ADVERTISEMENT

ತುಮಕೂರು | 7 ತಿಂಗಳಲ್ಲಿ 461 ಮಂದಿ ಸಾವು

ಮೃತ್ಯುಕೂಪವಾದ ಹೆದ್ದಾರಿಗಳು; 3 ವರ್ಷದಲ್ಲಿ 2 ಸಾವಿರ ಜನರು ಬಲಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 5:23 IST
Last Updated 3 ಸೆಪ್ಟೆಂಬರ್ 2025, 5:23 IST
ತುಮಕೂರು ತಾಲ್ಲೂಕಿನ ಊರುಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ
ತುಮಕೂರು ತಾಲ್ಲೂಕಿನ ಊರುಕೆರೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಮೆಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ   

ತುಮಕೂರು: ರಾಜ್ಯ ರಾಜಧಾನಿಯ ಹೆಬ್ಬಾಗಿಲಿನಂತಿರುವ ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳು ಪ್ರತಿ ವರ್ಷ ಏರಿಕೆಯಾಗುತ್ತಿವೆ. ಈ ವರ್ಷದ 7 ತಿಂಗಳಲ್ಲಿ 461 ಜನ ಪ್ರಾಣ ಕಳೆದುಕೊಂಡಿದ್ದಾರೆ. 2023ರ ಜನವರಿಯಿಂದ 2025ರ ಆಗಸ್ಟ್‌ ಮೊದಲ ವಾರದ ಅಂತ್ಯಕ್ಕೆ 2,030 ಮಂದಿ ಅಪಘಾತದಲ್ಲಿ ಜೀವ ಬಿಟ್ಟಿದ್ದಾರೆ.

ಈ ವರ್ಷದ ಆರಂಭದಿಂದ ಆ. 8ರ ವರೆಗೆ ಸಂಭವಿಸಿದ ಅಪಘಾತಗಳಲ್ಲಿ 431 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 1,949 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಪ್ರಮುಖ ಹೆದ್ದಾರಿಗಳಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಅಪಘಾತ ಹೆಚ್ಚಳಕ್ಕೆ ಇದು ಪ್ರಮುಖ ಕಾರಣವಾಗಿದೆ.

ಬೆಂಗಳೂರು– ಪುಣೆ ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು– ಹೊನ್ನಾವರ ರಾಷ್ಟ್ರೀಯ ಹೆದ್ದಾರಿ, ತುಮಕೂರು– ಮಧುಗಿರಿ ರಾಜ್ಯ ಹೆದ್ದಾರಿ, ಕುಣಿಗಲ್‌ ಬಳಿ ರಾಜ್ಯ ಹೆದ್ದಾರಿ 33ರಲ್ಲಿ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ. ತುಂಬಾ ಜನ ಅಪರಿಚಿತ ವಾಹನಗಳ ಡಿಕ್ಕಿಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ.

ADVERTISEMENT

‘ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದಲೂ ಅಪಘಾತಗಳು ಹೆಚ್ಚುತ್ತಿವೆ. ಇದೀಗ ಜಿಲ್ಲೆಯಲ್ಲಿ ಹೊಸದಾಗಿ 40 ಅಪಘಾತ ವಲಯ (ಬ್ಲ್ಯಾಕ್‌ ಸ್ಪಾಟ್‍) ಗುರುತಿಸಲಾಗಿದೆ. ಪೊಲೀಸ್‌ ಇಲಾಖೆಯಿಂದ ಗುರುತಿಸಿದ ಬ್ಲ್ಯಾಕ್‌ ಸ್ಪಾಟ್‍ಗಳಲ್ಲಿ ಅಪಘಾತ ತಡೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ. ಹೆದ್ದಾರಿಗಳಲ್ಲಿ ರಸ್ತೆ ಮಾರ್ಗಸೂಚಿ ಅನುಸರಿಸುತ್ತಿಲ್ಲ. ರಸ್ತೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡುತ್ತಿಲ್ಲ. ಕಾಮಗಾರಿ ನಡೆಯುವ ಸ್ಥಳದಲ್ಲಿ ತಿರುವು ತೆಗೆದುಕೊಳ್ಳುವಂತೆ ಸೂಚಿಸುವ ಸೂಚನಾ ಫಲಕಗಳು ಕಾಣೆಯಾಗಿವೆ’ ಎಂಬ ಆರೋಪ ಸಾಮಾನ್ಯವಾಗಿದೆ.

ಮುಗಿಯದ ಕಾಮಗಾರಿ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೋರ, ನೆಲಹಾಳ್‌, ಪಂಡಿತನಹಳ್ಳಿ ಗೇಟ್‌ ಬಳಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿದೆ. ಕೆಲಸಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇಲ್ಲಿ ಯಾವುದೇ ಎಚ್ಚರಿಕೆ ಫಲಕ ಅಳವಡಿಸಿಲ್ಲ. ಗುಂಡಿಗಳನ್ನು ಗಮನಿಸದೆ ಬಂದ ವಾಹನಗಳು ರಸ್ತೆಗೆ ಉರುಳುತ್ತಿವೆ.

ಒಟ್ಟು ಅಪಘಾತದಲ್ಲಿ ಶೇ 35ರಷ್ಟು ಅಪಘಾತಗಳು ವಾಹನ ಸವಾರರ ನಿರ್ಲಕ್ಷ್ಯದಿಂದಲೇ ಸಂಭವಿಸುತ್ತವೆ. ಹೆದ್ದಾರಿಗಳಲ್ಲಿ ತಕ್ಷಣಕ್ಕೆ ಟ್ರ್ಯಾಕ್‌ ಬದಲಿಸುವುದರಿಂದ ಹಿಂಬದಿಯಿಂದ ಬರುವ ವಾಹನ ಡಿಕ್ಕಿಯಾಗುವ ಸಂಭವ ಹೆಚ್ಚಿರುತ್ತದೆ. ರಾತ್ರಿ 10 ಗಂಟೆಯ ನಂತರ ಹಾಗೂ ಬೆಳಗಿನ ಜಾವದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಹೆಚ್ಚಿನ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ.

ಸವಾರರು ಮತ್ತೊಂದು ವಾಹನ ಹಿಂದಿಕ್ಕುವ ಬರದಲ್ಲಿ ಹಾನಿ ಮಾಡಿಕೊಳ್ಳುತ್ತಿದ್ದಾರೆ. ನಗರ ಪ್ರದೇಶದಲ್ಲಿ ಹೆಲ್ಮೆಟ್‌ ಇಲ್ಲದೆ ವಾಹನ ಚಲಾಯಿಸುವುದರಿಂದ ತಲೆಗೆ ತೀವ್ರ ಪೆಟ್ಟಾಗಿ ಬದುಕಿ ಉಳಿಯುವುದು ಕಷ್ಟವಾಗುತ್ತಿದೆ.

ತುಮಕೂರು ತಾಲ್ಲೂಕಿನ ಊರುಕೆರೆ ಬಳಿಯ ಸರ್ವೀಸ್‌ ರಸ್ತೆಯ ಸ್ಥಿತಿ
ತುಮಕೂರು ಶಿರಾಗೇಟ್‌ ಹತ್ತಿರದ ಹಂಪ್ಸ್‌
ಕೆಳ ಸೇತುವೆ ಕತ್ತಲು
ಹೆದ್ದಾರಿಗಳಿಂದ ನಗರಕ್ಕೆ ಪ್ರವೇಶ ಕಲ್ಪಿಸುವ ಕೆಳ ಸೇತುವೆ ಬಳಿ ಬೆಳಕಿನ ವ್ಯವಸ್ಥೆಯಿಲ್ಲ. ನಗರದಿಂದ ಹೋಗುವ ವಾಹನಕ್ಕೆ ಮುಖಾಮುಖಿಯಾಗಿ ಅವಘಡಗಳು ಆಗುತ್ತಿವೆ. ಬಟವಾಡಿ ಶ್ರೀದೇವಿ ಕಾಲೇಜು ಬಳಿ ಹನುಮಂತಪುರ ಸೇತುವೆಗಳ ಬಳಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಬೆಳಿಗ್ಗೆ ಸಮಯದಲ್ಲಿ ತೊಂದರೆಯಾಗುತ್ತಿಲ್ಲ. ಕತ್ತಲಾದ ನಂತರವೇ ಅಸಲಿ ಆಟ ಶುರುವಾಗುತ್ತದೆ. ವಿದ್ಯುತ್‌ ದೀಪಗಳು ಇಲ್ಲದೆ ದಾರಿಯಲ್ಲಿ ಗುಂಡಿ ಎಲ್ಲಿದೆ ರಸ್ತೆ ಯಾವ ಕಡೆ ಇದೆ ಎಂದು ಹುಡುಕುವುದು ಸವಾಲಾಗುತ್ತದೆ. ಇಂತಹ ಜಾಗದಲ್ಲಿ ತಿರುವು ಪಡೆಯುವ ವೇಳೆ ಅಪಘಾತಗಳು ಜಾಸ್ತಿಯಾಗುತ್ತಿವೆ.
ಯಲ್ಲಾಪುರ ‘ಹಾಟ್‌ಸ್ಪಾಟ್‌’
ನಗರಕ್ಕೆ ಹೊಂದಿಕೊಂಡಿರುವ ಯಲ್ಲಾಪುರ ಪ್ರದೇಶ ಅಪಘಾತದ ಹಾಟ್‌ಸ್ಪಾಟ್‌ ಆಗಿದೆ. ಸಂಜೆ ಮತ್ತು ಬೆಳಗಿನ ಜಾವದ ವೇಳೆ ವಾಹನ ಸಂಚಾರ ಹೆಚ್ಚಿರುತ್ತದೆ. ರಸ್ತೆ ಕಿರಿದಾಗಿದ್ದು ವಾಹನ ಓಡಾಟ ಕಷ್ಟವಾಗುತ್ತಿದೆ. ಪಾದಚಾರಿಗಳು ರಸ್ತೆ ದಾಟುವಾಗ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಅತಿವೇಗವಾಗಿ ಬರುವ ವಾಹನಗಳಿಗೆ ಕಡಿವಾಣ ಹಾಕುವ ಕೆಲಸವಾಗುತ್ತಿಲ್ಲ. ಯಲ್ಲಾಪುರ ಈ ಹಿಂದೆ ಗ್ರಾಮ ಪಂಚಾಯಿತಿಗೆ ಒಳಪಡುತ್ತಿತ್ತು. ಈಗ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗಿದೆ. ಆದರೆ ಅಭಿವೃದ್ಧಿ ಕಾರ್ಯಗಳು ಮಾತ್ರ ಶೂನ್ಯ. ಕನಿಷ್ಠ ಸುಗಮ ಸಂಚಾರಕ್ಕೆ ಅಗತ್ಯ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ.
ಹಂಪ್ಸ್‌ ಅವೈಜ್ಞಾನಿಕ
ಮಹಾನಗರ ಪಾಲಿಕೆಯಿಂದ ವಿವಿಧ ಕಡೆಗಳಲ್ಲಿ ಹಂಪ್ಸ್‌ ಹಾಕಲಾಗಿದೆ. ಅವಶ್ಯಕತೆ ಇರುವ ಕಡೆ ಬಿಟ್ಟು ಅನಗತ್ಯ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ಹಂಪ್ಸ್‌ ಹಾಕಲಾಗಿದೆ ಎಂಬುದು ನಗರ ನಿವಾಸಿಗಳ ಆರೋಪ. ‘ಗಂಗಸಂದ್ರ ಶೇಷಾದ್ರಿಪುರಂ ಕಾಲೇಜು ರಾಜೀವ್‌ಗಾಂಧಿ ನಗರ ಮೆಳೆಕೋಟೆ ಭಾಗದಲ್ಲಿ 200 ಮೀಟರ್‌ ರಸ್ತೆಯಲ್ಲಿ ನಾಲ್ಕೈದು ಕಡೆ ಹಂಪ್ಸ್‌ ಹಾಕಲಾಗಿದೆ. ಹಂಪ್ಸ್‌ಗೆ ಬಣ್ಣ ಬಳಿದಿಲ್ಲ. ರಾತ್ರಿ ಹೊತ್ತಿನಲ್ಲಿ ಕಾಣುವುದೇ ಇಲ್ಲ. ಬ್ಲಿಂಕರ್ಸ್‌ ಹಾಕಿಲ್ಲ. ಅಧಿಕಾರಿಗಳು ಹಂಪ್ಸ್‌ ಅಳವಡಿಸಿದ್ದೇವೆ ಎಂದು ತೋರಿಸಿಕೊಳ್ಳಲು ಈ ಕೆಲಸ ಮಾಡಿದಂತೆ ಕಾಣುತ್ತಿದೆ’ ಎಂದು ಮೆಳೆಕೋಟೆಯ ನಾಗರಾಜು ಪ್ರತಿಕ್ರಿಯಿಸಿದರು.
ಚಿಕಿತ್ಸಾ ಕೇಂದ್ರ ನಾಮಕಾವಸ್ತೆ
ತುರ್ತು ಸಮಯದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಿರುವ ಅಪಘಾತ ತುರ್ತು ಚಿಕಿತ್ಸಾ ಕೇಂದ್ರ (ಟ್ರಾಮಾ ಕೇರ್‌ ಸೆಂಟರ್‌) ಕೇವಲ ನಾಮಕಾವಸ್ತೆ ಎಂಬಂತೆ ಇದೆ. ‘ಸಣ್ಣಪುಟ್ಟ ಗಾಯಗಳಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಪ್ರಕರಣಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇಲ್ಲಿಂದ ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಹಲವರ ಜೀವ ಹಾರಿಹೋಗುತ್ತಿದೆ. ಆಸ್ಪತ್ರೆಯಲ್ಲಿ ಕಟ್ಟಡಗಳು ಮಾತ್ರ ಆಕಾಶದ ಎತ್ತರಕ್ಕೆ ಇವೆ. ಅಲ್ಲಿ ವೈದ್ಯರೇ ಇಲ್ಲ. ‘ಗೋಲ್ಡನ್‌ ಅವರ್‌’ನಲ್ಲಿ ಸೂಕ್ತ ಚಿಕಿತ್ಸೆ ಸಿಗುವುದಿಲ್ಲ’ ಎಂದು ಶೆಟ್ಟಿಹಳ್ಳಿಯ ಅಂಜನಮೂರ್ತಿ ಅಸಮಾಧಾನ ಹೊರ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.