ADVERTISEMENT

ಕುಂದಾಪುರ | ಇಲಾಖೆಗಳು ಜನರಿಗೆ ಹತ್ತಿರವಾಗಲಿ: ಗುರುರಾಜ ಗಂಟಿಹೊಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:14 IST
Last Updated 20 ಜನವರಿ 2026, 2:14 IST
ಕುಂದಾಪುರ ಸಮೀಪದ ವಂಡ್ಸೆಯಲ್ಲಿ ಬೈಂದೂರು ಉತ್ಸವ-2026ರ ಅಂಗವಾಗಿ ವಂಡ್ಸೆ ಗ್ರಾಮೋತ್ಸವ ನಡೆಯಿತು.
ಕುಂದಾಪುರ ಸಮೀಪದ ವಂಡ್ಸೆಯಲ್ಲಿ ಬೈಂದೂರು ಉತ್ಸವ-2026ರ ಅಂಗವಾಗಿ ವಂಡ್ಸೆ ಗ್ರಾಮೋತ್ಸವ ನಡೆಯಿತು.   

ಕುಂದಾಪುರ: ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಇಲಾಖೆಗಳು ಜನರಿಗೆ ಹತ್ತಿರವಾಗಿ ಸೌಲಭ್ಯ, ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸಗಳು ಪರಿಣಾಮಕಾರಿಯಾಗಿ ನಡೆಯಬೇಕು ಎಂಬ ನೆಲೆಯಲ್ಲಿ ಗ್ರಾಮೋತ್ಸವ ಆಯೋಜಿಸಲಾಗುತ್ತಿದೆ ಎಂದು ಶಾಸಕ ಗುರುರಾಜ ಗಂಟಿಹೊಳೆ ಹೇಳಿದರು.

ವಂಡ್ಸೆ ಗ್ರಾಮ ಪಂಚಾಯಿತಿ, ಬೃಂದಾವನ ಸಂಜೀವಿನಿ ಒಕ್ಕೂಟದ ನೇತೃತ್ವದಲ್ಲಿ, ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಬೈಂದೂರು ಉತ್ಸವದ ಅಂಗವಾಗಿ ಆರೋಗ್ಯ, ಕೃಷಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ, ಆಯುಷ್ ಇಲಾಖೆ, ಕಾರ್ಮಿಕ ಇಲಾಖೆ, ನಮ್ಮ ಭೂಮಿ ಸಂಸ್ಥೆ ಸಹಭಾಗಿತ್ವದಲ್ಲಿ ನಡೆದ ವಂಡ್ಸೆ ಗ್ರಾಮೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಗ್ರಾಮಗಳು ಸ್ವತಂತ್ರವಾಗಿ ಬೆಳೆದು, ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು. ಉದ್ಯೋಗ ಸೃಷ್ಟಿ ಬಗ್ಗೆಯೂ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಉತ್ಸವದಿಂದ ನಡೆಯುತ್ತಿದೆ. ಸಂಜೀವಿನಿ ಗುಂಪುಗಳ ಮೂಲಕ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸುವ, ಸ್ವಾವಲಂಬಿಗಳನ್ನಾಗಿಸುವ ಕೆಲಸವಾಗುತ್ತಿದೆ. ಸಂಜೀವಿನಿ ಸದಸ್ಯರಿಗೆ ತರಬೇತಿ ನೀಡಲು ರಾಜ್ಯದಲ್ಲಿರುವ ತರಬೇತಿ ಸಂಸ್ಥೆಗಳಲ್ಲಿ ಒಂದು ವಂಡ್ಸೆಯಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.

ADVERTISEMENT

ವಂಡ್ಸೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗೋವರ್ಧನ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ನಿರಾಮಯ ಸೊಸೈಟಿ ಅಧ್ಯಕ್ಷ ಉದಯ ಕುಮಾ‌ರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಡಾ.ಅತುಲ್ ಕುಮಾ‌ರ್ ಶೆಟ್ಟಿ, ಸಮೃದ್ಧ ಬೈಂದೂರು ಉತ್ಸವದ ಸಂಚಾಲಕ ಗಣೇಶ ಗಾಣಿಗ, ಪಂಚಾಯಿತಿ ಸದಸ್ಯರಾದ ಶಶಿಕಲಾ ಎಸ್, ಸುಬ್ಬು, ಬಿಜೆಪಿ ಮುಖಂಡ ದೀಪಕ್‌ ಕುಮಾ‌ರ್ ಶೆಟ್ಟಿ, ಮಾರ್ಗದರ್ಶಿ ಅಧಿಕಾರಿ ರವೀಂದ್ರ, ತಿರುಮಲ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವಿ.ಕೆ. ಶಿವರಾಮ ಶೆಟ್ಟಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎಂ.ಜಿ. ರಾಮ, ಮುಖ್ಯಶಿಕ್ಷಕ ಶಂಕ‌ರ್, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯ ಶಂಕರ ಶೆಟ್ಟಿ, ಸುಲೋಚನಾ, ಬೃಂದವನ ಸಂಜೀವಿನಿ ಸಂಘದ ಅಧ್ಯಕ್ಷೆ ಸಲ್ಮಾ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಶೇಟ್ ಸ್ವಾಗತಿಸಿದರು. ಸಂಜೀವಿನಿ ಸಂಘದ ಆಶಾ ವಂದಿಸಿದರು. ಶಿಕ್ಷಕ ಸೋಮರಾಯ ಜನ್ನು, ವಾಣಿಶ್ರೀ ನಿರೂಪಿಸಿದರು.

ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ, ಜಿಲ್ಲಾ ಆಯುಷ್ ಆಯುರ್ವೇದ ಇಲಾಖೆ ವೈದ್ಯರಿಂದ ಆಯುರ್ವೇದ ಚಿಕಿತ್ಸೆ ತಪಾಸಣೆ, ಔಷಧ ವಿತರಣೆ, ಸರ್ಕಾರಿ ಆಸ್ಪತ್ರೆ, ಎನ್.ಸಿ.ಡಿ. ವೈದ್ಯರಿಂದ ಹಿರಿಯ ನಾಗರಿಕರು, ಅಂಗವಿಕಲರ ಆರೋಗ್ಯ ತಪಾಸಣೆ, ಆಪ್ತ ಸಮಾಲೋಚನೆ, ಔಷಧ ವಿತರಣೆ, ಕಾರ್ಮಿಕ ಇಲಾಖೆ ವೈದ್ಯರಿಂದ ನೋಂದಾಯಿತ ಕಾರ್ಮಿಕರು, ಅವರ ಕುಟುಂಬದವರ ಆರೋಗ್ಯ ತಪಾಸಣೆ, ಎ.ಜೆ ಆಸ್ಪತ್ರೆ ಜನರಲ್‌ ಮೆಡಿಸಿನ್, ಮಧುಮೇಹ, ಹೃದಯ ಸಂಬಂಧಿತ ಚಿಕಿತ್ಸೆ, ಕೃಷಿ ಸಲಕರಣೆಗಳ ಪ್ರದರ್ಶನ, ಮಾಹಿತಿ, ಸಾಕುನಾಯಿಗಳು, ಬೆಕ್ಕುಗಳಿಗೆ ರೇಬಿಸ್ ನಿರೋಧಕ ಲಸಿಕೆ, ಶಿರೂರು ಮುದ್ದುಮನೆ ಕಣ್ಣಿನ ಆಸ್ಪತ್ರೆಯವರಿಂದ ಕಣ್ಣಿನ ತಪಾಸಣೆ, ತೋಟಗಾರಿಕೆ ಬಗ್ಗೆ ಮಾಹಿತಿ, ಆಯ್ದ ಫಲಾನುಭವಿಗಳಿಗೆ ತರಕಾರಿ ಬೀಜ ವಿತರಣೆ ನಡೆಯಿತು. ಕಂದಾಯ ಇಲಾಖೆ ಸಂಬಂಧಿಸಿದ ಮಾಹಿತಿ, ಸಂಜೀವಿನಿ ಸದಸ್ಯರಿಂದ ಆಹಾರ ಮೇಳ, ಮಹಿಳಾ ಸಬಲೀಕರಣ ಬಗ್ಗೆ ತಜ್ಞರಿಂದ ಮಾಹಿತಿ, ಗ್ರಂಥಾಲಯದಿಂದ ಪುಸ್ತಕ ಮಳಿಗೆ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.