
ತುಮಕೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ, ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ಗುಬ್ಬಿ ತಾಲ್ಲೂಕಿನ ಚನ್ನಯ್ಯನಪಾಳ್ಯದ ಸಿ.ಜಿ.ಕಿರಣ್ ₹6.81 ಲಕ್ಷ ಕಳೆದುಕೊಂಡಿದ್ದಾರೆ.
ವಾಟ್ಸ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡ ಆರೋಪಿಗಳು ಕಿರಣ್ ನಂಬರ್ ಅನ್ನು ‘Barclyas’ ಗ್ರೂಪ್ಗೆ ಸೇರಿಸಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ, ಹೆಚ್ಚಿನ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. app.barclay.share.com ಆ್ಯಪ್ ಲಿಂಕ್ ಕ್ಲಿಕ್ ಮಾಡಿ ಅಗತ್ಯ ದಾಖಲೆ ಸಲ್ಲಿಸಿ, ಖಾತೆ ತೆರೆದಿದ್ದಾರೆ.
ಮೊದಲಿಗೆ ₹2.95 ಲಕ್ಷ ವರ್ಗಾಯಿಸಿದ್ದು, ‘Barclyas’ ಆ್ಯಪ್ನ ಕಿರಣ್ ಖಾತೆಯಲ್ಲಿ ₹6.20 ಲಕ್ಷ ತೋರಿಸಿದೆ. ಶೇ 30ರಷ್ಟು ಸೇವಾ ಶುಲ್ಕ ಪಾವತಿಸಿದರೆ ಹಣ ನೀಡಲಾಗುವುದು ಎಂದಿದ್ದಾರೆ. ಅದರಂತೆ ₹1,77,220 ವರ್ಗಾವಣೆ ಮಾಡಿದ್ದಾರೆ. ಇದಾದ ಬಳಿಕ ತೆರಿಗೆ ಎಂದು ₹1,34,200 ಪಡೆದಿದ್ದಾರೆ.
ಫೆ. 4ರಂದು 24 ಗಂಟೆಯ ನಂತರ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ ಎಂದಿದ್ದರು. ಈ ಅವಧಿ ಮುಗಿದ ನಂತರ ಕೇಳಿದರೆ ‘ನಿಮ್ಮ ಖಾತೆ ಸರಿಯಾಗಿಲ್ಲ, ಬೇರೆ ಖಾತೆ ನೀಡುವಂತೆ’ ಆರೋಪಿಗಳು ಕೇಳಿದ್ದರು. ಸ್ನೇಹಿತರ ಬ್ಯಾಂಕ್ ಖಾತೆ ನೀಡಿದರೂ ಹಣ ಸಂದಾಯ ಆಗಿಲ್ಲ. ಆರೋಪಿಗಳ ಬಳಿ ಮತ್ತೆ ವಿಚಾರಿಸಿದಾಗ ‘Barclyas’ ಗ್ರೂಪ್ನಿಂದ ಕಿರಣ್ ನಂಬರ್ ತೆಗೆದು ಆ್ಯಪ್ ನಿಷ್ಕ್ರಿಯಗೊಳಿಸಿದ್ದಾರೆ.
ವಂಚನೆಗೆ ಒಳಗಾದ ವಿಷಯ ಅರಿವಿಗೆ ಬಂದ ನಂತರ ಕಿರಣ್ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.