ADVERTISEMENT

ಡಿಜಿಟಲ್‌ ಗ್ರಂಥಾಲಯದಲ್ಲಿ 90 ಲಕ್ಷ ನೋಂದಣಿ

ಗೂಗಲ್‌ಮೀಟ್‌ನಲ್ಲಿ ಗ್ರಂಥಪಾಲಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 15:04 IST
Last Updated 14 ಆಗಸ್ಟ್ 2021, 15:04 IST
ಉಡುಪಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಈಚೆಗೆ ಗ್ರಂಥಪಾಲಕರ ದಿನಾಚರಣೆಯನ್ನು ಸಾಹಿತಿ ವಸಂತಿಶೆಟ್ಟಿ ಉದ್ಘಾಟಿಸಿದರು.
ಉಡುಪಿಯ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಈಚೆಗೆ ಗ್ರಂಥಪಾಲಕರ ದಿನಾಚರಣೆಯನ್ನು ಸಾಹಿತಿ ವಸಂತಿಶೆಟ್ಟಿ ಉದ್ಘಾಟಿಸಿದರು.   

ಉಡುಪಿ: ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಈಚೆಗೆ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಜನ್ಮ ದಿನಾಚರಣೆ ಪ್ರಯುಕ್ತ ‘ಗ್ರಂಥಪಾಲಕರ ದಿನಾಚರಣೆಯನ್ನುಗೂಗಲ್ ಮೀಟ್‌ನಲ್ಲಿ ಆಚರಿಸಲಾಯಿತು.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ.ಸತೀಶ ಕುಮಾರ ಎಸ್. ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ ಪೋರ್ಟಲ್‍ನಲ್ಲಿ ಇದುವರೆಗೆ 90 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಸಾರ್ವಜನಿಕರು ಇ ಪೋರ್ಟಲ್ ಬಳಸಿ ದಿನಪತ್ರಿಕೆ, ನಿಯತಕಾಲಿಕೆ, ಜರ್ನಲ್‍ಗಳನ್ನು ಓದುತ್ತಿದ್ದಾರೆ. ಮೊಬೈಲ್ ಆ್ಯಪ್‌ಮೂಲಕವೂ ಇ ಪೋರ್ಟಲ್‌ ಸೇವೆ ಪಡೆಯಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ‘ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್.ರಂಗನಾಥನ್: ನೆನಪು’ ಕುರಿತು ಉಪನ್ಯಾಸ ನೀಡಿದ ಸಾಹಿತಿ ವಸಂತಿಶೆಟ್ಟಿ ‘ಎಸ್.ಆರ್.ರಂಗನಾಥನ್‍ ಅವರು ದ್ವಿಬಿಂದು ಪದ್ದತಿಯನ್ನು ರೂಢಿಗೆ ತಂದು ಗ್ರಂಥಾಲಯ ಪಿತಾಮಹ ಎನಿಸಿಕೊಂಡರು. ಸರಳ ಜೀವನ ನಡೆಸುವ ಮೂಲಕ ಗ್ರಂಥಾಲಯಕ್ಕೆ ಸರ್ವಸ್ವವನ್ನೂ ಧಾರೆ ಎರೆದು ಧೀಮಂತ ವ್ಯಕ್ತಿ ಎನಿಸಿಕೊಂಡರು ಎಂದು ಸ್ಮರಿಸಿದರು.

ADVERTISEMENT

‘ಕೊರೊನದ ಜೊತೆಗೆ ನಮ್ಮ ಬದುಕು ಹೇಗೆ ಮತ್ತು ಏಕೆ?’ ವಿಷಯದ ಕುರಿತು ಉಪನ್ಯಾಸ ನೀಡಿದ ಸಂವೇದನಾ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಸುಬ್ರಹ್ಮಣ್ಯ ಭಟ್ ‘ಜೀವನದಲ್ಲಿ ಅಡ್ಡಿ ಆತಂಕಗಳನ್ನು ಸರಿಪಡಿಸಿಕೊಂಡು ಮುನ್ನಡೆಯುವಂತೆ, ಕೊರೊನಾವನ್ನು ಕೂಡ ಧೈರ್ಯವಿಂದ ಎದುರಿಸಿ ಜೀವನದಲ್ಲಿ ಮುನ್ನಡೆಯಬೇಕು. ಮಕ್ಕಳಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸಬೇಕು ಎಂದರು.

‘ಡಿಜಿಟಲ್ ಗ್ರಂಥಾಲಯ: ಬಳಕೆ, ಮಹತ್ವ ಮತ್ತು ಉಪಯೋಗಗಳು’ ಕುರಿತು ಗೋಪಾಲ ರೆಡ್ಡಿ ಮಾತನಾಡಿ, ‘ಕರ್ನಾಟಕ ಡಿಜಿಟಲ್ ಪಬ್ಲಿಕ್ ಲ್ರೈಬ್ರರಿ ಪೋರ್ಟಲ್‍ನಲ್ಲಿ ವಿದ್ಯಾರ್ಥಿಗಳು ಸದಸ್ಯತ್ವ ಪಡೆದು ಪುಸ್ತಕ, ನಿಯತಕಾಲಿಕೆ, ದಿನಪತ್ರಿಕೆ, ಜರ್ನಲ್‍ಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಐ.ನಳಿನಿ ಕಾರ್ಯಕ್ರಮ ನಿರೂಪಿಸಿದರು. ಕುಂದಾಪುರ ಶಾಖಾ ಗ್ರಂಥಾಲಯದ ಸಹ ಗ್ರಂಥಪಾಲಕ ಜಗದೀಶ್ ಭಟ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.