ADVERTISEMENT

ಹೆಬ್ಬಾರರ ಕಲೆಯಲ್ಲಿ ಕರಾವಳಿ ಸಂಸ್ಕೃತಿಯ ಬಿಂಬ: ಡಾ.ಎಂ.ಡಿ. ವೆಂಕಟೇಶ್‌

ಮಾಹೆಯಲ್ಲಿ ಲೈಫ್‌ ಅಂಡ್ ಆರ್ಟ್ ಆಫ್ ಹೆಬ್ಬಾರ್ ಕೃತಿ ಬಿಡುಗಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 15:02 IST
Last Updated 15 ಜೂನ್ 2021, 15:02 IST
ಪ್ರಸಿದ್ಧ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರ 110ನೇ ಜನ್ಮದಿನದ ಅಂಗವಾಗಿ ಮಾಹೆಯಲ್ಲಿ ಹೆಬ್ಬಾರರ ಕುರಿತ ಪುಸ್ತಕವನ್ನು ಮಾಹೆಯ ಕುಲಪತಿ ಡಾ.ಎಂ.ಡಿ. ವೆಂಕಟೇಶ್‌ ಬಿಡುಗಡೆ ಮಾಡಿದರು.
ಪ್ರಸಿದ್ಧ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರ 110ನೇ ಜನ್ಮದಿನದ ಅಂಗವಾಗಿ ಮಾಹೆಯಲ್ಲಿ ಹೆಬ್ಬಾರರ ಕುರಿತ ಪುಸ್ತಕವನ್ನು ಮಾಹೆಯ ಕುಲಪತಿ ಡಾ.ಎಂ.ಡಿ. ವೆಂಕಟೇಶ್‌ ಬಿಡುಗಡೆ ಮಾಡಿದರು.   

ಉಡುಪಿ: ಪ್ರಸಿದ್ಧ ಚಿತ್ರ ಕಲಾವಿದ ಕೆ.ಕೆ. ಹೆಬ್ಬಾರ್ ಅವರ 110ನೇ ಜನ್ಮದಿನದ ಅಂಗವಾಗಿ ಮಾಹೆ ಆಯೋಜಿಸಿದ್ದ ‘ಸೆಲಬ್ರೇಟಿಂಗ್ ಹೆಬ್ಬಾರ್’ ಕಾರ್ಯಕ್ರಮ ಮಂಗಳವಾರ ಆನ್‌ಲೈನ್‌ನಲ್ಲಿ ನಡೆಯಿತು. ಇದೇ ಸಂದರ್ಭ ಹೆಬ್ಬಾರರ ಕುರಿತ ಪುಸ್ತಕ ಮತ್ತು ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.

‘ಲೈಫ್ ಅಂಡ್ ಆರ್ಟ್ ಆಫ್ ಹೆಬ್ಬಾರ್’ ಗ್ರಂಥ ಬಿಡುಗಡೆಗೊಳಿಸಿ ಮಾಹೆಯ ಕುಲಪತಿ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ ‘ವೈದ್ಯಕೀಯ, ಎಂಜಿನಿಯರಿಂಗ್ ಪದವಿ ಕಲಿಯುವ ವಿದ್ಯಾರ್ಥಿಗಳು ಸಂಗೀತ, ನೃತ್ಯ ಮತ್ತು ಲಲಿತಕಲೆಗಳನ್ನು ಆಸ್ವಾದಿಸಲು ಮಾಹೆ ವೇದಿಕೆ ಕಲ್ಪಿಸುತ್ತಿದೆ. ಜತೆಗೆ ಹೆಬ್ಬಾರ್ ಗ್ಯಾಲರಿ ಅಂಡ್ ಆರ್ಟ್ ಸೆಂಟರ್ ಅನ್ನು ಆರಂಭಿಸುವ ಮೂಲಕ ಪ್ರಮುಖ ಹೆಜ್ಜೆ ಇರಿಸಿದೆ’ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಣಿಪಾಲ ವಿವಿ ಶಿಕ್ಷಣ ನೀತಿ ಅನುಷ್ಠಾನಗೊಳಿಸುವಲ್ಲಿ ಕ್ರಿಯಾಶೀಲ ಹೆಜ್ಜೆ ಇರಿಸಿದೆ. ವಿಶೇಷವಾಗಿ ಸ್ಥಳೀಯ ಲೇಖಕರು, ಕವಿಗಳು, ಕಲಾವಿದರು, ನಟರರನ್ನು ಸೇರಿಸಿಕೊಂಡು ರೂಪಿಸುವ ವಿಭಿನ್ನ ಯೋಜನೆ ಸಿದ್ಧವಾಗುತ್ತಿದೆ ಎಂದರು.‌

ADVERTISEMENT

ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್. ವಿನೋದ್ ಭಟ್ ಮಾತನಾಡಿ, ‘ಕೆ. ಕೆ. ಹೆಬ್ಬಾರ್ ಕರಾವಳಿಯಲ್ಲಿ ಜನಿಸಿ ವಿಶ್ವಮಟ್ಟಕ್ಕೆ ಬೆಳೆದವರು. ಆಧುನಿಕ ಕಲಾಚಿಂತನೆಯಿಂದ ಪ್ರಭಾವಿತರಾದ ಅವರಿಗೆ ತವರೂರಿಗಿಂತ ಯುರೋಪಿನಲ್ಲಿಯೇ ಹೆಚ್ಚಿನ ಗೌರವ ದೊರೆತಿದೆ. ಅವರ ಕಲೆ ಕೇರಳದ ಸಂಸ್ಕೃತಿಯಿಂದ ಪ್ರಭಾವಿತಗೊಂಡಿದೆ ಎಂಬುದು ಸರಿಯಲ್ಲ. ಹೆಬ್ಬಾರರ ಕಲೆಯಲ್ಲಿ ಅಪ್ಪಟ ಕರಾವಳಿ ಸಂಸ್ಕೃತಿಯ ಪ್ರತಿಬಿಂಬ ಇದೆ’ ಎಂದರು.

ಕಲಾ ಇತಿಹಾಸ ತಜ್ಞೆ ಲಿನಾ ವಿನ್ಸೆಂಟ್ ಮಾತನಾಡಿದರು. ‘ಆರ್ಟ್ ಅಂಡ್ ಲೈಫ್ ಆಫ್ ಹೆಬ್ಬಾರ್ ’ ಕೃತಿಯ ಮೂಲ ಕನ್ನಡ ಲೇಖಕರಾದ ಕು. ಶಿ. ಹರಿದಾಸ ಭಟ್ ಹಾಗೂ ಕೆ. ಕೆ. ಹೆಬ್ಬಾರರ ನಡುವಿನ ಸ್ನೇಹವನ್ನು ಜಯದೇವ ಭಟ್ ಸ್ಮರಿಸಿದರು. ‌

ಕೃತಿಯ ಕುರಿತು ಸಂವಾದವನ್ನು ಡಾ. ನೀತಾ ಇನಾಂದಾರ್, ಡಾ. ನಿಖಿಲ್ ಗೋವಿಂದ್ ಮತ್ತು ಡಾ. ಸೃಜನಾ ಕಾಯ್ಕಿಣಿ ನಡೆಸಿಕೊಟ್ಟರು. ಮಾಹೆಯ ವರಿಷ್ಠರಾದ ವಸಂತಿ ಆರ್. ಪೈ, ಡಾ. ರಂಜನ್ ಪೈ, ಶ್ರುತಿ ಆರ್. ಪೈ, ಮಾಹೆ ಸಹ ಕುಲಪತಿ ಡಾ. ಎಚ್. ಎಸ್ ಬಲ್ಲಾಳ್, ರೇಖಾ ರಾವ್, ರಜನಿ ಪ್ರಸನ್ನ, ಡಾ.ಡಿ.ಎ. ಪ್ರಸನ್ನ ಇದ್ದರು. ಅನುಷಾ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.