ADVERTISEMENT

ಕುದ್ರೋಳಿ ತೀರ್ಥಾಟನೆ: ‘ವಿಶ್ವಕ್ಕೆ ಪಸರಿಸಿದ ಗುರು ಸಂದೇಶ’

ಕುದ್ರೋಳಿಯಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:10 IST
Last Updated 22 ಫೆಬ್ರುವರಿ 2026, 2:10 IST
‘ಕುದ್ರೋಳಿ ತೀರ್ಥಾಟನೆ’ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ಕುದ್ರೋಳಿ ಕ್ರೇತ್ರದ ವರೆಗೆ ಸಾಗಿತು: ಪ್ರಜಾವಾಣಿ ಚಿತ್ರ
‘ಕುದ್ರೋಳಿ ತೀರ್ಥಾಟನೆ’ ಮಂಗಳೂರಿನ ಸೆಂಟ್ರಲ್‌ ರೈಲು ನಿಲ್ದಾಣದಿಂದ ಕುದ್ರೋಳಿ ಕ್ರೇತ್ರದ ವರೆಗೆ ಸಾಗಿತು: ಪ್ರಜಾವಾಣಿ ಚಿತ್ರ   

ಮಂಗಳೂರು: ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳು ಶಿವಲಿಂಗ ಪ್ರತಿಷ್ಠಾಪಿಸಿದ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ‘ಕುದ್ರೋಳಿ ತೀರ್ಥಾಟನೆ’ಯು ಮಂತ್ರಘೋಷ, ನಾರಾಯಣಗುರುಗಳ ಸಂದೇಶಗಳ ಪ್ರಚಾರದ ಮೂಲಕ ನಗರದ ಬೀದಿಗಳಲ್ಲಿ ಸಂಚಲನ ಸೃಷ್ಟಿಸಿತು.

ನಾರಾಯಣ ಗುರುಗಳ ಭಾವಚಿತ್ರ ಒಳಗೊಂಡ ರಥ, ಸಂದೇಶಗಳ ಫಲಕಗಳು, ಹಳದಿ ಪತಾಕೆಗಳು, ಚಂಡೆ–ವಾದ್ಯದ ಸೊಬಗಿನ ಮೆರವಣಿಗೆ ಪುರಭವನದಿಂದ ಹೊರಟು ಕುದ್ರೋಳಿ ಕ್ರೇತ್ರದ ವರೆಗೆ ಸಾಗಿತು. ರಸ್ತೆಯುದ್ದಕ್ಕೂ ‘ಓಂ ಶ್ರೀ ನಾರಾಯಣ ಪರಮ ಗುರುವೇ ನಮಃ’ ಮಂತ್ರೋಚ್ಛಾರಣೆ ಭಕ್ತಿಯ ಅಲೆಗಳನ್ನೆಬ್ಬಿಸಿತು.  

ಕುದ್ರೋಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದ ಶಿವಗಿರಿ ಮಠದ ಅಧ್ಯಕ್ಷ ಸಚ್ಚಿದಾನಂದ ಸ್ವಾಮೀಜಿ ಮಂಗಳೂರಿನಲ್ಲಿ ಮೊದಲ ಬಾರಿ ತೀರ್ಥಾಟನೆ ನಡೆಯುತ್ತಿದ್ದು ಕುದ್ರೋಳಿ ಕ್ಷೇತ್ರಕ್ಕೆ ಸಂಬಂಧಿಸಿ ಇದು ಪುಣ್ಯದ ದಿನ ಎಂದರು.

ADVERTISEMENT

‘ಮುಂಬೈನ ನೆರೂಲ್‌ನಲ್ಲಿ‌, ಬಹರೇನ್, ದುಬೈ, ಕುವೈತ್‌ನಲ್ಲೂ ಶಿವಗಿರಿ ತೀರ್ಥಾಟನೆ ನಡೆಯುತ್ತಿದೆ’ ಎಂದ ಅವರು ‘ಕೃಷ್ಣನಂತೆ, ಬುದ್ಧನಂತೆ, ಯೇಸುಕ್ರಿಸ್ತನಂತೆ, ವ್ಯಾಸರಂತೆ ನಾರಾಯಣಗುರು ವಿಶ್ವಗುರು. ಅವರ ಸಂದೇಶಗಳು ಈಗ ವಿಶ್ವಕ್ಕೆ ಪಸರಿಸಿವೆ’ ಎಂದರು.

ಗುರುಗಳು ಜನಿಸಿದ್ದು ಕೇರಳದಲ್ಲಾದರೂ ಪ್ರಪಂಚದ ಎಲ್ಲ ಕಡೆ ಅವರ ಚಳವಳಿಯ ಚಾಪು ಮೂಡಿದೆ. ಅಮೆರಿಕದ 10 'ಸ್ಟೇಟ್'ಗಳಲ್ಲಿ ಮಂದಿರಗಳು ಇವೆ. ಲಂಡನ್‌ನಲ್ಲೂ ಫಿಜಿಯಲ್ಲೂ ಕ್ಷೇತ್ರಗಳು ಇವೆ. ಆಸ್ಟ್ರೇಲಿಯಾ ಪಾರ್ಲಿಮೆಂಟ್‌ನಲ್ಲಿ ನಾರಾಯಾಣ ಗುರು ಸಮ್ಮೇಳನ ಆಗಿದೆ. ಶಿವಗಿರಿ ಮಠಕ್ಕೆ ಆಸ್ಟ್ರೇಲಿಯಾ ಜಾಗತಿಕ ಶಾಂತಿ ಪ್ರಶಸ್ತಿ ನೀಡಿದೆ. ಮಾಸ್ಕೊದಲ್ಲಿ ಜಾಗತಿಕ ಧಾರ್ಮಿಕ ಪಾರ್ಲಿಮೆಂಟ್ ‌ನಡೆಯುತ್ತಿದ್ದು ಅದರಲ್ಲಿ ಶಿವಗಿರಿ ಮಠದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದು ಸ್ವಾಮೀಜಿ ಹೇಳಿದರು. 

ಮಾಣಿಲ ಶ್ರೀಧಾಮದ ಮೊಹನದಾಸ ಪರಮಹಂಸ ಸ್ವಾಮೀಜಿ ‘ವರ್ಷಗಳ ಹಿಂದೆ ಮಾಣಿಲ ಗ್ರಾಮಕ್ಕೆ ಹೋದಾಗ ದೇವಸ್ಥಾನದಲ್ಲಿ ಬಿಲ್ಲವರಿಗೆ ಪ್ರವೇಶ ಇರಲಿಲ್ಲ. ಕಟ್ಟೆಪುಣಿಯಲ್ಲಿ ‘ದೊಡ್ಡವರು’ ನಡೆದುಕೊಂಡು ಹೋಗುತ್ತಿದ್ದರೆ ತೆಂಗಿನ ಮರ ಹತ್ತಿದವರಾದರೂ ಕೆಳಗೆ ಇಳಿಯಬೇಕಾದ ಪರಿಸ್ಥಿತಿ ಇತ್ತು. ಇಂಥ ಅಸಮಾನತೆಯನ್ನು ತೊಡೆದು ಹಾಕಲು ಗುರುಗಳ ಸಂದೇಶ ನೆರವಾಗಿದೆ. ಆದ್ದರಿಂದ ಶೋಷಿತ ಸಮುದಾಯಗಳೆಲ್ಲ ಅವರ ಮಾನವೀಯ ಸಂದೇಶವನ್ನು ಪಾಲಿಸಬೇಕು’ ಎಂದು ಮಾಣಿಲ ಶ್ರೀ ಹೇಳಿದರು.

ಕನ್ಯಾಡಿಯ ಬ್ರಹ್ಮಾನಂದ ಸ್ವಾಮೀಜಿ, ಶಿವಗಿರಿಯ ಸತ್ಯಾನಂದ ಸ್ವಾಮೀಜಿ, ಅಸಂಗ ಸ್ವಾಮೀಜಿ, ದೇವಾರ್ಪಣಾನಂದ ಸ್ವಾಮೀಜಿ, ವಿರಾಜಾನಂದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ, ಸುವೇಶ್ವರ ಸ್ವಾಮೀಜಿ, ಸೋಲೂರು‌ ಮಠದ ವಿಖ್ಯಾತಾನಂದ ಸ್ವಾಮೀಜಿ, ಕೇಮಾರು ಕ್ಷೇತ್ರದ ಈಶ ವಿಠ್ಠಲದಾಸ ಸ್ವಾಮೀಜಿ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್‌, ಮುಖಂಡ ವಿನಯಕುಮಾರ್ ಸೊರಕೆ ಪಾಲ್ಗೊಂಡಿದ್ದರು. ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಬೆಳಿಗ್ಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಆಡಳಿತ ಸಮಿತಿಯವರು ತಿಳಿಸಿದರು. 

ನಾರಾಯಣ ಗುರುಗಳನ್ನು ಎಲ್ಲೂ ಬಂಧಿಸಿಡಬೇಡಿ. ಅವರನ್ನು ಮುಕ್ತಗೊಳಿಸಿ. ಅವರು ಯಾವುದೇ ಜಾತಿಗೆ ಮೀಸಲಾಗಿರಬಾರದು. ಮಂತ್ರ ಹೇಳಿದರೆ ಹಳದಿ ಬಟ್ಟೆ ತೊಟ್ಟರೆ ಸಾಲದು. ಗುರುಗಳ ವಿಚಾರ ಪಸರಿಸಬೇಕು.
- ಈಶ ವಿಠ್ಠಲದಾಸ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.