
ಹೆಬ್ರಿ : ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಹಲವಾರು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ. ಮೇಲ್ದರ್ಜೆಗೇರದ ಕಾರಣ ಬಹುಬೇಡಿಕೆಯ ಸ್ಕ್ಯಾನಿಂಗ್ ಸೇವೆ ಇಲ್ಲದಂತಾಗಿದೆ. ತಾಲ್ಲೂಕು ಆಸ್ಪತ್ರೆಯನ್ನಾಗಿ ಮಾಡಿ ಬಡ ಜನರಿಗೆ ಉತ್ತಮ ಸೇವೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದರು.
ಹೆಬ್ರಿ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಹೆಬ್ರಿಯಿಂದ ಬ್ರಹ್ಮಾವರ, ಕುಂದಾಪುರಕ್ಕೆ ಹೋಗಿ ಬರುವ ಬಸ್ಗಳು ಹೆಬ್ರಿ ತಾಲ್ಲೂಕು ಕಚೇರಿ ಬಳಿ ಕಡ್ಡಾಯವಾಗಿ ಹೋಗಿ ಬರಬೇಕೆಂದು ಆರ್ಟಿಒ ಆದೇಶವಿದ್ದರೂ, ಬಸ್ಗಳು ನೇರವಾಗಿ ಪೇಟೆಗೆ ಬರುತ್ತಿರುವುದರಿಂದ, ಅನೇಕ ಬಡವರಿಗೆ ಸಮಸ್ಯೆ ಆಗಿದ್ದು, ಶೀಘ್ರದಲ್ಲಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಹೆಬ್ರಿಯಲ್ಲಿ ಪೊಲೀಸ್ ಠಾಣೆ ಕಾಡಿನಲ್ಲಿ ಇರುವುದರಿಂದ ಪೊಲೀಸ್ ಔಟ್ಪೋಸ್ಟ್ ತೆರೆಯಬೇಕು. ಅನೇಕ ಬಡವರು ದೂರ ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಪೊಲೀಸ್ ಜನಸ್ಪಂದನ ಸಭೆಯನ್ನು ನಿರಂತರವಾಗಿ ಮಾಡಬೇಕು ಎಂದು ಗ್ರಾಮಸ್ಥ ನಿತೀಶ್ ಎಸ್.ಪಿ ಆಗ್ರಹಿಸಿದರು.
ಪೋಸ್ಟ್ ಆಫೀಸ್ ನಿರ್ಮಾಣಕ್ಕೆ ಜಾಗ ಇದ್ದು, ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕೆಲಸ ನಿರ್ವಹಿಸುತ್ತಿದೆ. ಹಿರಿಯರಿಗೆ ನಡೆದುಕೊಂದು ಹೋಗಲು ಕಷ್ಟವಾಗುತ್ತಿದೆ ಎಂದು ನೀರೆ ಕೃಷ್ಣ ಶೆಟ್ಟಿ ಆಗ್ರಹಿಸಿದರು.
ಹೆಬ್ರಿ ಆಸ್ಪತ್ರೆಯಲ್ಲಿ ಬಹುಬೇಡಿಕೆಯ ಫಿಜಿಯೋಥೆರಪಿ, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರ ಹುದ್ದೆಗಳು ಖಾಲಿ ಇರುವುದರಿಂದ ದೂರದ ಊರುಗಳಿಗೆ ಚಿಕಿತ್ಸೆಗೆ ಹೋಗಬೇಕಾಗಿದೆ. ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸಾಮಾಜಿಕ ಕಾರ್ಯಕರ್ತ ನಿತೀಶ್ ಎಸ್.ಪಿ ಆಗ್ರಹಿಸಿದರು.
ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಾದರಿ ಗ್ರಾಮಸಭೆಗೆ ಕಾರಣರಾದರು. ಸುರೇಶ್ ಭಂಡಾರಿ, ಸುಧಾಕರ ಹೆಗ್ಡೆ, ಸದಾಶಿವ ಪ್ರಭು ಸಹಿತ ಅನೇಕರು ಸಲಹೆ ನೀಡಿದರು.
ನೋಡಲ್ ಅಧಿಕಾರಿಯಾಗಿದ್ದ ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ದೇಶ್ ಮಾತನಾಡಿ, ಹೆಬ್ರಿ ಗ್ರಾಮ ಪಂಚಾಯಿತಿ ಪಾರದರ್ಶಕವಾಗಿ ಆಡಳಿತ ನಡೆಸಿರುವುದಕ್ಕೆ ಇಲ್ಲಿ ನೀಡಿರುವ ಲೆಕ್ಕಪತ್ರದ ಪ್ರತಿ ನಿದರ್ಶನವಾಗಿದೆ ಎಂದರು.
ಪಂಚಾಯಿತಿ ಅಧ್ಯಕ್ಷ ತಾರನಾಥ ಎಸ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಪ್ರಿಯಾ, ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು. ಸಿಬ್ಬಂದಿ ಪ್ರಸಾದ್ ಶೆಟ್ಟಿ ನಿರೂಪಿಸಿ, ವಂದಿಸಿದರು. ಪಿಡಿಒ ಸದಾಶಿವ ಸೇರ್ವೆಗಾರ್ ಸ್ವಾಗತಿಸಿದರು. ಲೆಕ್ಕ ಸಹಾಯಕಿ ಪ್ರತಿಭಾ ಫಲಾನುಭವಿಗಳ ಪಟ್ಟಿ ವಾಚಿಸಿದರು.
ಬಸ್ ಸಮಸ್ಯೆ ಸರಿಪಡಿಸಲು ಆಗ್ರಹ ಪೊಲೀಸ್ ಔಟ್ಪೋಸ್ಟ್ ತೆರೆಯಲು ಒತ್ತಾಯ ‘ಹೆಬ್ರಿ ಆಸ್ಪತ್ರೆಯ ಪ್ರಮುಖ ಹುದ್ದೆ ಭರ್ತಿಮಾಡಿ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.