ADVERTISEMENT

ಶಿಕ್ಷಣದ ಜೊತೆಗೆ ಜೀವನ ಮೌಲ್ಯ, ಸಂಸ್ಕಾರ ನೀಡಿ

ಮಾಳದ ಶ್ರೀಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 7:33 IST
Last Updated 31 ಡಿಸೆಂಬರ್ 2025, 7:33 IST
ಕಾರ್ಕಳ ತಾಲ್ಲೂಕಿನ ಮಾಳದ ಶ್ರೀ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿದರು
ಕಾರ್ಕಳ ತಾಲ್ಲೂಕಿನ ಮಾಳದ ಶ್ರೀ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದಲ್ಲಿ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿದರು   

ಕಾರ್ಕಳ: ‘ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಜೊತೆಗೆ ಜೀವನ ಮೌಲ್ಯ ಮತ್ತು ಸಂಸ್ಕಾರ ನೀಡಬೇಕಾಗಿದ್ದು, ಅದನ್ನು ಗುರುಕುಲ ಶಿಕ್ಷಣ ಸಂಸ್ಥೆ ನೀಡುತ್ತಿದೆ’ ಎಂದು ಶಾಸಕ ಸುನಿಲ್ ಕುಮಾರ್ ತಿಳಿಸಿದರು.

ತಾಲ್ಲೂಕಿನ ಮಾಳದ ಶ್ರೀಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವದಲ್ಲಿ‌ ಮಾತನಾಡಿದ ಅವರು, ‘ಶಿಕ್ಷಣ ಎನ್ನುವುದು ವ್ಯಾಪಾರಿಕರಣವಲ್ಲ, ಅದು ಸೇವಾ ಮನೋಭಾವನೆಯ ಪರಿಕಲ್ಪನೆಯಾಗಿದೆ‌. ಶಿಕ್ಷಕರು ಮಕ್ಕಳ ವ್ಯಕ್ತಿತ್ವ ವಿಕಸನದ ರೂವಾರಿಗಳು. ಇಂದು ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಶಿಕ್ಷಕರ ಕೊರತೆ, ವಿದ್ಯಾರ್ಥಿಗಳ ಕೊರತೆ, ಸರ್ಕಾರದ ನೀತಿ ನಿಯಮಾವಳಿಗಳ ನಡುವೆ ಶಾಲೆಗಳನ್ನು ಉಳಿಸಿಕೊಳ್ಳುವುದೇ ಸವಾಲಿನ ಸಂಗತಿಯಾಗಿದೆ. ಈ ಸವಾಲಿನ ನಡುವೆಯೂ ಈ ಸಂಸ್ಥೆ ಗುರುಕುಲ ಶಿಕ್ಷಣ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ’ ಎಂದರು.

ನಮ್ಮ ಅವಿಭಜಿತ ಜಿಲ್ಲೆಗಳಲ್ಲಿ ಸರ್ಕಾರ ಕೊಟ್ಟ ಅನುದಾನಕ್ಕಿಂತ ಸ್ಥಳೀಯ ದಾನಿಗಳ ಕೊಡುಗೆಗಳೇ ಹೆಚ್ಚು. ವ್ಯಕ್ತಿತ್ವ ನಿರ್ಮಾಣ ಮಾಡುವ ಕೆಲಸವನ್ನು ಗುರುಕುಲ ಶಾಲೆ ಮುಂದುವರಿಸಲಿ. ಸಾಂಸ್ಕೃತಿಕವಾಗಿ ನಾವು ಗಟ್ಟಿಯಾದಾಗ ವ್ಯಕ್ತಿತ್ವ ವಿಕಸನದ ಮೂಲಕ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ADVERTISEMENT

ಮುಖ್ಯ ಅತಿಥಿ, ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ನವಕಾಂತ ಗೋರೆ ಮಾತನಾಡಿ, ‘ಭಾರತವು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಬಲ ರಾಷ್ಟ್ರವಾಗಿದೆ. ಪ್ರಸ್ತುತ ವಿಶ್ವದ ಮೂರನೇ ಆರ್ಥಿಕತೆಯ ರಾಷ್ಟ್ರವಾಗಿದ್ದು, ಮುಂದಿನ ಮೂರು ವರ್ಷದೊಳಗೆ ವಿಶ್ವದ ಎರಡನೇ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಬಲಿಷ್ಠ ರಾಷ್ಟ್ರವಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಗಜಾನನ ಮರಾಠೆ ಮಾತನಾಡಿ, ಮಾಳದಂತಹ ಗ್ರಾಮೀಣ ಭಾಗದಲ್ಲಿ ಗುರುಕುಲ ಪರಂಪರೆಯ ಶಿಕ್ಷಣ ಸಂಸ್ಥೆಯು 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಚಾರ. ಸಮಸ್ತ ದಾನಿಗಳ, ಶಿಕ್ಷಣ ಸಂಸ್ಥೆಯ ಪೋಷಕರ ಹಾಗೂ ಊರವರ ಸಹಕಾರದಿಂದ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ. ಪ್ರಾಥಮಿಕ ಶಿಕ್ಷಣದ ಜೊತೆಗೆ ಪ್ರೌಢ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ, ಮುಂದಿನ ಎರಡು ವರ್ಷದೊಳಗೆ ಪ್ರೌಢಶಾಲಾ ವಿಭಾಗವನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಅಧ್ಯಕ್ಷ ಡಾ. ಎಂ.ಪ್ರಭಾಕರ ಜೋಶಿ, ಖ್ಯಾತ ಸಾಹಿತಿ ಹಾಗೂ ವಾಗ್ಮಿ ಎಚ್. ಡುಂಡಿರಾಜ್, ಬಜಗೋಳಿ ಆರೂರ್ಸ್ ಕ್ಲಿನಿಕ್‌ನ ವೈದ್ಯ ಡಾ. ವೆಂಕಟಗಿರಿ ರಾವ್, ಮುಂಬೈ ಉದ್ಯಮಿ ಸತೀಶ್ ಶೆಟ್ಟಿ ದೇವಸ, ಖ್ಯಾತ ವಕೀಲ ನಾರಾಯಣ ಹೆಬ್ಬಾರ್, ನಿವೃತ್ತ ತಹಶೀಲ್ದಾರ್ ಶಾಂತರಾಮ್ ಚಿಪಳೂಣ್ಕರ್, ಪ್ರಗತಿಪರ ಕೃಷಿಕ ಮಾಧವ ಡೊಂಗ್ರೆ, ಗುರುಕುಲ ಶಾಲಾ ಸಂಚಾಲಕ ಸುಧಾಕರ ಡೊಂಗ್ರೆ, ಶರತ್ ಚಂದ್ರ ಮರಾಠೆ ಇದ್ದರು.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ನಾಗಭೂಷಣ ಮರಾಠೆ ಸ್ವಾಗತಿಸಿದರು. ಸತೀಶ್ ಶೆಟ್ಟಿ ವಂದಿಸಿದರು. ರಘುಪತಿ ಕಾಮತ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.