ಉಡುಪಿ: ಮಣಿಪಾಲ–ಪೆರಂಪಳ್ಳಿ-ಅಂಬಾಗಿಲು ರಸ್ತೆ ವಿಸ್ತರಣೆ ತ್ವರಿತಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಶಾಸಕ ರಘುಪತಿ ಭಟ್ ಸಭೆ ನಡೆಸಿದರು.
ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ರಸ್ತೆ ವಿಸ್ತರಣೆಗೆ ಭೂಸ್ವಾಧೀನಪಡಿಸಿಕೊಳ್ಳಲು ಟಿಡಿಆರ್ ಪ್ರಕ್ರಿಯೆಗೆ ನೋಟಿಫಿಕೇಶನ್ ಆಗಿದ್ದು, ರಸ್ತೆಗೆ ಭೂಮಿ ಬಿಟ್ಟುಕೊಂಡುವಂತೆ ಮಾಲೀಕರ ಜತೆ ಬುಧವಾರ ಚರ್ಚಿಸಲಾಗಿದೆ.
ಟಿಡಿಆರ್ ಪ್ರಕ್ರಿಯೆ ಬಗ್ಗೆ ತಹಶೀಲ್ದಾರ್ ಭೂಮಾಲೀಕರಿಗೆ ನೋಟಿಸ್ ಜಾರಿಗೊಳಿಸಿ ಜಾಗದ ದಾಖಲೆ ಪತ್ರಗಳನ್ನು ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಜಾಗದ ವ್ಯತ್ಯಾಸತೆಯನ್ನು ಗುರುತಿಸುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ಸಭೆಗೆ ತಿಳಿಸಿದರು.
ಜಿಲ್ಲಾಧಿಕಾರಿ ಜಿ.ಜಗದೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಅಶೋಕ್, ಸಹಾಯಕ ಕಾರ್ಯಪಾಲಕಎಂಜಿನಿಯರ್ ಜಗದೀಶ್ ಭಟ್, ಪೌರಾಯುಕ್ತ ಆನಂದ್ ಸಿ ಕಲ್ಲೋಳಿಕರ್, ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮೋಹನ್ ರಾಜ್, ನಗರಾಭಿವೃದ್ಧಿ ಪ್ರಾಧಿಕಾರದ ಜಿತೇಶ್ ಇದ್ದರು.
ಗಡಿ ಗುರುತಿಸಿದ ಅಧಿಕಾರಿಗಳು:ಉಡುಪಿಯ ಸಂತೆಕಟ್ಟೆ ಹಾಗೂ ಕಲ್ಯಾಣಪುರ ರಸ್ತೆ ವಿಸ್ತರಣೆ ಮಾಡಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆಯಿಂದ ₹ 3 ಕೋಟಿ ಮಂಜೂರಾಗಿದ್ದು, ಗುರುವಾರ ಶಾಸಕ ಕೆ.ರಘುಪತಿ ಭಟ್ ರಸ್ತೆಯ ಗಡಿಗಳನ್ನು ಗುರುತಿಸುವ ಕಾರ್ಯದಲ್ಲಿ ಭಾಗವಹಿಸಿದ್ದರು.
ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿನೀಡಿದ ಶಾಸಕರು ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಅರಣ್ಯಾಧಿಕಾರಿಗೆ ಸೂಚಿಸಿದರು. ಅಂಗಡಿಗಳನ್ನು ಭಾನುವಾರದೊಳಗೆ ಸ್ಥಳಾಂತರಿಸಬೇಕು. ಬಳಿಕ ಇಲ್ಲಿ ಸುಸಜ್ಜಿತವಾದ ಸರ್ಕಲ್ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ನಗರಸಭಾ ಸದಸ್ಯೆ ಮಂಜುಳಾ ನಾಯಕ್, ಮುಖಂಡರದ ಬಾಲಕೃಷ್ಣ ಶೆಟ್ಟಿ, ಸತೀಶ್, ಉಮೇಶ್ ಅಮೀನ್, ಉಮೇಶ್ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಗದೀಶ್ ಭಟ್, ಸಹಾಯಕ ಎಂಜಿನಿಯರ್ ಗಿರೀಶ್, ವಲಯ ಅರಣ್ಯಾಧಿಕಾರಿ ಕ್ಲಿಪರ್ಡ್ ಲೋಬೊ, ಉಪವಲಯ ಅರಣ್ಯಾಧಿಕಾರಿ ಗುರುರಾಜ್ ಕಾವ್ರಾಡಿ, ಗುತ್ತಿಗೆದಾರ ಮಹೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.