
ತುಮಕೂರು: ದಸ್ತಾವೇಜು ಬರಹಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕು ಪತ್ರ ಬರಹಗಾರರ ಸಂಘದ ನೇತೃತ್ವದಲ್ಲಿ ನಗರದ ಉಪನೋಂದಣಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ದಸ್ತಾವೇಜು ಬರಹಗಾರರು, ಸಾರ್ವಜನಿಕರಿಗೆ ಮಧ್ಯವರ್ತಿಗಳಿಂದ ಆಗುತ್ತಿರುವ ತೊಂದರೆ ತಪ್ಪಿಸಬೇಕು. ತೆಲಂಗಾಣ ರಾಜ್ಯದಲ್ಲಿ ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಿರುವಂತೆ ರಾಜ್ಯದಲ್ಲೂ ಪ್ರತ್ಯೇಕ ಲಾಗಿನ್ ನೀಡಬೇಕು. ಏಕ ಮಾದರಿ ಗುರುತಿನ ಚೀಟಿ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ನೋಂದಣಿ ಇಲಾಖೆಯಿಂದ ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ಮಂದಿ ಪರವಾನಗಿ ಪಡೆದು ದಸ್ತಾವೇಜು ಬರಹಗಾರರಾಗಿ ಕೆಲಸ ಮಾಡುತ್ತಿದ್ದು, ಸೇವಾ ಭದ್ರತೆ ಒದಗಿಸಬೇಕು. ಸೇವಾ ಶುಲ್ಕ ಪರಿಷ್ಕರಿಸಿ ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿದರು.
ಕಾವೇರಿ 2.00 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮೂಲಕ ತಮ್ಮ ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಸಾರ್ವಜನಿಕರೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಡಿಟಿಪಿ ಸೆಂಟರ್, ಸೈಬರ್ ಸೆಂಟರ್ನವರು ದುರುಪಯೋಗ ಪಡಿಸಿಕೊಂಡು ನೋಂದಣಿ ಪತ್ರ ಸಿದ್ಧಪಡಿಸಿ, ನೋಂದಣಿ ಮಾಡಿಸುವ ಕೆಲಸಕ್ಕೆ ಇಳಿದಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಅವಲತ್ತುಕೊಂಡರು.
ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಯ್ಯ, ಕಾರ್ಯದರ್ಶಿ ರುದ್ರೇಶ್, ಪದಾಧಿಕಾರಿಗಳಾದ ಎಚ್.ಎನ್.ಚಂದ್ರಶೇಖರ್, ಮಂಜುನಾಥ್, ವಿಜಯಕುಮಾರ್, ಪ್ರಸನ್ನ, ವಿಶ್ವಶೇಖರ್, ಪುಟ್ಟರಾಜು, ಪುಟ್ಟಲಿಂಗಯ್ಯ, ಲತ, ಅಶ್ವಿನಿ, ಮೇರಿ ಇತರರು ಪಾಲ್ಗೊಂಡಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.