
ಉಡುಪಿ: ‘ವಿಧಾನಸಭೆ ಅಧಿವೇಶನದ ವೇಳೆ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸಭಾಧ್ಯಕ್ಷರು ಟೀಕಿಸಿರುವುದು ಸರಿಯಲ್ಲ. ಪೀಠಕ್ಕೆ ಗೌರವ ನೀಡಿ ಮೌನವಾಗಿದ್ದೆ. ಸ್ಪೀಕರ್ ಯು.ಟಿ. ಖಾದರ್ ಅವರು ಹರಿಕಥೆ ಬಗ್ಗೆ ಹಗುರವಾಗಿ ಮಾತನಾಡಿದ್ದು ನೋವುಂಟು ಮಾಡಿದೆ’ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
‘ನಾನು ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಅಭಿವೃದ್ಧಿ, ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಅವರು ಟೀಕೆ ಮಾಡಿರುವುದು ಸರಿಯಲ್ಲ’ ಎಂದೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ನಾನು ಕಾರ್ಯಕರ್ತನಾಗಿದ್ದು, ಶಾಸಕನಾಗಿದ್ದೇನೆ. ಅವರು ತಂದೆಯ ಹೆಸರಲ್ಲಿ ಮತ ಕೇಳಿ ಶಾಸಕರಾದವರು. ಅವರು ಉಡುಪಿ ಜನರ ಬಳಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ಕಳೆದ ಮೂರು ಮಳೆಗಾಲಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದ್ದು, ನಗರ ಪ್ರದೇಶದಲ್ಲಿ ರಸ್ತೆಗಳು, ಚರಂಡಿಗಳು ಕೊಚ್ಚಿಹೋಗಿವೆ. ಸರ್ಕಾರದಿಂದ ಅನುದಾನ ಬಂದಿಲ್ಲ’ ಎಂದು ಯಶಪಾಲ್ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.