ADVERTISEMENT

ಕಾಪು, ಪಡುಬಿದ್ರಿ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನ

ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 6:10 IST
Last Updated 21 ಸೆಪ್ಟೆಂಬರ್ 2025, 6:10 IST
ಕಾಪು ಬೀಚ್‌ನಲ್ಲಿ ಅಯೋಜಿಸಲಾದ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಕರ್ಮಚಾರಿಗಳು ಹಾಗೂ ಪುರಸಭೆ ಸ್ವಚ್ಛತಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು
ಕಾಪು ಬೀಚ್‌ನಲ್ಲಿ ಅಯೋಜಿಸಲಾದ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಕರ್ಮಚಾರಿಗಳು ಹಾಗೂ ಪುರಸಭೆ ಸ್ವಚ್ಛತಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು   

ಕಾಪು (ಪಡುಬಿದ್ರಿ): ಜಿಲ್ಲಾಡಳಿತ, ಕಾಪು ಪುರಸಭೆ, ಸ್ವಚ್ಛಂ ವಾಟರ್ ಅಡ್ವೆಂಚರ್ ಮಣಿಪಾಲ ಎಂಐಟಿ, ಎನ್‌ಎಸ್‌ಎಸ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಯೋಜನೆಯಡಿ ಕಾಪು ಬೀಚ್‌ನಲ್ಲಿ ಬೀಚ್ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳಿಗ್ಗೆ 7ರಿಂದಲೇ ಸ್ವಯಂಸೇವಕ ಸಂಘಟನೆಗಳ ವಿದ್ಯಾರ್ಥಿಗಳು ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಬೀಚ್‌ನ ಎರಡು ಬದಿಯಲ್ಲಿ ಪ್ರವಾಸಿಗರು ಹಾಕಿದ ಪ್ಲಾಸ್ಟಿಕ್ ವಸ್ತು, ಬಾಟಲಿಗಳು ಇತರ ತ್ಯಾಜ್ಯವನ್ನು ಸಂಗ್ರಹಿಸಿ ಪುರಸಭೆ ವಾಹನಗಳಿಗೆ ತುಂಬಿಸಿದರು.

ಸಮಾರೋಪದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿದ್ಯಾರ್ಥಿಗಳ ಶ್ರಮದಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 

ADVERTISEMENT

ಈ ಸಂದರ್ಭ ಬೀಚ್ ಸ್ವಚ್ಛತಾ ಕರ್ಮಚಾರಿಗಳು ಹಾಗೂ ಪುರಸಭೆ ಸ್ವಚ್ಛತಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾಪು ಪುರಸಭೆ ಮುಖ್ಯಾಧಿಕಾರಿ ನಾಗರಾಜ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಉಪ ಪರಿಸರ ಅಧಿಕಾರಿ ಅಮೃತಾ, ಸ್ವಚ್ಛಂ ಅಡ್ವೆಂಚರ್ ಸಂಸ್ಥೆಯ ತಾರಾನಾಥ ಪೂಜಾರಿ, ಕಾಪು ಪುರಸಭೆ ಅಧ್ಯಕ್ಷೆ ಹರಿಣಾಕ್ಷಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಪುರಸಭಾ ಸದಸ್ಯರಾದ ನಿತಿನ್ ಕುಮರ್, ಮೋಹಿಣಿ ಶೆಟ್ಟಿ, ಶೈಲೇಶ್, ಮಣಿಪಾಲ ಸಂಸ್ಥೆಯ ಪ್ರಾಧ್ಯಾಪಕ ನಯಾಶ್ ಶೆಟ್ಟಿ ಇದ್ದರು. ದಿವಾಕರ್ ಕಡೆಕಾರ್ ನಿರೂಪಿಸಿದರು.

ಪಡುಬಿದ್ರಿ ಬೀಚ್‌ನಲ್ಲಿ ಎಸ್‌ಪಿ ಚಾಲನೆ 

‘ನಮ್ಮ ಸುತ್ತಮುತ್ತಲಿನ ಪರಿಸರ, ಸಾಗರದಲ್ಲಿನ ಜೀವ ವೈವಿಧ್ಯವನ್ನು ರಕ್ಷಿಸಿಕೊಳ್ಳಲು ಮತ್ತು ಪ್ಲಾಸ್ಟಿಕ್‌ಗೆ ಶಾಶ್ವತವಾಗಿ ವಿದಾಯ ಹೇಳಲು ಮುಂದಾಗಬೇಕು. ಆಗ ಪ್ರಕೃತಿಯೂ ನಮ್ಮೊಂದಿಗೆ ಸ್ಪಂದಿಸುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದರು.

ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಪಡುಬಿದ್ರಿಯ ಬ್ಲ್ಯೂ ಫ್ಲಾಗ್‌ ಬೀಚ್‌ನಲ್ಲಿ ಸೇವಾ ಪರ್ವ–25ರ ಅಡಿಯಲ್ಲಿ ನಡೆಸಲಾದ ಬೀಚ್ ಸ್ವಚ್ಛತಾ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ ತಮ್ಮ ಸಹಿ ಅಭಿಯಾನಕ್ಕೆ ಚಾಲನೆ ನೀಡಿ, ಸಸಿಯೊಂದನ್ನು ನೆಟ್ಟರು. ಕಾಪು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ (ಪ್ರಭಾರ) ವಿಂದ್ಯಾ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಕೇಂದ್ರ ಪರಿಸರ ಇಲಾಖೆ ಅಧಿಕಾರಿ ಭಾವನಾ, ಸಿಆರ್‌ಝೆಡ್ ನಿರ್ದೇಶಕ ರಾಮಲಿಂಗ, ಬ್ಲ್ಯೂ ಫ್ಲಾಗ್‌ ಬೀಚ್ ಪ್ರಬಂಧಕ ವಿಜಯ ಶೆಟ್ಟಿ, ವಾರಿಜಾ, ಅಶೋಕ್ ಸಾಲ್ಯಾನ್, ವಿಶ್ವಾಸ್ ಅಮೀನ್ ಇದ್ದರು.

ಪಂಚಾಯಿತಿ ಪಿಡಿಒ ಮಂಜುನಾಥ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಪಡುಬಿದ್ರಿಯಲ್ಲಿ ನಡೆದ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಚಾಲನೆ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.