ಶಿರಾ: ತಾಲ್ಲೂಕಿನಲ್ಲಿ ಹುಣಸೆ ಪಾರ್ಕ್ ಮಾಡುವ ಉದ್ದೇಶದಿಂದ ಅದಕ್ಕೆ ಪೂರಕವಾಗಿ ಅತಿ ಶೀಘ್ರದಲ್ಲಿಯೇ ಹುಣಸೆ ಸಂಸ್ಕರಣ ಘಟಕ ನಿರ್ಮಾಣ ಮಾಡುತ್ತಿದ್ದು ಅದಕ್ಕಾಗಿ ಎಪಿಎಂಸಿ ಆವರಣದ ಪಕ್ಕದಲ್ಲಿಯೇ 20 ಎಕರೆ ಭೂಮಿ ಮೀಸಲಿಡಲಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಹುಳಿಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಬಡ ಕುಟುಂಬಗಳಿಗೆ ಆರ್ಥಿಕ ಸದೃಢತೆ ನೀಡುವ ಸಲುವಾಗಿ ಹೈನೋದ್ಯಮದಲ್ಲಿ ಬೆಣ್ಣೆ, ತುಪ್ಪ ಯಾವುದಾದರೂ ಒಂದು ಉತ್ಪನ್ನವನ್ನು ಶಿರಾ ಬ್ರಾಂಡ್ ನಿರ್ಮಾಣ ಮಾಡುವ ಉದ್ದೇಶದಿಂದ 4 ಎಕರೆ ಭೂಮಿ ನೀಡಲಾಗುವುದು. ಹುಳಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಲಾಗುವುದು ಎಂದರು.
ತುಮುಲ್ ನಿರ್ದೇಶಕ ಎಸ್.ಆರ್.ಗೌಡ ಮಾತನಾಡಿ, ನಂದಿನಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಾಲು ಒಕ್ಕೂಟಕ್ಕೆ ಶಿರಾ ಭಾಗದಲ್ಲಿ ಎರಡು ಎಕರೆ ಭೂಮಿ ಕೇಳಿದ್ದೇವೆ. ಇದಕ್ಕೆ ಪೂರಕವಾಗಿ ಶಾಸಕರು ನಾಲ್ಕು ಎಕರೆ ಭೂಮಿ ಕೊಡುತ್ತೇನೆ ಎಂದಿರುವುದು ಸಂತಸ ಮೂಡಿಸಿದೆ. ಹಾಲು ಉತ್ಪಾದಕರ ಸಂಘದ ಕಟ್ಟಡ ನಿರ್ಮಾಣಕ್ಕೆ ಒಕ್ಕೂಟದಿಂದ ₹10 ಲಕ್ಷ ನೀಡಲಾಗುವುದು ಎಂದರು.
ತುಮುಲ್ ಉಪ ವ್ಯವಸ್ಥಾಪಕ ಗಿರೀಶ್, ರಮೇಶ್, ಎಚ್.ಈ. ರಂಗನಾಥ್, ಈರಣ್ಣ, ಎಚ್.ಜೆ.ಕುಮಾರ್, ರಾಜಣ್ಣ, ಎಚ್.ಜಿ.ಈರಣ್ಣ, ಲಕ್ಷ್ಮಿಕಾಂತ್, ಡಿ.ಸಿ.ಆಶೋಕ್, ವಕೀಲ ಕೆ.ವಿ. ರಾಜು, ಎಚ್.ಟಿ.ರಾಜು, ಸೂರ್ಯಗೌಡ, ರವಿರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.