ತುಮಕೂರು: ಗುರು ಎಂದರೆ ವ್ಯಕ್ತಿಯಲ್ಲ. ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವವನೇ ಗುರು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಕಿವಿಮಾತು ಹೇಳಿದರು.
ವಿ.ವಿಯ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರಥಮ ವರ್ಷ ಎಂ.ಕಾಂ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ‘ಸ್ನೇಹ ಸಿಂಚನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರ ಕೆಲಸ ಇತರ ವೃತ್ತಿಗಳಿಗಿಂತ ವಿಭಿನ್ನ. ಶಿಕ್ಷಕರು ಪ್ರತಿದಿನ ನಿರಂತರವಾಗಿ ತಾನು ಕಲಿಯುತ್ತಾ ಇತರರಿಗೆ ಜ್ಞಾನ ಹಂಚುತ್ತಾರೆ. ಒಬ್ಬ ವಿದ್ಯಾರ್ಥಿಯ ಸಾಮರ್ಥ್ಯ, ಆತ್ಮಸ್ಥೈರ್ಯ, ವಿವೇಕ, ಚಾರಿತ್ರ್ಯ ನಿರ್ಮಾಣ ಮಾಡುತ್ತಾರೆ. ಇಂತಹ ಕನಸುಗಳನ್ನು ನನಸು ಮಾಡುವುದೇ ಶಿಕ್ಷಕರ ಆದ್ಯ ಕರ್ತವ್ಯ ಎಂದರು.
ಶಿಕ್ಷಣ ನಿಂತ ನೀರಲ್ಲ. ನಿರಂತರ ಕಲಿಕೆಯೇ ನಿಜವಾದ ಶಿಕ್ಷಣ. ಉನ್ನತ ಮಟ್ಟದ ಸಂಶೋಧನೆಗಳಾದರೆ ಮಾತ್ರ ದೇಶ ಅಭಿವೃದ್ಧಿ ಆಗುತ್ತದೆ.ಕಷ್ಟಗಳು ಸಾಮಾನ್ಯ. ಕಷ್ಟಗಳನ್ನು ಸಂತೋಷದಿಂದ ಗೆಲ್ಲಬೇಕು. ಪ್ರತಿಯೊಂದು ಪ್ರಶ್ನೆಗೂ ತನ್ನದೇ ಆದ ಸಮಾಧಾನ ಇರುತ್ತದೆ ಎಂದು ಹೇಳಿದರು.
ಪ್ರಾಧ್ಯಾಪಕ ಪ್ರೊ.ಪಿ.ಪರಮಶಿವಯ್ಯ, ‘ವಿದ್ಯಾರ್ಥಿಗಳು ಉತ್ತಮವಾದ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತೀವ್ರ ಪೈಪೋಟಿ ಇದೆ. ಅದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ತಮ್ಮ ಯೋಚನಾ ಸಾಮರ್ಥ್ಯ. ಕ್ರಿಯಾಶೀಲತೆಯಿಂದ ವಿದ್ಯಾಭ್ಯಾಸ ನಡೆಸಬೇಕು. ಜ್ಞಾನ ಸಂಪಾದಿಸಬೇಕು. ವಿದ್ಯಾಭ್ಯಾಸ ಅಲ್ಲದೇ ಅನೇಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರೊ.ಸುದರ್ಶನ ರೆಡ್ಡಿ, ವಿದ್ಯಾರ್ಥಿಗಳು ಕನಸುಗಳನ್ನು ಕಾಣಬೇಕು. ಆ ಕನಸುಗಳನ್ನು ನನಸು ಮಾಡುವತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳು ಹೆಚ್ಚು ಜ್ಞಾನಾರ್ಜನೆ ಕಡೆ ಗಮನ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಡಾ.ದೇವರಾಜಪ್ಪ, ಎನ್.ವಿಜಯ್, ಕೆ.ಎನ್.ಗೋಪಾಲ್, ಕೆ.ಎಲ್.ಭವ್ಯಶ್ರೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.