ತುಮಕೂರು: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ’ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ’ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.
ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ‘ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕೃತಿಕ ನಾಯಕರೆಂದು ಸಮಾಜ ಸ್ವೀಕರಿಸಿದೆ' ಎಂದು ಹೇಳಿದರು.
‘ಹೇಮರೆಡ್ಡಿ ಮಲ್ಲಮ್ಮ ಅವರು ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಸಾಧಿಸಿ ಪ್ರಪಂಚಕ್ಕೆ ತೋರಿಸಿದರು.ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾರೆ’ ತಿಳಿಸಿದರು.
'ದಾನಗುಣ, ದಾಸೋಹತತ್ಪರತೆ, ನಿಸ್ವಾರ್ಥ ಭಕ್ತಿಗೆ ಮಲ್ಲಮ್ಮ ಅವರು ಹೆಸರಾಗಿದ್ದು, ತನ್ನವರಿಂದ ತಿರಸ್ಕರಿಸಲ್ಪಟ್ಟು ಗುಡಿಸಲಲ್ಲಿದ್ದರೂ ಬಂದ ಜಂಗಮರಿಗೆ ಪ್ರಸಾದ ಕಲ್ಪಿಸಿದ ಶರಣೆಯಾಗಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಕುಟುಂಬದೊಳಗೆ ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣಗಳು ಕ್ಷೀಣಿಸುತ್ತವೆ' ಎಂದು ಹೇಳಿದರು.
‘ಹೇಮರೆಡ್ಡಿ ಮಲ್ಲಮ್ಮ ಅವರು ತೋರಿದ ಆದರ್ಶದ ಬೆಳಕಿನಲ್ಲಿ ಮುನ್ನಡೆಯುವುದೇ ಆ ಮಹಾಶರಣೆಗೆ ನಾವು ಸಲ್ಲಿಸಬಹುದಾದ ಗೌರವವಾಗಿದೆ’ ಎಂದು ತಿಳಿಸಿದರು.
ತಹಶೀಲ್ದಾರ ನಾಗರಾಜು, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್, ಗಾಯತ್ರಿ, ನರಸಿಂಹರಾಜು, ನರಸಿಂಹಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.