ADVERTISEMENT

ಯುಜಿಡಿ ಕಾಮಗಾರಿ ಕಳಪೆ: ರಸ್ತೆ ಮಧ್ಯದಲ್ಲಿಯೇ ಗುಂಡಿ; ಮುಚ್ಚಳ ಮುರಿದ ಮ್ಯಾನ್‌ಹೋಲ್

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 1:53 IST
Last Updated 30 ಜನವರಿ 2021, 1:53 IST
ಗುಬ್ಬಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ
ಗುಬ್ಬಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ   

ಗುಬ್ಬಿ: ಪಟ್ಟಣದಲ್ಲಿ ಅಪೂರ್ಣವಾಗಿರುವ ಒಳಚರಂಡಿ ಮಾರ್ಗ (ಯುಜಿಡಿ) ಕಾಮಗಾರಿಯು ಕಳಪೆಯಾಗಿದೆ. ರಸ್ತೆಗಳ ಮಧ್ಯದಲ್ಲಿಯೇ ಗುಂಡಿಗಳು ಬಿದ್ದಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಜೀವ ಭಯದಲ್ಲಿಯೇ ಓಡಾಡುವಂತಾಗಿದೆ. ಮ್ಯಾನ್ ಹೋಲ್‌ಗಳು ಮುಚ್ಚಳ ಮುರಿದಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಾಯವಾರ ರಸ್ತೆಯಲ್ಲಿ ನಿತ್ಯ ನೂರಾರು ಜನರು ಓಡಾಡುತ್ತಿರುತ್ತಾರೆ. ಆದರೆ ರಸ್ತೆ ಬದಿ ಇರುವ ಮ್ಯಾನ್ ಹೋಲ್ ಮುಚ್ಚಳವಿಲ್ಲದೆ ಅಪಾಯಕ್ಕೆ ಆಹ್ವಾನದಂತಿದೆ. ರಾತ್ರಿ ವೇಳೆ ವಾಹನ ಸವಾರರಿಗೆ ಮ್ಯಾನ್ ಹೋಲ್‌ಗಳು ಕಾಣದೆ ಬೀಳುವ ಸಾಧ್ಯತೆ ಇದೆ ಎನ್ನುತ್ತಾರೆ ಸಾರ್ವಜನಿಕರು.

ಮೂರು ವರ್ಷಗಳ ಹಿಂದೆ ₹21 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಯುಜಿಡಿ ಕಾಮಗಾರಿ ಆರಂಭವಾಗಿತ್ತು. ಆದರೆ ನೀರು ಸಂಸ್ಕರಣಾ ಘಟಕ ನಿರ್ಮಾಣವಾಗದ ಕಾರಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ₹21 ಕೋಟಿ ಅನುದಾನದಲ್ಲಿ 17 ಕೋಟಿಯಷ್ಟು ಖರ್ಚಾಗಿದೆ. ಈ ಕಾಮಗಾರಿ ತುಂಬಾ ಕಳಪೆಯಾಗಿದೆ. ನಿರ್ಮಿಸಿರುವ ಚರಂಡಿಗಳು ಕುಸಿದು ಮಳೆ ಮತ್ತು ಕೊಳಚೆ ನೀರು ಸಮರ್ಪಕವಾಗಿ ಹರಿಯಲು ಸಾಧ್ಯವಾಗದೆ ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗುತ್ತಿದೆ.

ADVERTISEMENT

‘ರಾಯವಾರ ರಸ್ತೆಯ ಪಕ್ಕದಲ್ಲಿಯೇ ನಮ್ಮ ಜಮೀನಿದೆ. ಈ ಮಾರ್ಗದಲ್ಲಿ ಯಾವಾಗಲೂ ಭಯದಲ್ಲಿಯೇ ತಿರುಗಾಡುವಂತ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಸಾಕಷ್ಟು ಬಾರಿ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ರೈತ ಲಕ್ಷ್ಮಣಪ್ಪ.

ಪಟ್ಟಣ ಪಂಚಾಯಿತಿ ಚುನಾಯಿತ ಕೌನ್ಸಿಲ್ ಅಧಿಕಾರಕ್ಕೆ ಬಂದಿದ್ದರೂ ಕಳಪೆ ಕಾಮಗಾರಿ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಅಧಿಕಾರಿಗಳು ಗಮನಹರಿಸಿ ತ್ವರಿತವಾಗಿ ಮ್ಯಾನ್‌ಹೋಲ್‌ಗಳನ್ನು ಮುಚ್ಚಿಸುವುದರ ಜೊತೆಗೆ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಮತ್ತು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ನಾಗರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.