪರ್ಕದಲ್ಲಿದ್ದೇವೆ. ಇಂದು ತಪಾಸಣೆ ಮಾಡುವಾಗ ಸ್ವಾಮೀಜಿಯವರು ಮಠಕ್ಕೆ ತೆರಳುವ ಅಪೇಕ್ಷೆ ವ್ಯಕ್ತಪಡಿಸಿದರು. ಸೋಂಕು ಪೂರ್ಣ ನಿವಾರಣೆಯಾದ ಬಳಿಕ ಹೋಗಬಹುದು ಎಂದು ಮನವರಿಕೆ ಮಾಡಿದ್ದೇವೆ’ ಎಂದು ಬಿಜಿಎಸ್ ಆಸ್ಪತ್ರೆ ವೈದ್ಯರಾದ ಡಾ.ರವೀಂದ್ರ ಹಾಗೂ ಡಾ.ವೆಂಕಟರಮಣ ಹೇಳಿದರು.
ಭಾನುವಾರ ರಾತ್ರಿ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
‘ಸ್ವಾಮೀಜಿ ಅವರ ರಕ್ತದೊತ್ತಡದಲ್ಲಿ ರಕ್ತದೊತ್ತಡದಲ್ಲಿ ಕಳೆದ ರಾತ್ರಿ ಏರುಪೇರಾಗಿತ್ತು. ಈಗ ಸರಿಯಾಗಿದೆ. ಸೋಂಕು ಕಡಿಮೆಯಾಗುತ್ತಿಲ್ಲವಾದ್ದರಿಂದ ಸೋಂಕು ತಜ್ಞರ ಸಲಹೆಯಂತೆ ರೋಗನಿರೋಧಕ ಔಷಧಿ ಹೆಚ್ಚು ನೀಡಿ (ಆ್ಯಂಟಿಬಯಾಟಿಕ್ಸ್) ಸೋಂಕು ನಿವಾರಣೆಗೆ ಪ್ರಯತ್ನ ಮಾಡಲಾಗುತ್ತಿದೆ. ಚಿಕಿತ್ಸೆಗೆ ಅವರ ದೇಹವೂ ಸ್ಪಂದಿಸಬೇಕಾಗಿದೆ’ ಎಂದು ವಿವರಿಸಿದರು.
ಮಠದ ಕಿರಿಯಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಪೂಜ್ಯರಿಗೆ ಆಸ್ಪತ್ರೆಯಿಂದ ಮಠಕ್ಕೆ ಹೋಗಬೇಕು ಎಂಬ ಅಪೇಕ್ಷೆ ಜಾಸ್ತಿಯಾಗುತ್ತಿದೆ. ಚೆನ್ನೈ ಆಸ್ಪತ್ರೆಯಲ್ಲೂ ಇದೇ ರೀತಿಯ ಅಪೇಕ್ಷೆ ಪಟ್ಟಿದ್ದರು. ಸೋಂಕು ಕಡಿಮೆ ಆಗದೇ ಇರುವ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಸೋಂಕು ಕಡಿಮೆ ಆದ ತಕ್ಷಣ ಮಠಕ್ಕೆ ಕರೆದುಕೊಂಡು ಹೋಗುವ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.