ADVERTISEMENT

ಎಂ.ಜಿ.ಎಂ ಕೃಷಿ ಸಮ್ಮಿಲನ: ಯುವಕರಲ್ಲಿ ಕೃಷಿ ಆಸಕ್ತಿ ಮೂಡಿಸಲು ಪ್ರಯತ್ನ

ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 12:23 IST
Last Updated 18 ಮಾರ್ಚ್ 2021, 12:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಎಂಜಿಎಂ ಕಾಲೇಜಿನ ಮಾನವಿಕ ಹಾಗೂ ಭಾಷಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ರೆಡ್ ಕ್ರಾಸ್ ಹಾಗೂ ಐಕ್ಯುಎಸಿಯಿಂದ ಮಾರ್ಚ್ 20 ಮತ್ತು 21ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ಎರಡು ದಿನಗಳ ಎಂಜಿಎಂ ಕೃಷಿ ಸಮ್ಮಿಲನ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನದ ದೃಷ್ಟಿಯಿಂದ ಹಾಗೂ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಕೃಷಿ ಆಸಕ್ತಿ ಹೆಚ್ಚಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಕೃಷಿಕರಿಂದ ಕೃಷಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ವಿವಿಧ ವಿಷಯಗಳ ಕುರಿತು ತಜ್ಞರಿಂದ, ಸಾಧಕ ಕೃಷಿಕರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ.

ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು, ತರಕಾರಿ, ಸಸಿ, ಬೀಜ ಹಾಗೂ ಮಣ್ಣಿನ ಮಡಿಕೆ, ಬುಟ್ಟಿ ಮತ್ತಿತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಅವಕಾಶ ಕೃಷಿ ಸಮ್ಮಿಲನ ಕಾರ್ಯಕ್ರಮದಲ್ಲಿದೆ. ಕೈತೋಟ, ತಾರಸಿ ಕೃಷಿ, ಕಸಿ ಕಟ್ಟುವಿಕೆ ಮತ್ತು ಅಂಗಾಂಶ ಕೃಷಿಗಳ ಪ್ರಾತ್ಯಕ್ಷಿಕೆಯೂ ನಡೆಯಲಿದೆ. ಕಲಾವಿದ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ಕಾಡುತ್ಪತ್ತಿಗಳ ಪರಿಚಯ ಹಾಗೂ ಮೌಲ್ಯವರ್ಧನೆಯ ಕುರಿತು ಮಾಹಿತಿ ಸಿಗಲಿದೆ.

ADVERTISEMENT

20ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಎಂಜಿಎಂ ಕೃಷಿ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ, ಪ್ರಗತಿಪರ ಕೃಷಿಕ ನಟರಾಜ್ ಹೆಗ್ಡೆ, ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎ. ಮಾಲತಿ ದೇವಿ, ಐಕ್ಯುಎಸಿ ಸಂಯೋಜಕ ಅರುಣ್ ಕುಮಾರ್ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

11.30ಕ್ಕೆ ಮಂಗಳೂರಿನ ಪಶು ವೈದ್ಯ ಡಾ.ಮನೋಹರ ಉಪಾಧ್ಯ ಅಂಗಳದಾಚೆಯೂ ಆರೋಗ್ಯ ಕುರಿತು, ಮಧ್ಯಾಹ್ನ 12.15ಕ್ಕೆ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ‘ಸಮಗ್ರ ಕೃಷಿ ಪದ್ದತಿಯಿಂದ ಅಧಿಕ ಆದಾಯ’ ವಿಷಯದ ಬಗ್ಗೆ, ಮಧ್ಯಾಹ್ನ 2 ಗಂಟೆಗೆ ಶಂಕರಪುರದ ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೋ ತಾರಸಿ ಕೃಷಿಯಲ್ಲಿ ವಿನೂತನ ಪ್ರಯೋಗದ ಬಗ್ಗೆ, ಮಧ್ಯಾಹ್ನ 3ಕ್ಕೆ ನಿಟ್ಟೂರು ಹೈಸ್ಕೂಲಿನ ನಿವೃತ್ತ ಮುಖ್ಯೋಪಧ್ಯಾಯ ಮುರಳಿ ಕಡೆಕಾರ್ ಅವರು ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ಸಾಮುದಾಯಿಕ ಸಹಭಾಗಿತ್ವದ ಕುರಿತು ಮಾತನಾಡಲಿದ್ದಾರೆ.

21ರಂದು ಬೆಳಿಗ್ಗೆ 10 ಗಂಟೆಗೆ ಆಯುರ್ವೇದ ವೈದ್ಯ ಡಾ.ಶ್ರೀಧರ ಬಾಯರಿ ಔಷಧಿ ಸಸ್ಯಗಳಿಂದ ಆರೋಗ್ಯ ರಕ್ಷಣೆ ಕುರಿತು, ಬೆಳಿಗ್ಗೆ 10.45ಕ್ಕೆ ಅಜೆಕಾರಿನ ಪ್ರಗತಿಪರ ಕೃಷಿಕ ನಾರಾಯಣ ನಾಯ್ಕ ನಿಂಬೆ ಕೃಷಿ, ಸವಾಲು ಮತ್ತು ಸಾಧನೆ, ಬೆಳಿಗ್ಗೆ 11.30ಕ್ಕೆ ಕಲಾವಿದ ಮತ್ತು ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ಸಾಂಪ್ರದಾಯಿಕ ಕೃಷಿ ಪದ್ದತಿಯ ದಾಖಲೀಕರಣ, ಮಧ್ಯಾಹ್ನ 12.30ಕ್ಕೆ ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಅಂಗಾಶ ಕೃಷಿಯ ಅವಶ್ಯಕತೆ ಮತ್ತು ನಿರ್ವಹಣೆಯ ಕುರಿತು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.